ದೇಶದ ಸಂಪತ್ತು ಬರೀ ಇಬ್ಬರಿಗೆ ಮಾತ್ರ ಹಂಚಿಕೆ : ಐವನ್ ಡಿಸೋಜ
ಮಂಗಳೂರು : ದೇಶದ ಸಂಪತ್ತು ಬರೀ ಇಬ್ಬರಿಗೆ ಮಾತ್ರ ಹಂಚಿಹೋಗಿದ್ದು, ‘we two and we are for two’ ಮೋದಿ, ಅಮಿತ್ ಶಾ ಹಾಗೂ ಅಂಬಾನಿ, ಅದಾನಿಯವರ ಸಂಪತ್ತು ವೃದ್ಧಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪ ಮಾಡಿದ್ದಾರೆ.
ತೈಲ ಬೆಲೆ ಏರಿಕೆ ವಿಚಾರವಾಗಿ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡಜನರ ಹಣವನ್ನು ಲೂಟಿ ಮಾಡಲು ಹೊರಟಿವೆ. ಒಂದು ರೀತಿಯಲ್ಲಿ ಪಿಕ್ ಪಾಕೆಟ್ ಮಾಡಲು ಹೊರಟಿದ್ದಾರೆ. ಪೆಟ್ರೋಲ್ ಬೆಲೆ 100 ರೂ.ಗೆ ತಲುಪಿದ್ದು, ದೇಶದ ಇತಿಹಾಸದಲ್ಲಿಯೇ ಪ್ರಥಮ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇನ್ನು ಈ ಹಿಂದಿನ ಸರ್ಕಾರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದಾಗ ಸಬ್ಸಿಡಿಯನ್ನು ಕೊಟ್ಟು ಬೆಲೆಯನ್ನು ನಿಯಂತ್ರಣ ಮಾಡುತ್ತಿತ್ತು. ಬ್ಯಾರೆಲ್ಗೆ 140 ಡಾಲರ್ ಇದ್ದಾಗಲೂ ಪೆಟ್ರೋಲ್, ಡೀಸೆಲ್ ದರ 70 ರೂ. ದಾಟಲು ಬಿಡುತ್ತಿರಲಿಲ್ಲ. ತೈಲ ಬೆಲೆ ಏರಿಕೆ ಎಲ್ಲಾ ವರ್ಗದ ಜನರಿಗೆ ಹೊರೆಯಾಗುತ್ತದೆ. ಇದರಿಂದ ಎಲ್ಲಾ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಆದ್ದರಿಂದ ದರ ನಿಯಂತ್ರಣ ಮಾಡಬೇಕಾದರೆ ಕೇಂದ್ರ ಸರ್ಕಾರ ಮಾಡಬೇಕಾದ ಮೊದಲ ಕೆಲಸ ತೈಲ ಬೆಲೆ ಹಾಗೂ ಅಡುಗೆ ಅನಿಲ ದರವನ್ನು ಹತೋಟಿಯಲ್ಲಿಡಬೇಕು ಎಂದು ಒತ್ತಾಯಿಸಿದರು.
ದೇಶದ ಸಂಪತ್ತು ಬರೀ ಎರಡು ಮಂದಿಗೆ ಮಾತ್ರ ಹಂಚಿಹೋಗಿದ್ದು, ‘we two and we are for two’ ಮೋದಿ, ಅಮಿತ್ ಶಾ ಹಾಗೂ ಅಂಬಾನಿ, ಅದಾನಿಯವರ ಸಂಪತ್ತು ವೃದ್ಧಿಯಾಗಿದೆ ಎಂದು ಆರೋಪಿಸಿದರು.