ಕೇದಾರನಾಥದಲ್ಲಿ VIP ಪ್ರವೇಶ ಬಂದ್ – ವಿಐಪಿಗಳೂ ಸಾಮಾನ್ಯರಂತೆ ಭೇಟಿ
ಉತ್ತರಾಖಂಡದ ಕೇದಾರನಾಥ ಧಾಮ ಭಕ್ತರಿಗಾಗಿ ತೆರೆದಿದ್ದು, ಭಕ್ತರು ತಂಡೋಪತಂಡವಾಗಿ ಸೇರಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಐಪಿ ಪ್ರವೇಶವನ್ನ ಆಡಳಿತ ಮಂಡಳಿ ನಿಷೇಧಿಸಿದೆ.
ಇನ್ನು ಮುಂದೆ ಎಲ್ಲ ವಿಐಪಿಗಳೂ ಸಾಮಾನ್ಯರಂತೆ ಭೇಟಿ ನೀಡಬೇಕಾಗುತ್ತದೆ ಎಂದು ಡಿಜಿಪಿ ಶುಕ್ರವಾರ ಹೇಳಿದ್ದಾರೆ. ಸರತಿ ಸಾಲಿನಲ್ಲಿ ನಿಂತವರಿಗೆ ಕೇವಲ ಎರಡು ಗಂಟೆಗಳ ಒಳಗಾಗಿ ದರ್ಶನ ಸಿಗಲಿದೆ. ಜನರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ, ಅವರು ಕೆಲವು ದಿನಗಳ ನಂತರ ಪ್ರಯಾಣಿಸಬೇಕು ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ ಜನರಿಗೆ ಮನವಿ ಮಾಡಿದ್ದಾರೆ.
ಕರೋನಾದಿಂದಾಗಿ ಮುಚ್ಚಲಾಗಿದ್ದ ಚಾರ್ಧಾಮ್ ಯಾತ್ರೆ ಸುಮಾರು ಎರಡು ವರ್ಷಗಳ ನಂತರ ಆರಂಭವಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಕಳೆದ 6 ದಿನಗಳಲ್ಲಿ ಸುಮಾರು 1 ಲಕ್ಷ 30 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಈ ಕಾರಣಕ್ಕಾಗಿ ವಿಐಪಿ ಪ್ರವೇಶವನ್ನು ಆಡಳಿತ ಮಂಡಳಿ ನಿಷೇಧಿಸಿದೆ.
ಚಾರ್ ಧಾಮ ಯಾತ್ರೆಗೆ ಬರುವ ಎಲ್ಲಾ ಭಕ್ತರು ಇನ್ನು ಮುಂದೆ ಒಂದೇ ಸಾಲಿನಲ್ಲಿ ನಿಂತು ದರ್ಶನಕ್ಕೆ ಕಾಯಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಿಗೆ ಎರಡು ಗಂಟೆಯೊಳಗೆ ದರ್ಶನ ನೀಡುವಂತೆ ಸೂಚನೆ ನೀಡಲಾಗಿದೆ.
ಪ್ರತಿದಿನ ಹೆಚ್ಚುತ್ತಿರುವ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಐಟಿಬಿಪಿ ಮತ್ತು ಎನ್ಡಿಆರ್ಎಫ್ ತಂಡಗಳನ್ನು ದೇವಸ್ಥಾನದಲ್ಲಿ ನಿಯೋಜಿಸಲಾಗಿದೆ. ಇದರೊಂದಿಗೆ ಪೊಲೀಸ್ ಸಿಬ್ಬಂದಿ ಕೂಡ ರಸ್ತೆಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈ ಹಿಂದೆಯೂ ನಿರ್ಲಕ್ಷ್ಯದ ಪ್ರಕರಣಗಳು ನಡೆದಿವೆ. ಈ ಕಾರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.