ಚತುರ್ಮುಖ ಲಿಂಗಕ್ಕೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಹುಬ್ಬಳ್ಳಿ: ನಾಡಿನಲ್ಲಿ ಹೊಸ ವರ್ಷ ಯುಗಾದಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇಂದು ರಾಜ್ಯದ ವಿವಿಧ ದೇವಸ್ಥನಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ. ಅದರಂತೆ ವಾಣಿಜ್ಯ ನಗರಿ ಹುಬ್ಬಳಿಯ ಉಣಕಲ್ ನ ಸಂದ್ರಮೌಳೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಮುಂಜಾನೆ ಸೂರ್ಯರಶ್ಮಿ ಸ್ಪರ್ಶ ಮಾಡಿದೆ.
ಬೆಳಗ್ಗೆ 6-45 ರಿಂದ 7 ಗಂಟೆಯವರೆಗೆ ಈ ಚತುರ್ಮುಖ ಲಿಂಗಕ್ಕೆ ಸೂರ್ಯನ ರಶ್ಮಿ ಸ್ಪರ್ಶಿಸುತ್ತಿದ್ದು, ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಶತಮಾನಗಳಷ್ಟು ಹಳೆಯದಾದ ಚಂದ್ರಮೌಳೇಶ್ವರನ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶಿಸುವುದರ ದರ್ಶನ ಪಡೆಯುತ್ತಾರೆ.
ಇದು 12 ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಕಟ್ಟಲಾದ ದೇವಸ್ಥಾನವಾಗಿದ್ದು, ಚತುರ್ಮುಖ ಶಿವಲಿಂಗ ಇಲ್ಲಿನ ವಿಶೇಷವಾಗಿದೆ. ಯುಗಾದಿ ಹಬ್ಬದ ದಿನ ಬೆಳಗ್ಗೆ 6-45 ರಿಂದ 7 ಗಂಟೆಯವರೆಗೆ ಈ ಚತುರ್ಮುಖ ಲಿಂಗದ ಮೇಲೆ ಸೂರ್ಯರಶ್ಮಿ ಬೀಳುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಅನೇಕ ಭಕ್ತರು ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ಇದಾದ ಬಳಿಕ ಭಕ್ತರು ಬೇವು-ಬೆಲ್ಲ ಸವಿದು ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.