ಬಿಜೆಪಿ ಆಳ್ವಿಕೆಯಲ್ಲಿ ಕೊಲೆಗಾರರಿಗೆ ‘ಸನ್ಮಾನ’ : ಕಾಂಗ್ರೆಸ್ ಟ್ವೀಟ್
ಬೆಂಗಳೂರು : ಬಿಜೆಪಿ ಆಳ್ವಿಕೆಯಲ್ಲಿ ಕೊಲೆಗಾರರಿಗೆ ‘ಸನ್ಮಾನ’ ಸಂತೈಸುವವರಿಗೆ ‘ಬಂಧನ’ ಇದು ತಾಲಿಬಾನ್ ಮಾದರಿಯಲ್ಲದೆ ಇನ್ನೇನು ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಗಳನ್ನು ಮಾಡಿದೆ.
ಉತ್ತರ ಪ್ರದೇಶದ ಪೊಲೀಸರು ಪೊಲೀಸರಂತಿರದೆ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ದಿಪೇಂದರ್ ಹೂಡಾ ಅವರ ಮೇಲೆ ಪೊಲೀಸರದ್ದು ಅಕ್ಷರಶಃ ಗೂಂಡಾಗಿರಿ. ವಿರೋಧ ಪಕ್ಷದ ನಾಯಕರನ್ನೇ ಕ್ರೂರವಾಗಿ ನಡೆಸಿಕೊಳ್ಳುತ್ತಿರುವಾಗ,ಸಾಮಾನ್ಯ ರೈತರ ಧ್ವನಿ ಅಡಗಿಸಲು ಇನ್ನೆಷ್ಟು ದೌರ್ಜನ್ಯ ಎಸಗುತ್ತಿರಬಹುದು.
ಈ ಅಮಾನವೀಯ ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ಅಜಯ್ ಮಿಶ್ರಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಿಶ್ರಾ ಅವರೂ ಸೇರಿದಂತೆ ರೈತರ ಹತ್ಯೆ ಮಾಡಿದವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ರೈತರನ್ನು ಕೊಲೆ ಮಾಡಿದ ಕೇಂದ್ರ ಮಂತ್ರಿಯ ಪುತ್ರ ರಾಜಾರೋಷವಾಗಿ ತಿರುಗಿಕೊಂಡಿದ್ದಾನೆ.
ಮೃತ ರೈತರ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳಿದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲಾಗಿದೆ. ಬಿಜೆಪಿ ಆಳ್ವಿಕೆಯಲ್ಲಿ ಕೊಲೆಗಾರರಿಗೆ ‘ಸನ್ಮಾನ’ ಸಂತೈಸುವವರಿಗೆ ‘ಬಂಧನ’ ಇದು ತಾಲಿಬಾನ್ ಮಾದರಿಯಲ್ಲದೆ ಇನ್ನೇನು ಎಂದು ಪ್ರಶ್ನಿಸಿದೆ.