ಸಂಸಾರ ಜೀವನದಿಂದ ರೋಸಿಹೋಗಿ ಪತಿಯನ್ನು ಕೊಂದ ಪತ್ನಿ
ತೆಲಂಗಾಣ: ಗಂಡನ ಕಣ್ಣಿಗೆ ಕಾರದ ಪುಡಿ ಎರಚಿ ಹೆಂಡತಿ ಕೊಲೆ ಮಾಡಿರುವ ಘಟನೆ ಭೂಪಾಲಪಲ್ಲಿ ಜಿಲ್ಲೆಯ ಮಲ್ಹಾರ ಮಂಡಲದ ತಾಡಿಚೆರ್ಲಾದಲ್ಲಿ ನಡೆದಿದೆ.
ಮಾಚರ್ಲ ರಾಜಯ್ಯ ಕೊಲೆಯಾದ ದುರ್ದೈವಿ. ರಾಜಕ್ಕ ಕೊಲೆ ಮಾಡಿದ ಆರೋಪಿ. ಈಕೆ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಾಚರ್ಲ ರಾಜಯ್ಯ ಮತ್ತು ರಾಜಕ್ಕ ಕಳೆದ 5 ವರ್ಷಗಳಿಂದ ಜಗಳವಾಡಿಕೊಂಡು ಇದ್ದರು. ಇದರಿಂದ ಬೇಸತ್ತ ಪತ್ನಿ ಪತಿಯಿಂದ ದೂರವಿದ್ದಳು. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದು, ಒಬ್ಬಳು ಸಾವನ್ನಪ್ಪಿದ್ದಾಳೆ. ಇಬ್ಬರಿಗೆ ಮದುವೆಯಾಗಿದ್ದು, ಒಬ್ಬಳು ಗಂಡನನ್ನು ತೊರೆದು, ತಾಯಿಯೊಂದಿಗೆ ವಾಸವಾಗಿದ್ದಳು.
ಇದರಿಂದ ರೋಸಿ ಹೋಗಿದ್ದ, ಪತ್ನಿ ಪತಿಯನ್ನು ಕೊಲ್ಲಲು ನಿಶ್ಚಯಿಸಿದ್ದಾಳೆ. ಇಂದು ಬೆಳಗ್ಗೆ ಪತಿ ತನ್ನ ಮನೆ ಮುಂದೆ ತೆರಳುತ್ತಿದ್ದನ್ನು ಗಮನಿಸಿ ಆತನನ್ನು ಕೂಗಿ ಕರೆದಿದ್ದಾಳೆ. ಹೆಂಡತಿಯ ಕರೆಗೆ ಓಗೊಟ್ಟು ಗಂಡ ಮನೆಯ ಎದುರುಗಡೆಯೇ ನಿಂತಿದ್ದಾನೆ.
ತಕ್ಷಣವೇ ಹೊರ ಬಂದ ಆಕೆ ಆತನ ಕಣ್ಣಿಗೆ ಖಾರದ ಪುಡಿ ಎರಚಿ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ಪರಿಣಾಮ ರಾಜಯ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ರಾಜಯ್ಯನ ಮೃತದೇಹವನ್ನು ಮಹದೇವಪುರ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.