ನಾಗರಭಾವಿ ಬಳಿ ನೂತನ ಪಾದಚಾರಿ ಮೇಲ್ಸೇತುವೆ ಲೋಕಾರ್ಪಣೆ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗರಭಾವಿ ವರ್ತುಲ ರಸ್ತೆಯ ಬಳಿ ಬಹುನಿರೀಕ್ಷಿತ ಪಾದಚಾರಿ ಮೇಲ್ಸೇತುವೆಯನ್ನು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ವಿ.ಸೋಮಣ್ಣ ಲೋಕಾರ್ಪಣೆ ಮಾಡಿದರು.
ವರ್ತುಲ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಕಾರಣ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು.
ಇದನ್ನು ಗಮನಿಸಿದ ಸಚಿವರು ಸ್ಕೈ ವಾಕ್ ನಿರ್ಮಾಣಕ್ಕೆ ಮುಂದಾಗಿದ್ದರು.
ಇನ್ನು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.
ಇನ್ನು ರಾತ್ರಿ ಸಮಯದಲ್ಲಿ ಪಾದಚಾರಿ ಮೇಲ್ಸೇತುವೆ ಬಳಸುವವರ ಸುರಕ್ಷತೆಯ ದೃಷ್ಟಿಯಿಂದ ಪಕ್ಕದಲ್ಲೇ ಪೊಲೀಸ್ ಚೌಕಿ ನಿರ್ಮಾಣ ಮಾಡಲಾಗುತ್ತಿದೆ.
ಪಾದಚಾರಿ ಮೇಲ್ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಶ್ರೀ ವಿ.ಸೋಮಣ್ಣ, ಇಲ್ಲಿ ವಾಹನದಟ್ಟಣೆ ಹೆಚ್ಚುತ್ತಿರುವುದರಿಂದ ರಸ್ತೆ ದಾಟುವ ಸಂದರ್ಭದಲ್ಲಿ ಅವಘಡಗಳು ಸಂಭವಿಸುತ್ತಿದ್ದವು.
ಹೀಗಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಿಂದ ಪಾದಚಾರಿಗಳಿಗೆ ಅನುಕೂಲವಾಗಲಿದೆ, ವಾಹನಗಳು ತಡೆ ಇಲ್ಲದೇ ಸಂಚರಿಸಬಹುದು.
ಇನ್ನು, ಸ್ಕೈವಾಕ್ ಮೇಲಿನ ಜಾಹೀರಾತುಗಳಿಂದ ಆದಾಯ ಬರುವುದರಿಂದ ಬಿಬಿಎಂಪಿಗೆ ಯಾವುದೇ ಹೊರೆಯೂ ಆಗುವುದಿಲ್ಲ.
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಈ ಪಾದಚಾರಿ ಮೇಲ್ಸೇತುವೆಯು ಒಂದು ಪ್ರಮುಖ ಯೋಜನೆ.
ಇದರಿಂದಾಗಿ ಕೇವಲ ಪಾದಾಚಾರಿಗಳಷ್ಟೇ ಅಲ್ಲದೇ ಟ್ರಾಫಿಕ್ ಪೊಲೀಸರಿಗೆ ಕೂಡ ಸಂಚಾರವನ್ನು ಸುಗಮಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.