ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು
ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಸಿಡಿದೆದ್ದಿದ್ದಾರೆ. ಆರನೇ ವೇತನ ಆಯೋಗ ಸೇರಿದಂತೆ 9 ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಬೆಂಗಳೂರು ಚಲೋ ಚಳವಳಿ ಹಮ್ಮಿಕೊಂಡಿದ್ದಾರೆ.
ಸಾರಿಗೆ ನೌಕರರು ಬೇಡಿಕೆ ಈಡೇರಿಸದ ಸರ್ಕಾರದ ಧೋರಣೆಗೆ ಖಂಡಿಸಿ ಇಂದು ನೌಕರರು ಸತ್ಯಾಗ್ರಹ ಹಾಗೂ ಸಮಾವೇಶ ನಡೆಸುತ್ತಿದ್ದಾರೆ. ಇದರಲ್ಲಿ ಸಾವಿರಾರು ನೌಕರರು ಭಾಗಿಯಾಗಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನೌಕರರು ಸತ್ಯಾಗ್ರಹ ನಡೆಸುತ್ತಿದ್ದಾರೆ.
ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್ ನಲ್ಲಿ ನಾಲ್ಕು ದಿನ ನೌಕರರು ಮುಷ್ಕರ ನಡೆಸಿದ್ದರು. ಮೂರು ತಿಂಗಳು ಆದರೂ ನೌಕರರ ಬೇಡಿಕೆ ಈಡೇರಿಸದ ಹಿನ್ನೆಲೆ ಹಾಗೂ ರಾಜ್ಯ ಬಜೆಟ್ ಹಿನ್ನಲೆ ಸರ್ಕಾರದ ಗಮನ ಸೆಳೆಯಲು ಒಂದು ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇನ್ನು ಈ ಸತ್ಯಾಗ್ರಹ ಸಮಾಲೋಚನಾ ಸಭೆಯಲ್ಲಿ ನಾಲ್ಕೂ ನಿಗಮಗಳ ನೌಕರರು ಭಾಗಿಯಾಗಿದ್ದಾರೆ. ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ರಜೆ ಹಾಗೂ ವಾರದ ರಜೆ ಇರೋ ನೌಕರರು ಮಾತ್ರ ಸಮಾಲೋಚನ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇತ್ತ ಇನ್ನೊಂದೆಡೆ ಸಾರಿಗೆ ನೌಕರರ ಒಗ್ಗಟ್ಟು ಒಡೆಯಲು ಸರ್ಕಾರ ಮುಂದಾಗಿದ್ಯಾ ಅನ್ನೋ ಪ್ರಶ್ನೆ ಈಗ ಉದ್ಭವವಾಗಿದೆ. ಯಾಕೆಂದ್ರೆ ಯಾರಿಗೂ ರಜೆ ನೀಡದಂತೆ ಡಿಪೋ ಮ್ಯಾನೇಜರ್ ಗಳಿಗೆ ಸೂಚನೆ ನೀಡಲಾಗಿದೆ.