ಒನಕೆಓಬವ್ವ ಜಯಂತಿ ಶುಭಾಶಯ ಹೇಳೋದಕ್ಕೆ ಸಿದ್ದರಾಮಯ್ಯಗೆ ಧೈರ್ಯವಿದೆಯೇ
ಬೆಂಗಳೂರು : ವೀರವನಿತೆ #ಒನಕೆಓಬವ್ವ ಜಯಂತಿ ಪ್ರಯುಕ್ತ ಶುಭಾಶಯ ಹೇಳುವುದಕ್ಕೆ ಸಿದ್ದರಾಮಯ್ಯ ಅವರಿಗೆ ಧೈರ್ಯವಿದೆಯೇ ಎಂದು ರಾಜ್ಯ ಬಿಜೆಪಿ ಘಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕುಟುಕಿದೆ.
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಟ್ವೀಟ್ ಗಳಿಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದೆ.
ರಾಜ್ಯ ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ..
ಹೈದರಾಲಿ ಮತ್ತು ಟಿಪ್ಪು ಅಪ್ರತಿಮ ದೇಶಪ್ರೇಮಿಗಳು ಎನ್ನುವ ಸಿದ್ದರಾಮಯ್ಯನವರೇ, ವೀರವನಿತೆ ಓಬವ್ವ ಹಾಗೂ ಚಿತ್ರದುರ್ಗದ ಮದಕರಿ ನಾಯಕರಿಗೆ ಯಾವ ಪಟ್ಟಕಟ್ಟುತ್ತೀರಿ?ಟಿಪ್ಪುವನ್ನು ವೈಭವೀಕರಿಸುವ ನಿಮಗೆ ಓಬವ್ವ ಹಾಗೂ ಮದಕರಿ ನಾಯಕನ ಶೌರ್ಯ ಕಾಣಿಸುವುದಿಲ್ಲವೇ?
ಸಿದ್ದರಾಮಯ್ಯನವರೇ, ನೀವು ವೈಭವೀಕರಿಸುವ ಹೈದರಾಲಿ ಹಾಗೂ ಟಿಪ್ಪುವಿನ ಹೇಡಿತನ ಹಾಗೂ ಮೋಸವನ್ನು #ಒನಕೆಓಬವ್ವ ಆ ಕಾಲದಲ್ಲೇ ಬಯಲು ಮಾಡಿದ್ದಳು. ಚಿತ್ರದುರ್ಗದ ಕೋಟೆ ರಕ್ಷಣೆಗಾಗಿ ಏಕಾಂಗಿಯಾಗಿ ಒನಕೆ ಹಿಡಿದು ಹೋರಾಡಿದ ಈ ಹೆಣ್ಣುಮಗಳ ಶೌರ್ಯಕ್ಕೂ, ಹೈದರಾಲಿ, ಟಿಪ್ಪುವಿನ ಕ್ರೌರ್ಯಕ್ಕೂ ಹೋಲಿಕೆ ಸಾಧ್ಯವೇ?
ಸಿದ್ದರಾಮಯ್ಯ ಅವರೇ, ನಿಮಗೆ ಓಲೈಕೆ ರಾಜಕಾರಣ ಮಾತ್ರ ಮುಖ್ಯ. ಹೀಗಾಗಿ ವೀರಾಗ್ರಣಿ #ಒನಕೆಓಬವ್ವ ಹಾಗೂ ಮದಕರಿ ನಾಯಕರ ಜಯಂತಿಯ ಬದಲು ಟಿಪ್ಪು ಜಯಂತಿ ಆಚರಿಸಿದಿರಿ. ನೀವೊಬ್ಬ ಹಿಂದು ವಿರೋಧಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.
ಟಿಪ್ಪು ಒಬ್ಬ ವೀರ… ! ಇದು ಸಿದ್ದರಾಮಯ್ಯನವರ ವ್ಯಾಖ್ಯಾನ. ಈ ರಣ ಹೇಡಿಯನ್ನು ಚಿತ್ರದುರ್ಗದ #ಮದಕರಿನಾಯಕ ಹೆಡೆಮುರಿ ಕಟ್ಟಿದ್ದ ಇತಿಹಾಸ ನಿಮಗೆ ಗೊತ್ತೇ? ಸಿದ್ದರಾಮಯ್ಯ ಅವರೇ, ಚರಿತ್ರೆಯ ಆಯ್ದ ಭಾಗವನ್ನು ಮಾತ್ರ ಓದುವ ಹವ್ಯಾಸ ಒಳ್ಳೆಯದಲ್ಲ.
ವೀರವನಿತೆ #ಒನಕೆಓಬವ್ವ ಜಯಂತಿ ಪ್ರಯುಕ್ತ ಶುಭಾಶಯ ಹೇಳುವುದಕ್ಕೆ ಸಿದ್ದರಾಮಯ್ಯ ಅವರಿಗೆ ಧೈರ್ಯವಿದೆಯೇ? ಸಿದ್ದರಾಮಯ್ಯನವರೇ, ಟಿಪ್ಪು ಜಯಂತಿಯ ಮೋಜಿನಲ್ಲಿ ಚಾಮರಾಜಪೇಟೆಯಲ್ಲಿ ಕಳೆದು ಹೋಗಬೇಡಿ.
ಸಿದ್ದರಾಮಯ್ಯನವರೇ, ಇತಿಹಾಸದ ಪುಸ್ತಕ ಓದಿ, ಇತಿಹಾಸ ತಿರುಚಿದವರ ಬರಹವನ್ನಲ್ಲ. ಮೈಸೂರು ರಾಜರು, ಮಯೂರ, ಗಂಗರಸರು, ರಾಷ್ಟ್ರಕೂಟರು, ಹೊಯ್ಸಳರು ಮಠಮಂದಿರ ಕಟ್ಟಿ ನಾಡನ್ನು ಸುಭೀಕ್ಷವಾಗಿಟ್ಟಿದ್ದನ್ನು ಏಕೆ ಮರೆ ಮಾಚುವಿರಿ ಸಿದ್ದರಾಮಯ್ಯ? ಟಿಪ್ಪು ಜಯಂತಿಯನ್ನು ಜನ ತಿರಸ್ಕರಿಸಿದರೂ, ಮುಸ್ಲಿಂ ಸಮುದಾಯವೇ ಟಿಪ್ಪು ಜಯಂತಿಯ ಅಗತ್ಯವಿಲ್ಲವೆಂದರೂ ಟಿಪ್ಪುವನ್ನು ಆರಾಧಿಸುತ್ತಿರುವ ಮರ್ಮವೇನು ಎಂದು ಪ್ರಶ್ನಿಸಿದೆ.