ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನೋಂದಣಿ, ಆಸ್ತಿ ಮತ್ತು ಆದಾಯದ ಬಗ್ಗೆ ವಿವರ ಕೇಳಿ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಪತ್ರಕ್ಕೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭರ್ಜರಿ ತಿರುಗೇಟು ನೀಡಿದ್ದಾರೆ. ಸಚಿವರ ಈ ನಡೆಯನ್ನು ರಾಜಕೀಯ ಗಿಮಿಕ್ ಎಂದು ಸಂಘದ ನಾಯಕರು ಬಣ್ಣಿಸಿದ್ದಾರೆ.
ಇದೊಂದು ರಾಜಕೀಯ ಗಿಮಿಕ್ ಎಂದ ಮೋಹನ್ ಭಾಗವತ್
ಕೇರಳದ ತ್ರಿಶೂರ್ ನಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಸರಸಂಘಚಾಲಕ ಮೋಹನ್ ಭಾಗವತ್, ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ನೇರವಾಗಿಯೇ ಉತ್ತರಿಸಿದ್ದಾರೆ. ಆರ್ ಎಸ್ ಎಸ್ ಎಂದಿಗೂ ರಹಸ್ಯವಾಗಿ ಕಾರ್ಯಾಚರಣೆ ನಡೆಸಿಲ್ಲ. ನಾವು ಮುಕ್ತ ಮೈದಾನದಲ್ಲಿ, ಸಾರ್ವಜನಿಕವಾಗಿ ಕೆಲಸ ಮಾಡುತ್ತೇವೆ. ನಮ್ಮ ಶಾಖೆಗಳು ಜನರ ಕಣ್ಣ ಮುಂದೆಯೇ ನಡೆಯುತ್ತವೆ ಮತ್ತು ನಮ್ಮ ಕಾರ್ಯಕರ್ತರು ಸಮಾಜದ ಭಾಗವಾಗಿಯೇ ಬದುಕುತ್ತಿದ್ದಾರೆ. ಹೀಗಿರುವಾಗ ರಹಸ್ಯದ ಪ್ರಶ್ನೆಯೇ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸವಾಲುಗಳು ನಮಗೆ ಹೊಸದಲ್ಲ
ಸಂಘವು ಆರಂಭವಾದಾಗಿನಿಂದಲೂ ಇಂತಹ ಅನೇಕ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಬ್ರಿಟಿಷರ ಕಾಲದಲ್ಲೂ ಸಂಘಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ಹಿಂದೆ ಎರಡು ಬಾರಿ ನಿಷೇಧ ಹೇರಿದ್ದರೂ, ನ್ಯಾಯಾಲಯ ಮತ್ತು ಸತ್ಯಾಗ್ರಹದ ಮೂಲಕ ಆ ನಿಷೇಧಗಳು ತೆರವುಗೊಂಡಿದ್ದವು. ಸಂಘಟನೆಯನ್ನು ವಿರೋಧಿಸುವುದು ಅಥವಾ ಅನುಮಾನಿಸುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಒಂದು ವೇಳೆ ಇಂತಹ ವಿರೋಧಗಳು ಬರದಿದ್ದರೆ ನಾವೇನಾದರೂ ತಪ್ಪು ಮಾಡುತ್ತಿದ್ದೇವೆಯೇ ಎಂದು ನಮಗೆ ಅನಿಸುತ್ತದೆ ಎಂದು ಭಾಗವತ್ ವ್ಯಂಗ್ಯವಾಡಿದ್ದಾರೆ.
ನೋಂದಣಿ ವಿಚಾರಕ್ಕೆ ತಾರ್ಕಿಕ ಉತ್ತರ
ಸಂಘದ ನೋಂದಣಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 1950ರ ದಶಕದಲ್ಲೇ ಸಂಘದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅಂದು ಯಾರೂ ನಮಗೆ ನೋಂದಣಿ ಮಾಡಲು ಹೇಳಿರಲಿಲ್ಲ. ಹಿಂದೂ ಧರ್ಮಕ್ಕೆ ಹೇಗೆ ನೋಂದಣಿ ಇಲ್ಲವೋ ಹಾಗೆಯೇ ಅನೇಕ ವಿಚಾರಗಳು ನೋಂದಣಿಯಾಗಿಲ್ಲ. ಇದೆಲ್ಲವೂ ರಾಜಕೀಯ ಪ್ರೇರಿತ ಪ್ರಶ್ನೆಗಳಾಗಿದ್ದು, ಇದರಲ್ಲಿ ಗಂಭೀರವಾಗಿ ಪರಿಗಣಿಸುವಂತದ್ದು ಏನೂ ಇಲ್ಲ. ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಲು ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳು ಈಗ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಸಂಘದ ನಾಯಕರು ಸಚಿವರ ವಾದವನ್ನು ತಳ್ಳಿಹಾಕಿದ್ದಾರೆ.







