ಮಂತ್ರಾಲಯಕ್ಕೆ ಹೊರಟಿದ್ದ ಆಟೋ ಪಲ್ಟಿಯಾಗಿ ಇಬ್ಬರ ಸಾವು Saaksha Tv
ರಾಯಚೂರು: ಮಂತ್ರಾಲಯಕ್ಕೆ ಹೊರಟಿದ್ದ ಆಟೋವೊಂದು ಪಲ್ಟಿ ಹೊಡೆದು ಇಬ್ಬರು ಪ್ರಯಾಣಿಕರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಾಧವರಂ ಬಳಿ ನಡೆದಿದೆ.
ದೊಡ್ಡಬಳ್ಳಾಪುರ ಮೂಲದ ರಾಘವೇಂದ್ರ(37) ಹಾಗೂ ಹುಬ್ಬಳ್ಳಿ ಮೂಲದ ಅಭಿಷೇಕ್(27) ಮೃತ ದುರ್ದೈವಿಗಳು. ಇವರು ಮೃತ ರಾಘವೇಂದ್ರ ರೈಲ್ವೆ ಇಲಾಖೆ ಸಿಬ್ಬಂದಿಯಾಗಿದ್ದು, ಯಶವಂತಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ಬೆಂಗಳೂರಿನಿಂದ ರೈಲಿನ ಮೂಲಕ ಮಂತ್ರಾಲಯಕ್ಕೆ ಬಂದಿದ್ದರು.
ಇವರು ಮಂತ್ರಾಲಯದಲ್ಲಿ ರಾಯರ ಮಠಕ್ಕೆ ಭಕ್ತರೊಂದಿಗೆ ಆಟೋದಲ್ಲಿ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದಿದೆ. ಇದರಿಂದಾಗಿ ಸ್ಥಳದಲ್ಲೇ ರಾಘವೇಂದ್ರ ಹಾಗೂ ಅಭಿಷೇಕ ಅವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕರ್ನೂಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಮಾಧವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.