ನನ್ಗೆ ಸಿಗ್ದೆ ಇರೋದು ಮತ್ಯಾರಿಗೂ ಸಿಗ್ಬಾರ್ದು : ಪ್ರಿಯಕರನ ಕೊಲೆಗೆ ಮಹಿಳೆ ಸುಪಾರಿ
ಕೋಲಾರ : ನನ್ಗೆ ಸಿಗ್ದೆ ಇರೋದು ಮತ್ಯಾರಿಗೂ ಸಿಗ್ಬಾರ್ದು ಅಂತಾ ಪ್ರಿಯಕರನ ಕೊಲೆಗೆ ಮಹಿಳೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಕೋಲಾರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದಿದೆ. ಜಬೀರ್ ಕೊಲೆಯಾದ ವ್ಯಕ್ತಿಯಾಗಿದ್ದು, ಝಕಿಯಾ ಎಂಬ ವಿವಾಹಿತ ಮಹಿಳೆ ಮೇಲೆ ಸುಪಾರಿ ಆರೋಪ ಕೇಳಿಬಂದಿದೆ.
ಜಬೀರ್ ಬೇರೆ ರಾಜ್ಯಗಳಿಂದ ಕಾರುಗಳನ್ನು ಖರೀದಿಸಿ ತಂದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ವರ್ಷಗಳಿಂದ ಅವನ ತಂದೆಯ ದೂರದ ಸಂಬಂಧಿ, ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿ ಕೆಲಸ ಮಾಡುತ್ತಿದ್ದ ಝಕಿಯಾ ಎಂಬ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದನಂತೆ. ಇದನ್ನು ತಿಳಿದ ಯುವಕ ಕುಟುಂಬ ಝಕಿಯಾಗೆ ತಿಳಿಯದಂತೆ ಜಬೀರ್ ಗೆ ಬೇರೆ ಯುವತಿ ಜೊತೆ ಮದುವೆ ಮಾಡಿಸಿದ್ದರು.
ಜಬೀರ್ ಗೆ ವಿವಾದವಾದ ವಿಷಯ ತಿಳಿದು ಕೋಪಗೊಂಡ ಝಕಿಯಾ ಮೇ 3 ರಂದು ಜಬೀರ್ ಗೆ ಫೋನ್ ಮಾಡಿದ್ದಾಳೆ. ನನಗೆ ಹೈದರಾಬಾದ್ ನಲ್ಲಿ ಒಬ್ಬರು ಮೂರು ಲಕ್ಷ ಹಣ ಕೊಡಬೇಕು. ಅದನ್ನ ತೆಗೆದುಕೊಂಡು ಬಾ. ಅದರಲ್ಲಿ ನೀನು ಸ್ವಲ್ಪ ಇಟ್ಕೊಂಡು ನನಗೆ ಸ್ವಲ್ಪ ಕೊಡು ಎಂದು ಹೇಳಿ ಜಬೀರನನ್ನ ಹೈದರಾಬಾದ್ ಗೆ ಕಳುಹಿಸಿದ್ದಾರೆ. ಹೀಗೆ ಆಕೆಯ ಮಾತು ನಂಬಿ ಹೈದರಾಬಾದ್ ಗೆ ಹೋಗಿದ್ದ ಜಬೀರ್ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.
ಈ ನಡುವೆ ಜಬೀರ್ ಪೋಷಕರು ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದ ಪೊಲೀಸರು ಜಬೀರ್ ನ ಕಾಲ್ ಡಿಟೇಲ್ಸ್ ತೆಗೆದು ನೋಡಿದ್ದಾರೆ. ಇದರಲ್ಲಿ ಮೇ 4ರಂದು ಆತನೊಂದಿಗೆ ಝಕಿಯಾ ಮಾತನಾಡಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಝಕಿಯಾಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಘಟನೆಯ ಸಂಪೂರ್ಣ ಮಾಹಿತಿ ಹೊರಬಿದ್ದಿದೆ.