ಬೆಂಗಳೂರು: ಪ್ರಸಿದ್ಧಿ ಪಡೆದಿರುವ ಬೆಂಗಳೂರು ಕರಗ ಶಕ್ತ್ಯೋತ್ಸವ ಏಪ್ರಿಲ್ 15 ರಿಂದ 23ರ ವರೆಗೆ ನಡೆಯಲಿದೆ ಎನ್ನಲಾಗಿದೆ.
ಏಪ್ರಿಲ್ 23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಈ ಬಾರಿಯೂ ಪೂಜಾರಿ ಎ. ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಈ ಮೂಲಕ ಬರೋಬ್ಬರಿ 13ನೇ ಬಾರಿ ಕರಗ ಹೊತ್ತ ಕಾರ್ಯವನ್ನು ಅವರು ಮಾಡಿದಂತಾಗುತ್ತಿದೆ.
ಕರಗ ಉತ್ಸವ ಕುರಿತು ಭಾನುವಾರ ಸಭೆ ನಡೆದಿತ್ತು. ಈ ಸಭೆಯಲ್ಲಿ ದಿನಾಂಕ ಫಿಕ್ಸ್ ಮಾಡಲಾಗಿದೆ. ಜೊತೆಗೆ ಮುಜರಾಯಿ ಇಲಾಖೆ ಮತ್ತು ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯು ಕರಗ ಹೊರಲು ಜ್ಞಾನೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಿದೆ. ಕರಗ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇತ್ತೀಚೆಗಷ್ಟೇ ಕಿಡಿಗೇಡಿಗಳು ಎ. ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಜ್ಞಾನೇಂದ್ರ ಅವರು ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿ ಉತ್ಸವ ಮುಗಿಸಿ ಧರ್ಮರಾಯ ಸ್ವಾಮಿ ದೇವಾಲಯ ತಲುಪಿಸಿದ್ದರು. ಈ ಬಾರಿ ಕೂಡ ಜಾಗೃತೆಯಿಂದಲೇ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ.