ಮಕರ ಸಂಕ್ರಮಣದಿಂದ ಬಿಎಸ್ವೈ ಅಂತ್ಯ ಆರಂಭ-ಯತ್ನಾಳ್
ವಿಜಯಪುರ: ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಆಕ್ರೋಶ ಹೊರಹಾಕಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖುಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಸಿಡಿ ತೋರಿಸಿ ಬ್ಲಾಕ್ಮೇಲೆ ಮಾಡಿದವರಿಗೆ, ಹಣ ನೀಡಿದವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬ್ಲಾಕ್ಮೇಲೆ ಮಾಡಿ ಮೂವರು ಸಚಿವರಾಗಿದ್ದಾರೆ. ಇನ್ನು ಕೆಲವರು ಸಿಡಿ ತೋರಿಸಿ, ಅಪಾರ ಪ್ರಮಾಣ ಹಣಕೊಟ್ಟು ಸಚಿವರಾಗಿದ್ದಾರೆ. ಈ ಮಕರ ಸಂಕ್ರಮಣದ ಉತ್ತರಾಯಣದ ಮೂಲಕ ಸಿಎಂ ಯಡಿಯೂರಪ್ಪ ಅವರ ಪತನ ಆರಂಭವಾಗಲಿದೆ ಎಂದು ಬಹಿರಂಗ ಸವಾಲು ಹಾಕಿದ ಯತ್ನಾಳ್, ನೈತಿಕತೆ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಡಿ ತೋರಿಸಿ ಮಂತ್ರಿಯಾಗಿದ್ದಾರೆ..!
ಇಂದು ಸಚಿವ ಸಂಪುಟ ಸೇರ್ಪಡೆಯಾದ ಕೆಲವರು ಸಿಡಿ ತೋರಿಸಿ ಸಚಿವರಾಗಿದ್ದಾರೆ. ಅವರ ಹೆಸರನ್ನು ನಾನು ಹೇಳಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುವೆ. ಕೆಲವರು ಹಣ ನೀಡಿ, ಸಿಡಿ ತೋರಿಸಿ ಸಚಿವರಾಗಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಸಿಡಿ ಕೋಟಾ, ಬ್ಲಾಕ್ ಮೇಲ್ ಕೋಟಾ..
ಹಿಂದೆ ಜಿಲ್ಲಾವಾರು, ಜಾತಿವಾರು, ಪ್ರದೇಶಾವರು ಕೋಟಾದಡಿ ಸಚಿವ ಸ್ಥಾನ ಸಿಗುತ್ತಿತ್ತು. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಸಿಡಿ ತೋರಿಸಿದವರಿಗೊಂದು ಕೋಟಾ, ಬ್ಲಾಕ್ಮೇಲೆ ಮಾಡಿದವರಿಗೊಂದು ಕೋಟಾ, ಹಣ ಕೊಟ್ಟವರಿಗೊಂದು ಕೋಟಾ ಎಂಬ ಹೊಸ ಸಂಪ್ರದಾಯ ಆರಂಭವಾಗಿದೆ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಬಿಎಸ್ವೈ ಮುಗಿಸಲು ಸಂಚು ನಡೆಸಿದ್ದವರೇ ಸಚಿವರಾಗಿದ್ದಾರೆ..
ಇಂದು ಸಂಪುಟಕ್ಕೆ ಸೇರ್ಪಡೆಯಾದ ಇಬ್ಬರು ನೂತನ ಸಚಿವರು, ಒಬ್ಬ ರಾಜಕೀಯ ಕಾರ್ಯದರ್ಶಿ ಸೇರಿಕೊಂಡು ಯಡಿಯೂರಪ್ಪ ಅವರನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ.
ನಾಲ್ಕು ತಿಂಗಳ ಹಿಂದೆ ನನ್ನನ್ನು ಭೇಟಿಯಾಗಿದ್ದರು. ನಾವೆಲ್ಲ ಸೇರಿ ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡೋಣ. ನೀವಾರ ಮುಖ್ಯಮಂತ್ರಿಯಾಗಿ, ನಾನು ಆದರೂ ಮುಖ್ಯಮಂತ್ರಿ ಆಗ್ತೇನೆ. ನಾನು ನೂರಾರು ಕೋಟಿ ಖರ್ಚು ಮಾಡಲು ತಯಾರಿದ್ದೇನೆ ಎಂದು ನೆಲಮಂಗಲದ ಗೆಸ್ಟ್ಹೌಸ್ನಲ್ಲಿ ಸಭೆ ಮಾಡಿದ್ದರು. ಅಂದು ನನಗೆ ಆಶ್ಚರ್ಯ ಆಗಿತ್ತು, ರಕ್ತ ಸಂಬಂಧಿ ಮುಖಾಂತರ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಯಡಿಯೂರಪ್ಪ ಅರವನ್ನು ಕೆಳಗಿಳಿಸಲು ಸಂಚು ಮಾಡಿದವರೇ ಇಂದು ಸಚಿವರಾಗಿದ್ದಾರೆ ಎಂದು ಯತ್ನಾಳ್ ಬಹಿರಂಗಪಡಿಸಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಕಾಂಗ್ರೆಸ್ ನಾಯಕರನ್ನು ಖರೀದಿ ಮಾಡಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಸತ್ತಿರುವುದಕ್ಕೆ ಇದೇ ಕಾರಣ. ಯಡಿಯೂರಪ್ಪ ಅವರಿಗೆ ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತಾಗಿದೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಯಡಿಯೂರಪ್ಪ ವಂಶಾಡಳಿತ ಕೊನೆಗೊಳ್ಳಲಿ..
ಪ್ರಧಾನಿ ನರೇಂದ್ರ ಅವರು ದೇಶದಲ್ಲಿ ವಂಶಾಡಳಿತ ಕೊನೆಗೊಳ್ಳಲಿ ಎಂದು ಸಂದೇಶ ನೀಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ಅವರ ವಂಶಾಡಳಿತವೇ ನಡೆದಿದೆ. ಯಡಿಯೂರಪ್ಪ ಮನೆಯಲ್ಲಿ ಒಬ್ಬ ಸಿಎಂ, ಮತ್ತೊಬ್ಬ ಸಂಸದ, ಇನ್ನೊಬ್ಬ ಬಿಜೆಪಿ ಉಪಾಧ್ಯಕ್ಷ ಇದ್ದಾರೆ. ವಂಶಾಡಳಿತ ರಾಜಕಾರಣ ಕೊನೆಗೊಳ್ಳಬೇಕಾದರೆ ಅದು ಕರ್ನಾಟಕದಿಂದ, ಯಡಿಯೂರಪ್ಪ ಅವರ ಮನೆತನದಿಂದ ಅಂತ್ಯ ಮಾಡಬೇಕು. ಈ ಮೂಲಕ ದೇಶಕ್ಕೆ ಬಿಜೆಪಿ ಸಂದೇಶ ಕೊಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಆಗ್ರಹಿಸುತ್ತೇನೆ ಎಂದಿರುವ ಯತ್ನಾಳ್, ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿವೆ. ಹೀಗಾಗಿ ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮೋದಿ, ಶಾ ವಿರುದ್ಧ ಹೋರಾಟಕ್ಕೆ ಮಠಾಧೀಶರಿಗೆ 83 ಕೋಟಿ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೀರಶೈವ-ಲಿಂಗಾಯತರನ್ನು ಎತ್ತಿಕಟ್ಟುವ ಯತ್ನ ನಡೆಸುತ್ತಿದ್ದಾರೆ. ವಾಸ್ತವವಾಗಿ ಯಡಿಯೂರಪ್ಪ ಹಿಂದೆ ಯಾವ ವೀರಶೈವ-ಲಿಂಗಾಯತರು ಇಲ್ಲ. ಒಂದು ವೇಳೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಅಮಿತ್ ಶಾ, ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಲು, ಹೋರಾಟ ನಡೆಸಲು ವೀರಶೈವ-ಲಿಂಗಾಯತ ಮಠಾಧೀಶರಿಗೆ 83 ಕೋಟಿ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel