ದಾವಣಗೆರೆ: ರಾಜ್ಯ ರಾಜಕಾರಣದ ಭೀಷ್ಮ, ಕಾಂಗ್ರೆಸ್ ಪಕ್ಷದ ಹಿರಿಯ ಆಸ್ತಿ ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಇದೀಗ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಬೆಣ್ಣೆ ನಗರಿಯ ರಾಜಕೀಯ ಸಮೀಕರಣಗಳು ಬದಲಾಗುತ್ತಿದ್ದು, ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ರಣಕಹಳೆ ಮೊಳಗುವ ಮುನ್ನವೇ ಪಕ್ಷಗಳಲ್ಲಿ ಸಂಚಲನ ಶುರುವಾಗಿದೆ.
ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ನೇರ ಹಣಾಹಣಿಗೆ ದಾವಣಗೆರೆ ಸಾಕ್ಷಿಯಾಗಲಿದ್ದು, ಈ ಚುನಾವಣೆ ಕೇವಲ ಒಂದು ಕ್ಷೇತ್ರದ ಗೆಲುವಲ್ಲ, ಬದಲಿಗೆ ರಾಜ್ಯ ನಾಯಕರ ಪ್ರತಿಷ್ಠೆಯ ಅಳತೆಗೋಲಾಗಿದೆ.
ಶಾಮನೂರು ಕೋಟೆಗೆ ಉತ್ತರಾಧಿಕಾರಿ ಯಾರು
ದಾವಣಗೆರೆ ದಕ್ಷಿಣ ಕ್ಷೇತ್ರ ಅಕ್ಷರಶಃ ಶಾಮನೂರು ಕುಟುಂಬದ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ 84,298 ಮತಗಳನ್ನು ಬಾಚಿಕೊಂಡು, ಬಿಜೆಪಿಯ ಅಜಯ್ ಕುಮಾರ್ ಅವರನ್ನು 27,888 ಮತಗಳ ಬೃಹತ್ ಅಂತರದಿಂದ ಮಣಿಸಿದ್ದ ಶಾಮನೂರು ಶಿವಶಂಕರಪ್ಪನವರ ವರ್ಚಸ್ಸು ಇಲ್ಲಿ ಇನ್ನೂ ಮಾಸಿಲ್ಲ. ಈಗ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಕಾಂಗ್ರೆಸ್ ಪಾಳಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳು ಶಾಮನೂರು ಕುಟುಂಬದ ಕುಡಿಗಳದ್ದೇ ಆಗಿದೆ. ಶಾಮನೂರು ಅವರ ಎರಡನೇ ಪುತ್ರ ಹಾಗೂ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಹಾಗೂ ಶಾಮನೂರು ಅವರ ಮೊಮ್ಮಗ ಸಮರ್ಥ್ ಶಾಮನೂರು ಕೂಡ ಟಿಕೆಟ್ ರೇಸ್ನಲ್ಲಿದ್ದಾರೆ. ಕ್ಷೇತ್ರ ಆಡಳಿತ ಪಕ್ಷದ ಕೈಯಲ್ಲಿದ್ದು, ಜೊತೆಗೆ ಅನುಕಂಪದ ಅಲೆ ಇರುವುದರಿಂದ ಕಾಂಗ್ರೆಸ್ ಗೆಲುವು ಸುಲಭ ಎಂಬ ಲೆಕ್ಕಾಚಾರವಿದೆ. ಆದರೂ, ಅಂತಿಮ ತೀರ್ಮಾನ ಶಾಮನೂರು ಕುಟುಂಬದ ಹಿರಿಯರದ್ದೇ ಆಗಿರುತ್ತದೆ ಎಂದು ಗಣೇಶ್ ಸ್ಪಷ್ಟಪಡಿಸಿದ್ದಾರೆ.
ವಿಜಯೇಂದ್ರಗೆ ನಿಜವಾದ ಸತ್ವ ಪರೀಕ್ಷೆ
ಇತ್ತೀಚೆಗೆ ನಿಧನರಾದ ಎಚ್.ವೈ. ಮೇಟಿ ಅವರ ಬಾಗಲಕೋಟೆ ಕ್ಷೇತ್ರ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗಳು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲಿಗೆ ನಿಜವಾದ ಅಗ್ನಿಪರೀಕ್ಷೆಯಾಗಿವೆ. ಲೋಕಸಭೆ ಚುನಾವಣೆಯ ನಂತರ ನಡೆಯುತ್ತಿರುವ ಪ್ರಮುಖ ಚುನಾವಣೆ ಇದಾಗಿದ್ದು, ಇಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದರೆ ಮಾತ್ರ ವಿಜಯೇಂದ್ರ ತಮ್ಮ ನಾಯಕತ್ವದ ಮೇಲಿರುವ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಸಾಧ್ಯ.
ದಾವಣಗೆರೆಯಲ್ಲಿ ಕಳೆದ ಬಾರಿ ಸೋತಿದ್ದ ಬಿ.ಜೆ. ಅಜಯ್ ಕುಮಾರ್ ಮತ್ತು ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಶ್ರೀನಿವಾಸ್ ದಸ್ಕರಿಯಪ್ಪ ಅವರು ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ ಯಾವ ತಂತ್ರ ಹೆಣೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ನಿರ್ಣಾಯಕವಾಗಲಿರುವ ಅಲ್ಪಸಂಖ್ಯಾತ ಮತಗಳು
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರ ಸಂಖ್ಯೆ ನಿರ್ಣಾಯಕವಾಗಿದೆ. ಇತಿಹಾಸವನ್ನು ಗಮನಿಸಿದರೆ ಈ ಸಮುದಾಯವು ಹೆಚ್ಚಾಗಿ ಕಾಂಗ್ರೆಸ್ ಪರ ಒಲವು ತೋರಿದೆ. ಶಾಮನೂರು ಕುಟುಂಬದ ಮೇಲಿನ ನಿಷ್ಠೆ ಮತ್ತು ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ಗೆ ಶ್ರೀರಕ್ಷೆಯಾಗಿದೆ. ಆದರೆ, ಈ ಬಾರಿ ಮತಗಳಲ್ಲಿ ಕೊಂಚ ವಿಭಜನೆಯಾದರೂ ಅದರ ನೇರ ಲಾಭ ಬಿಜೆಪಿಗೆ ಸಿಗಲಿದೆ.
ಒಟ್ಟಾರೆಯಾಗಿ, ಆಡಳಿತಾರೂಢ ಕಾಂಗ್ರೆಸ್ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಮತ್ತು ಬಿಜೆಪಿ ತನ್ನ ಕಳೆದುಹೋದ ವರ್ಚಸ್ಸನ್ನು ಮರುಗಳಿಸಲು ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವುದೇ ಬಾಕಿ, ದಾವಣಗೆರೆಯಲ್ಲಿ ಈಗಾಗಲೇ ರಾಜಕೀಯ ಕಾವು ಏರುತ್ತಿದೆ.








