ಬೆಂಗಳೂರು : ರಾಜ್ಯ ಸರ್ಕಾರ ಅಂಬಿನ ಸ್ಮಾರಕ ನಿರ್ಮಾಣಕ್ಕೆ ಅಸ್ತು ಎಂದಿದೆ. ಇದರ ಮಧ್ಯೆ ಕೊರೊನಾ ಸಂಕಷ್ಟದಲ್ಲಿ ಅಂಬಿ ಸ್ಮಾರಕ ಬೇಕಿತ್ತಾ..? ಜನ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುವಾಗ ಸ್ಮಾರಕದ ಅವಶ್ಯಕತೆ ಏನಿತ್ತು..? ಎಂಬ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿವೆ.
ಹೌದು..! ಬಿ.ಎಸ್ ವೈ ನೇತೃತ್ವದ ರಾಜ್ಯ ಸರ್ಕಾರ ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1.34 ಎಕರೆ ಜಾಗ ಮತ್ತು 5 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ. ಅಂಬರೀಶ್ ಸ್ಮಾರಕಕ್ಕೆ ಸರ್ಕಾರ ಜಾಗ ಮತ್ತು ದುಡ್ಡು ಕೊಟ್ಟಿರುವ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೇಸರ ವ್ಯಕ್ತವಾಗುತ್ತಿದೆ.
ಅದರಲ್ಲೂ ಕೊರೊನಾದಿಂದ ರಾಜ್ಯಕ್ಕೆ ರಾಜ್ಯವೇ ತತ್ತರಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಅಂಬರೀಶ್ ಸ್ಮಾರಕಕ್ಕೆ ಹಣ ಬಿಡುಗಡೆ ಮಾಡುವ ಅವಶ್ಯಕತೆ ಇತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ. ಜನ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುವಾಗ ಸ್ಮಾರಕದ ಅವಶ್ಯಕತೆ ಏನಿತ್ತು ಮತ್ತು ಆ ಹಣವನ್ನು ಅಂಬರೀಶ್ ಅವರ ಹೆಸರಿನಲ್ಲೇ, ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ಸಹ ಹಲವರಿಂದ ವ್ಯಕ್ತವಾಗುತ್ತಿದೆ.