ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದು ಸಾಬೀತಾದಲ್ಲಿ ರಾಜಕೀಯ ನಿವೃತ್ತಿ
ಮಂಗಳೂರು : ಲಸಿಕೆಯ ಬಗ್ಗೆ ನಾನು ತಪ್ಪು ಅಭಿಪ್ರಾಯ ಬರುವ ಒಂದು ಹೇಳಿಕೆ ನೀಡಿರುವುದನ್ನು ಸಾಬೀತುಪಡಿಸಿದಲ್ಲಿ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಶಾಸಕ ಯು.ಟಿ.ಖಾದರ್ ಸವಾಲ್ ಹಾಕಿದ್ದಾರೆ.
ಕೊರೊನಾ ಲಸಿಕೆ ವಿಚಾರವಾಗಿ ಕಾಂಗ್ರೆಸ್ ನವರು ಸುಳ್ಳು ಆರೋಪ ಮಾಡಿ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂಬ ಬಿಜೆಪಿಯವರ ಆರೋಪದ ಬಗ್ಗೆ ನಗರ ಸಕ್ರ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಸರ್ಕಾರ ಲಸಿಕೆಯ ವಿಜ್ಞಾನ, ಲಾಜಿಕ್ ಮಾತನಾಡುವುದು ಬಿಟ್ಟು ರಾಜಕೀಯ ಮಾತನಾಡುತ್ತಿದೆ.
ಆದ್ದರಿಂದ ಜನಪ್ರತಿನಿಧಿಗಳಿಗೆ ನನ್ನ ಕಳಕಳಿಯ ವಿನಂತಿಯೇನೆಂದರೆ ಲಸಿಕೆಯ ಬಗ್ಗೆ ರಾಜಕೀಯ ಮಾಡುವುದು ನಿಲ್ಲಿಸಿ, ಲಸಿಕೆಯ ವಿಜ್ಞಾನ, ಲಾಜಿಕ್ ಬಗ್ಗೆ ಮಾತನಾಡಿ ಎಂದು ಸಲಹೆ ನೀಡಿದರು.
ಲಸಿಕೆ ವಿಚಾರವಾಗಿ ಕಾಂಗ್ರೆಸ್ ನವರು ದಾರಿ ತಪ್ಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಲಸಿಕೆಯ ಬಗ್ಗೆ ನಾನು ತಪ್ಪು ಅಭಿಪ್ರಾಯ ಬರುವ ಒಂದು ಹೇಳಿಕೆ ನೀಡಿರುವುದನ್ನು ಇವರು ಸಾಬೀತುಪಡಿಸಿದಲ್ಲಿ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದರು.
ಇನ್ನು ಜನರ ದಿಕ್ಕು ತಪ್ಪಿಸಲು ಬಿಜೆಪಿಗರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಜನರಿಗೆ ಲಸಿಕೆ ಕೊಡಲು ಸಾಧ್ಯವಾಗಿಲ್ಲ.
ಖಾಸಗಿಯವರಿಗೆ ಲಸಿಕೆ ದೊರಕಿದರೂ ಸರ್ಕಾರದವರಿಗೆ ದೊರಕುತ್ತಿಲ್ಲ. ದೇಶದಲ್ಲಿ ದಿವಸಕ್ಕೆ ಎಷ್ಟು ಲಸಿಕೆ ತಯಾರಾಗುತ್ತಿದೆ. ಈ ಲಸಿಕೆಯಲ್ಲಿ ಯಾರಿಗೆ ಎಷ್ಟೆಷ್ಟು ಸರಬರಾಜು ಆಗುತ್ತದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಲಿ ಎಂದು ಸವಾಲ್ ಹಾಕಿದರು.