ಮಕ್ಕಳಲ್ಲಿ ಅಪೌಷ್ಟಿಕತೆ ಮೊಟ್ಟೆ, ಬಾಳೆಹಣ್ಣು ಕೊಡಲು ನಿರ್ಧರಿಸಿದ ಶಿಕ್ಷಣ ಇಲಾಖೆ
ರಾಜ್ಯದ ಕೆಲ ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿರುವ ಕಾರಣಕ್ಕೆ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಬಾಳೆ ಹಣ್ಣು ಮತ್ತು ಮೊಟ್ಟೆ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಯಾದಗಿರಿ, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ರಕ್ತ ಹೀನತೆ ಮತ್ತು ಪೋಷಕಾಂಶಗಳ ನ್ಯೂನ್ಯತೆ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಜೊತೆಗೆ ತಿಂಗಳಿಗೆ 12 ಬೆಯಿಸಿದ ಮೊಟ್ಟೆ ಮತ್ತು ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಬೇಕು ಶಿಕ್ಷಣ ಇಲಾಖೆ ಆಯುಕ್ತ ಆರ್ ವಿಶಾಲ್ ಆದೇಶ ಹೊರಡಿಸಿದ್ದಾರೆ.
ಅಪೌಷ್ಟಿಕತೆ ಕಂಡು ಬಂದಿರುವ 7 ಜಿಲ್ಲೆಗಳನ್ನ ಗುರುತಿಸಿ 1 ರಿಂದ 8 ತರಗತಿಯ 14,44,332 ಮಕ್ಕಳಿಗೆ ಮೊಟ್ಟೆ ವಿತರಣೆಯನ್ನ ಹಮ್ಮಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್- ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60ರಷ್ಟು ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ಹಂಚಿಕೆ ಮಾಡಿಕೊಂಡು ಈ ಯೋಜನೆಯನ್ನ ಪಾಲಿಸುತ್ತಿವೆ.
ಒಂದು ಮೊಟ್ಟೆಗೆ 6 ರೂ ಮೀರದಂತೆ ಅಥವಾ ಅದೇ ಮೊತ್ತಕ್ಕೆ ಒಂದು ಅಥವಾ ಎರಡು ಬಾಳೆಹಣ್ಣು ಖರೀದಿ ಮಾಡುವಂತೆ 39.86 ಕೋಟಿ ಅನುದಾನವನ್ನ ಮೀಸಲಿಡಲಾಗಿದೆ. ಮೊಟ್ಟೆ ವಿತರಣೆಗು ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರ ಅನುಮತಿ ಪಡೆಯುವುದು ಕಡ್ಡಾಯ.