ಹುಬ್ಬಳ್ಳಿ: ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿವಾದಾತ್ಮಕ ಹೆಸರಿನ ವಿಚಾರವಾಗಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಹೊಸ ಬೆಳವಣಿಗೆಯಿಂದ ಬಿಜೆಪಿ ವಿಚಲಿತವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನೇರವಾಗಿಯೇ ಟಾಂಗ್ ನೀಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಯ ಸೃಷ್ಟಿಯಿಂದ ಬಿಜೆಪಿ ಅಂಜಿಲ್ಲ, ಬದಲಿಗೆ ದೇಶದಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಭಯ ಶುರುವಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಸ್ತಿತ್ವಕ್ಕೆ ಕಾಕ್ರೋಚ್ ಭಯ
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ ಅವರು, ಕಾಂಗ್ರೆಸ್ ಪಕ್ಷ ದೇಶಾದ್ಯಂತ ಈಗಾಗಲೇ ತನ್ನ ನೆಲೆ ಕಳೆದುಕೊಂಡಿದೆ. ಹೀಗಿರುವಾಗ ಕಾಕ್ರೋಚ್ ತನ್ನನ್ನು ಎಲ್ಲಿ ಅಡಗಿಸಿಬಿಡುತ್ತದೋ ಅಥವಾ ಸಂಪೂರ್ಣವಾಗಿ ಅಳಿಸಿ ಹಾಕುತ್ತದೋ ಎಂಬ ಆತಂಕ ಕಾಂಗ್ರೆಸ್ ನಾಯಕರಿಗೆ ಎದುರಾಗಿದೆ. ಅದಕ್ಕಾಗಿಯೇ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ದೇಶದ ಭದ್ರತೆ, ನಾಗರಿಕರ ಹಿತರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ಘಟನೆ ನಡೆದರೂ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಿವೆ. ಇದರಲ್ಲಿ ಬಿಜೆಪಿ ವಿಚಲಿತವಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ: ಜೋಶಿ ಬೆಂಬಲ
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿಭಜನೆಯ ಕುರಿತು ಪ್ರಲ್ಹಾದ್ ಜೋಶಿ ಪ್ರಮುಖ ಹೇಳಿಕೆ ನೀಡಿದರು. ಈ ಮೊದಲು 16ನೇ ಹಣಕಾಸು ಆಯೋಗದ ನಿಯಮಗಳ ಪ್ರಕಾರ ದೊಡ್ಡ ಪಾಲಿಕೆ ಇದ್ದರೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಬಿಜೆಪಿಯ ಆಲೋಚನೆಯಾಗಿತ್ತು. ಆದರೆ ಧಾರವಾಡದ ಜನರ ಭಾವನೆ ಬೇರೆಯೇ ಇದೆ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕು ಎನ್ನುವುದು ಜನರ ಭಾವನಾತ್ಮಕ ಬೇಡಿಕೆಯಾಗಿದ್ದು, ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ಘೋಷಿಸಿದರು.
ರಾಜ್ಯಪಾಲರಿಗೆ ಮನವಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಧಾರವಾಡದ ಪ್ರತ್ಯೇಕ ಪಾಲಿಕೆ ರಚನೆಯ ಕುರಿತು ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದು ಜೋಶಿ ತಿಳಿಸಿದರು. ಪೆಂಡಿಂಗ್ ಇರುವ ಪ್ರಸ್ತಾವನೆಯನ್ನು ಕೂಡಲೇ ಕ್ಲಿಯರ್ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕೇವಲ ರಾಜಕಾರಣ ಮಾಡುತ್ತಿದ್ದಾರೆ ಹೊರತು, ಜನರ ಹಿತಾಸಕ್ತಿ ಅವರಿಗೆ ಬೇಕಿಲ್ಲ. ಪಾಲಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಯಾಕೆ ರಾಜ್ಯಪಾಲರನ್ನು ಭೇಟಿ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ಸಿಗರಿಗೆ ಜನರ ಭಾವನೆಗಳಿಗಿಂತ ರಾಜಕೀಯ ಲಾಭವೇ ಮುಖ್ಯವಾಗಿದೆ ಎಂದು ಟೀಕಿಸಿದರು.







