ಬೆಂಗಳೂರು:ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಚಿತ್ರದ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿರುವಂತೆಯೇ, ಇದೀಗ ಹೊಸ ವಿವಾದವೊಂದು ಚಿತ್ರವನ್ನು ಸುತ್ತಿಕೊಂಡಿದೆ. ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ವಕೀಲ ಜಗದೀಶ್, ಇದೀಗ ನಟ-ನಿರ್ದೇಶಕ ರಿಷಬ್ ಶೆಟ್ಟಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ‘ಕಾಂತಾರ’ ಸಿನಿಮಾವನ್ನು ಬಹಿಷ್ಕರಿಸುವಂತೆ ಕನ್ನಡಿಗರಿಗೆ ಕರೆ ನೀಡಿದ್ದಾರೆ.
ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವೀಡಿಯೊಗಳ ಮೂಲಕ ಹೋರಾಟ ನಡೆಸುತ್ತಿರುವ ವಕೀಲ ಜಗದೀಶ್, ತಮ್ಮ ಇತ್ತೀಚಿನ ವೀಡಿಯೊದಲ್ಲಿ ರಿಷಬ್ ಶೆಟ್ಟಿ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಇತ್ತೀಚೆಗೆ ತಮ್ಮ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದೇ ಜಗದೀಶ್ ಅವರ ಕೋಪಕ್ಕೆ ಕಾರಣವಾಗಿದೆ.
ವೀಡಿಯೊದಲ್ಲಿ ಜಗದೀಶ್ ಹೇಳಿದ್ದೇನು?
ತಮ್ಮ ಆಕ್ರೋಶಭರಿತ ವೀಡಿಯೊದಲ್ಲಿ ಮಾತನಾಡಿರುವ ಜಗದೀಶ್, “ರಿಷಬ್ ಶೆಟ್ಟಿ ತನ್ನ ಫ್ಯಾಮಿಲಿ ಸಮೇತ ಧರ್ಮಸ್ಥಳಕ್ಕೆ ಹೋಗಿದ್ದಾನೆ. ಇಂಥವನ ಚಿತ್ರವನ್ನು ಬೆಂಬಲಿಸಲು ನಿಮಗೆಲ್ಲ ಬುದ್ಧಿ ಇಲ್ವಾ? ಒಬ್ಬ ಬಡ ಹುಡುಗಿಯ ಅತ್ಯಾಚಾರ, ಕೊಲೆಯಾಗಿದೆ. ಆ ನೋವಿನ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ವ್ಯಕ್ತಿಯ ಸಿನಿಮಾವನ್ನು ನೋಡುವ ನೀವು ಎಂಥ ಯಮಘಾತುಕರು,” ಎಂದು ಪ್ರೇಕ್ಷಕರ ವಿರುದ್ಧವೂ ಹರಿಹಾಯ್ದಿದ್ದಾರೆ.
“ಅವನು ಯಾರ ಜೊತೆ ಹೋಗಿ ಫೋಟೋ ತೆಗೆಸಿಕೊಂಡಿದ್ದಾನೆ ಎಂದು ನಾನು ಹೇಳುವುದಿಲ್ಲ. ಆದರೆ ಇದರ ಮೂಲಕ ಜನರಿಗೆ ಯಾವ ಸಂದೇಶವನ್ನು ಕೊಡಲು ಹೊರಟಿದ್ದಾನೆ? ನಾವೆಲ್ಲ ಏನು ದಡ್ಡರಾ? ನಮ್ಮನ್ನು ಗೂಬೆ ಮಾಡಿ, ಹಣ ಮಾಡಿಕೊಂಡು ಅವನು ಕುಟುಂಬದ ಜೊತೆ ಯಾರ ಬಳಿ ಹೋಗಿ ಕೂತಿದ್ದಾನೆ ಎಂಬುದನ್ನು ಒಮ್ಮೆ ಯೋಚನೆ ಮಾಡಿ,” ಎಂದು ರಿಷಬ್ ಶೆಟ್ಟಿ ವಿರುದ್ಧ ಕಿಡಿಕಾರಿದ್ದಾರೆ.
ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವಿಲ್ಲ
‘ಕಾಂತಾರ’ ಸಿನಿಮಾದಲ್ಲಿ ಸಮಾಜಕ್ಕೆ ಪೂರಕವಾದ ಯಾವುದೇ ಉತ್ತಮ ಸಂದೇಶವಿಲ್ಲ ಎಂದು ಆರೋಪಿಸಿರುವ ಜಗದೀಶ್, “ಆ ಕಿತ್ತೋಗಿರೋ ಕಾಂತಾರ ಸಿನಿಮಾ ನೋಡಬೇಡಿ. ಅದರಲ್ಲಿ ಸಮಾಜಕ್ಕೆ ಬೇಕಾದ ಯಾವ ಸಂದೇಶವೂ ಇಲ್ಲ. ಕೇವಲ ಮನರಂಜನೆಯ ಹೆಸರಿನಲ್ಲಿ ನಿಮ್ಮನ್ನು ಮರಳು ಮಾಡಿ ಹಣ ಗಳಿಸಲಾಗುತ್ತಿದೆ. ಆದರೆ, ಆ ಸಿನಿಮಾದ ನಾಯಕ ಸಮಾಜದ ಗಂಭೀರ ಸಮಸ್ಯೆಯ ಬಗ್ಗೆ ಮೌನ ವಹಿಸಿ, ಆರೋಪ ಹೊತ್ತಿರುವವರ ಜೊತೆ ಕಾಣಿಸಿಕೊಳ್ಳುತ್ತಾನೆ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು,” ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ವಕೀಲ ಜಗದೀಶ್ ಅವರ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಸೌಜನ್ಯಾ ಪರ ಹೋರಾಟಗಾರರು ಜಗದೀಶ್ ಹೇಳಿಕೆಯನ್ನು ಬೆಂಬಲಿಸಿದರೆ, ರಿಷಬ್ ಶೆಟ್ಟಿ ಅಭಿಮಾನಿಗಳು ಇದು ವೈಯಕ್ತಿಕ ನಂಬಿಕೆಯ ವಿಚಾರ, ಅದನ್ನು ವಿವಾದ ಮಾಡುವುದು ಸರಿಯಲ್ಲ ಎಂದು ವಾದಿಸುತ್ತಿದ್ದಾರೆ. ಈ ವಿವಾದ ‘ಕಾಂತಾರ ಚಾಪ್ಟರ್ 1’ ಚಿತ್ರದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.







