ರಾಜ್ಯ ಸರ್ಕಾರ ಹೆಚ್ಚು ಸಾಲ ಮಾಡಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ. ಈ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಮೈಸೂರಿನ ಪಿಲ್ಲಹಳ್ಳಿ ಗ್ರಾಮದ ಹೆಲಿಪ್ಯಾಡ್ನಲ್ಲಿ ಮಾತನಾಡಿದ ಸಿಎಂ, ದೇಶ ಮತ್ತು ರಾಜ್ಯದ ವಿತ್ತೀಯ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ವಿವರಿಸಿದರು. ಭಾರತದ ಒಟ್ಟು ವಿತ್ತೀಯ ಕೊರತೆ 4.4% ಇದ್ದರೆ, ಕರ್ನಾಟಕ ರಾಜ್ಯದ ವಿತ್ತೀಯ ಕೊರತೆ 2.95% ಮಾತ್ರವಿದೆ ಎಂದು ಅವರು ಹೇಳಿದರು.
ಹಣಕಾಸು ನಿಯಂತ್ರಣಕ್ಕೆ ಸಂಬಂಧಿಸಿದ ಕಾಯ್ದೆಯ ಪ್ರಕಾರ ಜಿಡಿಪಿಯ 3% ಮಿತಿಯೊಳಗೆ ರಾಜ್ಯಗಳು ವಿತ್ತೀಯ ಕೊರತೆಯನ್ನು ಇರಿಸಿಕೊಳ್ಳಬೇಕು. ಕರ್ನಾಟಕ ಈ ಮಿತಿಯೊಳಗೆ ಇರುವುದರಿಂದ ಸರ್ಕಾರ ಹಣಕಾಸು ಶಿಸ್ತನ್ನು ಪಾಲಿಸುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯದ ಆರ್ಥಿಕ ಸಾಮರ್ಥ್ಯದ ಕುರಿತು ಮಾತನಾಡಿದ ಅವರು, ಕರ್ನಾಟಕದ ಜಿಡಿಪಿ ಸುಮಾರು ₹33,05,500 ಕೋಟಿ ಎಂದು ಮಾಹಿತಿ ನೀಡಿದರು.
ಈ ಹೇಳಿಕೆಯ ಮೂಲಕ ಸರ್ಕಾರದ ವಿರುದ್ಧ ಸಾಲದ ವಿಚಾರದಲ್ಲಿ ಟೀಕೆ ಮಾಡುತ್ತಿದ್ದ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ಸಿಎಂ ತಿರುಗೇಟು ನೀಡಿದ್ದಾರೆ.







