ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ, ತನ್ನ ಸಚಿವ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯದ ಮಂತ್ರ ಜಪಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ನಡೆದ ವಿಜಯ್, ಇತಿಹಾಸದಲ್ಲೇ ಮೊದಲ ಬಾರಿಗೆ ದಲಿತ ಸಮುದಾಯಕ್ಕೆ ದಾಖಲೆ ಪ್ರಮಾಣದ ಪ್ರಾತಿನಿಧ್ಯ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಿನಿಮೀಯ ಮಾದರಿಯಲ್ಲಿ ಅಧಿಕಾರಕ್ಕೆ ಬಂದ ವಿಜಯ್
ದಳಪತಿ ವಿಜಯ್ ಮೊದಲ ಚುನಾವಣೆಯಲ್ಲೇ ಸಿನಿಮೀಯ ಶೈಲಿಯಲ್ಲಿ ದಿಗ್ವಿಜಯ ಸಾಧಿಸಿದ್ದಾರೆ. ಟಿವಿಕೆ ಪಕ್ಷವು ಸ್ವತಂತ್ರವಾಗಿ 107 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಸರ್ಕಾರ ರಚಿಸಲು ಬೇಕಾದ 118ರ ಮ್ಯಾಜಿಕ್ ನಂಬರ್ ತಲುಪಲು ಕಾಂಗ್ರೆಸ್, ವಿಸಿಕೆ, ಇಂಡಿಯನ್ ಮುಸ್ಲಿಂ ಲೀಗ್ ಹಾಗೂ ಸಿಪಿಐಎಂ ಪಕ್ಷಗಳ ಬೆಂಬಲ ಪಡೆದಿದ್ದಾರೆ. ಮಿತ್ರಪಕ್ಷಗಳ ಸಹಕಾರದೊಂದಿಗೆ ವಿಜಯ್ ಈಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಸಂಪುಟ ವಿಸ್ತರಣೆಯ ಕೆಲಸಗಳನ್ನು ಚುರುಕುಗೊಳಿಸಿದ್ದಾರೆ.
ದಲಿತರಿಗೆ ಸಿಕ್ಕಿತು ಸಿಂಹಪಾಲು: ಸ್ಟಾಲಿನ್ ದಾಖಲೆ ಬ್ರೇಕ್
ಒಟ್ಟು 35 ಸಚಿವ ಸ್ಥಾನಗಳ ಪೈಕಿ ಈಗಾಗಲೇ 33 ಸ್ಥಾನಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಇದರಲ್ಲಿ ದಲಿತ ಸಮುದಾಯದ ಏಳು ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ವಿಜಯ್ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದಲ್ಲಿ ನಾಲ್ವರು ದಲಿತರಿಗೆ ಸಚಿವ ಸ್ಥಾನ ನೀಡಲಾಗಿತ್ತು, ಅದು ಆ ಸಮಯದಲ್ಲಿ ದಾಖಲೆಯಾಗಿತ್ತು. ಆದರೆ ಈಗ ವಿಜಯ್ ಆ ಸಂಖ್ಯೆಯನ್ನು ಏಳಕ್ಕೆ ಏರಿಸಿದ್ದಾರೆ. ವಿಸಿಕೆ ಪಕ್ಷದ ಶಾಸಕರು ಸಂಪುಟ ಸೇರಿದರೆ ಈ ಸಂಖ್ಯೆ ಎಂಟಕ್ಕೇರಲಿದ್ದು, ತಮಿಳುನಾಡು ರಾಜಕೀಯದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ.
ಬ್ರಾಹ್ಮಣ ಮತ್ತು ಮಹಿಳಾ ಶಾಸಕರಿಗೂ ಮಣೆ
ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಉದ್ದೇಶ ಹೊಂದಿರುವ ವಿಜಯ್, ಸಚಿವ ಸಂಪುಟದಲ್ಲಿ ಸಮತೋಲನ ಕಾಯ್ದುಕೊಂಡಿದ್ದಾರೆ. ಇಬ್ಬರು ಬ್ರಾಹ್ಮಣ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಮೇಲ್ವರ್ಗದವರಿಗೂ ಸರ್ಕಾರದಲ್ಲಿ ಜವಾಬ್ದಾರಿ ನೀಡಲಾಗಿದೆ. ಇದರೊಂದಿಗೆ ನಾಲ್ವರು ಮಹಿಳಾ ಶಾಸಕಿಯರಿಗೆ ಸಚಿವ ಸ್ಥಾನದ ಹೊಣೆಗಾರಿಕೆ ವಹಿಸುವ ಮೂಲಕ ಸ್ತ್ರೀ ಶಕ್ತಿಗೆ ಗೌರವ ನೀಡಿದ್ದಾರೆ.
ಮಿತ್ರಪಕ್ಷಗಳಿಗೆ ಮೀಸಲಿಟ್ಟ ಸ್ಥಾನಗಳು
ಹಂಚಿಕೆಯಾಗಿರುವ 33 ಸ್ಥಾನಗಳ ಪೈಕಿ ಆರು ಮಂದಿ ಟಿವಿಕೆ ಶಾಸಕರಾಗಿದ್ದರೆ, ಒಬ್ಬರು ಕಾಂಗ್ರೆಸ್ ಶಾಸಕರಾಗಿದ್ದಾರೆ. ಬಾಕಿ ಉಳಿದಿರುವ ಎರಡು ಸ್ಥಾನಗಳಲ್ಲಿ ಒಂದನ್ನು ವಿಸಿಕೆ (ವಿಸುದಲೈ ಚಿರುತ್ತೈಗಲ್ ಕಚ್ಚಿ) ಹಾಗೂ ಇನ್ನೊಂದು ಸ್ಥಾನವನ್ನು ಇಂಡಿಯನ್ ಮುಸ್ಲಿಂ ಲೀಗ್ ಪಕ್ಷಕ್ಕೆ ಮೀಸಲಿಡಲಾಗಿದೆ.
ಸಾಮಾಜಿಕ ನ್ಯಾಯವೇ ನನ್ನ ಧ್ಯೇಯ ಎಂದು ಘೋಷಿಸಿದ್ದ ದಳಪತಿ ವಿಜಯ್, ಅಧಿಕಾರ ಹಿಡಿದ ತಕ್ಷಣವೇ ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಮೂಲಕ ನುಡಿದಂತೆ ನಡೆದಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಈ ಹೊಸ ರಾಜಕೀಯ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.







