ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ವಾಣಿ ಜಯರಾಂ ನಿಧನ : ಸಾವಿನ ಬಗ್ಗೆ ಅನುಮಾನ…
ಭಾರತದ ಖ್ಯಾತ ಗಾಯಕಿ, ರಾಷ್ಟ್ರಪ್ರಶಸ್ತಿ ವಿಜೇತ ವಾಣಿ ಜಯರಾಂ ಅವರು ಚೆನೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ 78 ವಯಸ್ಸಿನ ವಾಣಿ ಜಯರಾಮ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಇವರಿಗೆ ಭಾರತ ಸರ್ಕಾರವು 2023ರ ಗಣರಾಜ್ಯೋತ್ಸವದ ಮೊದಲು ಪದ್ಮಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಇದೀಗ ಅವರ ನಿಧನದ ಸುದ್ದಿಯಿಂದ ಚಿತ್ರರಂಗ ಆಘಾತಕ್ಕೊಳಗಾಗಿದೆ.
ಆದರೆ ಗಾಯಕಿಯ ಸಾವಿನ ಬಗ್ಗೆ ಹಲವು ಅನುಮಾನಗಳು ಉಂಟಾಗಿವೆ. ಗಾಯಕಿಯ ಮುಖದ ಮೇಲೆ ಗಾಯಗಳಾಗಿವೆ ಎಂದು ಸೇವಕಿ ಪೊಲೀಸರ ಬಗ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಮನೆ ಕೆಲಸದವರು ನೀಡಿದ ವಿವರದ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಧ್ಯಕ್ಕೆ ಗಾಯಕಿಯ ಮನೆಯನ್ನ ವಶಪಡಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ.
ಇಂದು ಬೆಳಗ್ಗೆ 11 ಗಂಟೆಗೆ ವಾಣಿ ಜಯರಾಂ ಕೆಲಕಾಲ ಬಾಗಿಲು ತೆರೆಯದೇ ಇದ್ದಾಗ ಆಕೆಯ ಕೆಲಸದಾಕೆ ಚೆನ್ನೈನ ಮೈಲಾಪುರದಲ್ಲಿರುವ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸ್ವಲ್ಪ ಹೊತ್ತಿನ ಬಳಿಕ ಸಂಬಂಧಿಕರು ಬಾಗಿಲು ಒಡೆದು ನೋಡಿದಾಗ ವಾಣಿ ಜಯರಾಮ್ ತೀವ್ರವಾಗಿ ಗಾಯಗೊಂಡು ಗಾಜಿನ ಮೇಜಿನ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ವಾಣಿ ಜಯರಾಂ ಅವರ ಮುಖಕ್ಕೆ ಯಾರೋ ಗಂಭೀರವಾಗಿ ಹೊಡೆದಂತೆ ಗಂಭೀರ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ, ಸಂಬಂಧಿಕರು ಕೂಡಲೇ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವಾಣಿ ಜಯರಾಂ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಸದ್ಯ ವಾಣಿ ಜಯರಾಮ್ ಸಾವಿನ ತನಿಖೆ ನಡೆಯುತ್ತಿದೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.
Vani Jairam: National award winning singer Vani Jairam passes away: Doubts about death…