ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ
ರಾಯಚೂರು: ಬಣ್ಣ ಎರಚಾಟದ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣ ಗ್ರಾಮದಲ್ಲಿ ನಡೆದಿದೆ.
ಯುಗಾದಿ ಹಬ್ಬದ ಪ್ರಯುಕ್ತ ಡಿಜೆ ಸೌಂಡ್ ಹಾಕಿಕೊಂಡು ಮೆರವಣಿಗೆ ಮಾಡುತ್ತಿದ್ದಾಗ, ಮಸೀದಿ ಬಳಿ ಡಿಜೆ ಹಾಕಿ ಕುಣಿದಿದ್ದಕ್ಕೆ ಗಲಾಟೆ ನಡೆದಿದೆ. ಗಲಾಟೆ ತೀರ್ವಸ್ವರೂಪ ಪಡೆದುಕೊಂಡಿದ್ದು, ಹೊಡೆದಾಡಿಕೊಂಡಿದ್ದಾರೆ.
ಗಲಾಟೆ ಮಾಹಿತಿ ತಿಳಿದು ಕೂಡಲೇ ಪೊಲೀಸರು ಗ್ರಾಮಕ್ಕೆ ಬಂದಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಡಿಆರ್ ತುಕಡಿ ಪೊಲೀಸ್ ವ್ಯಾನ್ ಸೇರಿದಂತೆ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಯುಗಾದಿ ಹಬ್ಬದ ಕರಿ ಹಿನ್ನೆಲೆ ಜಿಲ್ಲೆಯಲ್ಲಿ ಓಕಳಿಯಾಟ ಜೋರಾಗಿ ನಡೆದಿದೆ. ಮಸ್ಕಿ, ಸಿಂಧನೂರು, ಲಿಂಗಸುಗೂರು ಸೇರಿ ಜಿಲ್ಲೆಯ ಹಲವೆಡೆ ಬಣ್ಣದ ಹಬ್ಬ ಆಚರಣೆ ಮಾಡಲಾಗುತ್ತಿದೆ. ಹೋಳಿ ಹಾಗೂ ಯುಗಾದಿ ಎರಡು ಸಂದರ್ಭದಲ್ಲೂ ಜಿಲ್ಲೆಯಲ್ಲಿ ರಂಗೀನಾಟ ನಡೆಯುತ್ತದೆ. ವಯಸ್ಸಿನ ಭೇದವಿಲ್ಲದೆ ರಂಗು ಎರಚಿ ಜನ ಸಂಭ್ರಮಿಸುತ್ತಾರೆ. ಬೇವು, ಬೆಲ್ಲ ಸವಿದ ಬಳಿಕ ಬಣ್ಣದ ಹಬ್ಬದ ಆಚರಣೆ ನಡೆಯುತ್ತದೆ.