ಅರೆಸ್ಟ್ ಆಗ್ತಾರಾ ರಾಮ್ ದೇವ್ ಬಾಬಾ..?
ನವದೆಹಲಿ: ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ರಾಮದೇವ್ ಬಾಬಾ ಅರೆಸ್ಟ್ ಆಗ್ತಾರಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅವರನ್ನು ಬಂಧಿಸುವಂತೆ ಅನೇಕರು ಸೋಶಿಯಲ್ ಮೀಡಿಯಾ ವೇದಿಕೆಯಾಗಿ ಒತ್ತಾಯಿಸುತ್ತಿದ್ದಾರೆ. ಕೊರೊನಾಗೆ ಔಷಧಿಯಾಗಿ ಪತಂಜಲಿ ಇತ್ತೀಚೆಗೆ ‘ಕೊರೊನಿಲ್’ ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಕೊರೊನಿಲ್ ಬಿಡುಗಡೆ ಸಂದರ್ಭದಲ್ಲಿ ರಾಮದೇವ್ ಬಾಬಾ ಕೊರೊನಿಲ್ ಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರವಿದೆ ಎಂದು ಹೇಳುವ ಮೂಲಕ ಎಲ್ಲರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಲು ನೋಡಿದ ಯೋಗ ಗುರುವನ್ನು ಬಂಧಿಸುವಂತೆ ಅನೇಕ ಆರೋಗ್ಯ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘ ಸಂಸ್ಥೆಗಳು ಒತ್ತಾಯಿಸುತ್ತಿವೆ.
ಈ ನೇಪಥ್ಯದಲ್ಲಿ ರಾಮ್ ದೇವ್ ಅವರನ್ನ ಬಂಧಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆತ್ಮೀಯ ದೆಹಲಿ ಪೊಲೀಸ್.. ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಣದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ದಾರಿತಪ್ಪಿಸಲು ಯತ್ನಿಸಿದ್ದಕ್ಕಾಗಿ ರಾಮದೇವ್ ಬಾಬಾ ಅವರನ್ನು ಬಂಧಿಸುತ್ತೀರಾ..? ಇದು ಅಂತರರಾಷ್ಟ್ರೀಯ ವಂಚನೆ ಎಂದು ಪರಿಗಣಿಸಬೇಕು. ಇದಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಈ ತಿಂಗಳ 19 ರಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಇನ್ನೊಬ್ಬ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ರಾಮದೇವ್ ಬಾಬಾ ಕೊರೊನಿಲ್ ಬಿಡುಗಡೆ ಮಾಡಿದರು. ಈ ವೇಳೆ ಫಾರ್ಮಾಸ್ಯೂಟಿಕಲ್ ಪ್ರಾಡಕ್ಟ್ ಆಗಿ ತಮ್ಮ ಔಷಧಿಗೆ ಸರ್ಟಿಫಿಕೆಟ್ ಇದೆ ಹಾಗೇ ವಿಶ್ವ ಆರೋಗ್ಯ ಸಂಸ್ಥೆಯ ಮತ್ತೊಂದು ಪ್ರಮಾಣಪತ್ರವನ್ನು ಹೊಂದಿದೆ ಎಂದು ರಾಮದೇವ್ ಬಾಬಾ ಘೋಷಿಸಿದರು. ಆದರೆ, ಈ ಬಗ್ಗೆ ನಾವು ಯಾವುದೇ ಪ್ರಮಾಣಪತ್ರ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದೆ.
ಈಗಾಗಿ ರಾಮ್ ದೇವ್ ಬಾಬಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸಮರ ಶುರುವಾಗಿದೆ. ಅವರನ್ನು ಬಂಧಿಸುವಂತೆ ಅಭಿಯಾನ ಆರಂಭವಾಗಿದೆ.