ದೇಶದ ಹಿತ ಮರೆತ ಮೋದಿಗೆ ಜನರಿಂದ ಕಪಾಳ ಮೋಕ್ಷ : ಹೆಚ್ ಕೆ ಪಾಟೀಲ್
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರಿಂದ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ಗದಗದಲ್ಲಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತಾಗಿ ಮಾತನಾಡಿದ ಅವರು ಚುನಾವಣೆಯಲ್ಲಿ ಮೋದಿ ಕೊರೋನಾ ನಿಯಮ ಗಾಳಿಗೆ ತೂರಿ ಪ್ರಚಾರ ನಡೆಸಿದ್ದರು.
ಕೊರೋನಾ ಆತಂಕದಲ್ಲಿದ್ದ ಜನರು, ತಜ್ಞರ ಎಚ್ಚರಿಕೆ ಮಧ್ಯೆ ನಿಯಮ ಉಲ್ಲಂಘಿಸಿ ಅತ್ಯಂತ ಕೆಳಮಟ್ಟದ ಪ್ರಚಾರ ನಡೆಸಿದ್ದರು. ಏನಾದರೂ ಮಾಡಿ ಗೆಲ್ಲಬೇಕೆಂದುಕೊಂಡಿದ್ದ ಮೋದಿ ಮತ್ತು ಅಮಿತ್ ಶಾ ಅವರಿಗೆ ಪಶ್ಚಿಮಬಂಗಾಳದ ಜನರು ಸರಿಯಾದ ಬುದ್ಧಿ ಕಲಿಸಿದ್ದಾರೆ. ಇದು ಪ್ರಧಾನಿ ಮೋದಿಯವರಿಗೆ ಸಾಧಾರಣ ಸೋಲಲ್ಲ. ಕೊರೋನಾ ಸಂಕಷ್ಟದಲ್ಲಿ ಚುನಾವಣೆ ಗೆಲುವಿಗಾಗಿ ಓಡಾಟ ನಡೆಸಿದ್ದರು. ದೇಶದ ಜನರ ಹಿತ ಮರೆತಿದ್ದ ಮೋದಿಗೆ ಜನ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.