ಮಾಲೆ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳಾಗಿ ಮಾತನಾಡಿದ ಮಾಲ್ಡೀವ್ಸ್ ನ ಮೂವರು ಸಚಿವರನ್ನು ವಜಾ ಗೊಳಿಸಲಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ದ್ವೀಪಕ್ಕೆ ಭೇಟಿ ನೀಡಿ ಫೋಟೋ ಶೂಟ್ ಹಾಗೂ ವಿಡಿಯೋದಲ್ಲಿ ಭಾಗವಹಿಸಿದ್ದರು. ಪ್ರಧಾನಿ ಅವರು ಅಲ್ಲಿಗೆ ಭೇಟಿ ನೀಡಿದ್ದೇ ತಡ ಮಾಲ್ಡೀವ್ಸ್ ಬೈಕಾಟ್ ಟ್ರೆಂಡ್ ಭಾರತದಲ್ಲಿ ಹೆಚ್ಚಾಯಿತು. ಎಷ್ಟೋ ಜನರು ಮಾಲ್ಡೀವ್ಸ್ ಟೂರ್ ರದ್ದು ಮಾಡಿ, ಲಕ್ಷ ದ್ವೀಪದತ್ತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದು ಮಾಲ್ಡೀವ್ಸ್ ಗೆ ತೀವ್ರ ಹಿನ್ನಡೆಯಾಗುವಂತಾಯಿತು. ಆದರೂ ಸುಮ್ಮನಿರದ ಮಾಲ್ಡೀವ್ಸ್ ನ ಕೆಲವು ಸಚಿವರು, ಪ್ರಧಾನಿ ಹಾಗೂ ಭಾರತದ ವಿರುದ್ಧ ಅವಹೇಳನಕಾರಿ ಮಾತು ಆಡಿದ್ದಾರೆ.
ಈ ರೀತಿ ಅವಹೇಳನಕಾರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮೂವರು ಸಚಿವರನ್ನು ಭಾನುವಾರ ಅಲ್ಲಿನ ಸರ್ಕಾರ ಅಮಾನತುಗೊಳಿಸಿದೆ. ಮಾರಿಯಂ ಶಿಯುನಾ, ಮಾಲ್ಶಾ ಮತ್ತು ಹಸನ್ ಜಿಹಾನ್ ಅಮಾನತುಗೊಂಡ ಸಚಿವರು ಎನ್ನಲಾಗಿದೆ. ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್ ಸಚಿವರಿಂದ ಅವಹೇಳನಕಾರಿ ಹೇಳಿಕೆ ಬಂದಿದ್ದಕ್ಕೆ ಭಾರತ ಆಕ್ರೋಶ ವ್ಯಕ್ತಪಡಿಸಿ, ಆಕ್ಷೇಪಿಸಿತ್ತು. ರಾಜತಾಂತ್ರಿಕ ಮಟ್ಟದಲ್ಲಿ ಭಾರತ ಸರ್ಕಾರ ಈ ಬಗ್ಗೆ ತನ್ನ ಧ್ವನಿ ಎತ್ತಿರುವುದು ತಿಳಿದು ಬಂದಿದೆ.








