ಹುಚ್ಚು ಹಿಡಿದವರಿಗೆ ಜಗತ್ತೆಲ್ಲಾ ಹುಚ್ಚರ ತರ ಕಾಣುತ್ತೆ : ಅರಗ ಜ್ಞಾನೇಂದ್ರ
ಯಾದಗಿರಿ : ಹುಚ್ಚು ಹಿಡಿದವರಿಗೆ ಜಗತ್ತೆಲ್ಲಾ ಹುಚ್ಚರ ತರ ಕಾಣುತ್ತೆ ಎಂದು ಗೃಹ ಸಚಿವರಿಗೆ ಹುಚ್ಚು ಹಿಡಿದಿದೆ ಎನ್ನುವ ಡಿಕೆಶಿ ಹೇಳಿಕೆಗೆ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಜನ ಸ್ವರಾಜ್ ಸಮಾವೇಶ ಹಮ್ಮಿಕೊಂಡಿದೆ.
ಅದರ ಭಾಗವಾಗಿ ಯಾದಗಿರಿನಗರದ ವನಿಕೇರಿ ಲೇಔಟ್ ನಲ್ಲಿ ಬಹಿರಂಗ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಆರೋಪಗಳಿಗೆ ಟಾಂಗ್ ನೀಡುತ್ತಾ ಭಾಷಣ ಆರಂಭಿಸಿದ ಗೃಹ ಸಚಿವರು, ಬಿಟ್ ಕಾಯಿನ್ ಪ್ರಕರಣದ ಆರೋಪಿ, ಹ್ಯಾಕರ್ ಶ್ರೀಕಿ ವಿದೇಶದಿಂದ ಡ್ರಗ್ಸ್ ತಂದು ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಕೊಡುತ್ತಿದ್ದ. ಹೀಗಾಗಿ, ಕಾಂಗ್ರೆಸ್ ಮುಖಂಡರು ಹಾಗೂ ಅವರ ಮಕ್ಕಳೊಡನೆ ಶ್ರೀಕಿಗೆ ಸಂಪರ್ಕವಿತ್ತು ಎಂದು ಆರೋಪಿಸಿದರು.
ಅಲ್ಲದೆ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹ್ಯಾಕಿಂಗ್ ಆಗಿತ್ತು. ನಲಪಾಡ್ ಗೆ ಸಿಕ್ಕಾಪಟ್ಟೆ ವೋಟಾಗಿತ್ತು. ಮುಂದೇ ಸಿಎಂ ಆಗಬೇಕೆನ್ನುವ ವ್ಯಕ್ತಿಗೆ ಇದರ ಬಗ್ಗೆ ಭಯವಿದೆ ಎಂದು ಕುಟುಕಿದ ಅವರು, ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.