ಇದು ಖಂಡಿತವಾಗಿಯೂ ಕಾಲ್ಪನಿಕ ಕಥೆಯಲ್ಲ. ನಮ್ಮ ಕಣ್ಣೆದುರೇ ನೋಡುತ್ತಿರುವ, ನಡೆದ, ನಡೆಯುತ್ತಿರುವ ವಾಸ್ತವ ಚಿತ್ರಣಗಳ ಅಕ್ಷರ ರೂಪವಷ್ಟೇ. ಬಂದೂಕಿನ ಸದ್ದುಗಳ ನಡುವೆ, ರಕ್ತದ ಮಡುವಿನಲ್ಲೇ ಹುಟ್ಟಿದ್ದ ಮಗು ಇಂದು ಫುಟ್ಬಾಲ್ ಜಗತ್ತಿನಲ್ಲಿ ಧ್ರುವನಕ್ಷತ್ರದಂತೆ ಹೊಳೆಯುತ್ತಿದೆ.
“ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿದ ಮಗು ಇಲ್ಲಿಯವರೆಗೆ ಬರಬಾರದಿತ್ತು. ಆದ್ರೆ ಯಾರನ್ನು ಕೂಡ ಕನಸುಗಳನ್ನು ನನಸು ಮಾಡುವುದು ಅಸಾಧ್ಯ ಅಂತ ಹೇಳಲು ಬಿಡಬೇಡಿ. ಪ್ರತಿಯೊಬ್ಬರು ಒಂದಲ್ಲ ಒಂದು ಕನಸು ಕಾಣುತ್ತಲೇ ಇರುತ್ತಾರೆ. ಆದ್ರೂ ಅದನ್ನು ನನಸು ಮಾಡಲು ದೃಢವಾದ ಮನಸ್ಸಿರಬೇಕು.. ಛಲವಿರಬೇಕು. ಕಠಿಣ ಪರಿಶ್ರಮವಿರಬೇಕು. ಅಷ್ಟೇ ಬದ್ದತೆಯೂ ಇರಬೇಕು. ಅದಕ್ಕಾಗಿ ಕನಸು ಕಾಣುತ್ತಲೇ ಇರಬೇಕು.. ಅದನ್ನು ಸಾಧಿಸುತ್ತಲೇ ಇರಬೇಕು ಅಷ್ಟೇ..” ಇದು ಬರೀ ಒಂದು ಟ್ವಿಟ್ನ ಪದಗಳಲ್ಲ. ಬ್ರಹ್ಮ ಬರೆದ ಹಣೆಬರೆಹವನ್ನು ತನ್ನ ಮಾಂತ್ರಿಕ ಕಾಲುಗಳಿಂದ ಬದಲಾಯಿಸಿದ ಅಪ್ರತಿಮ ಆಟಗಾರನ ಯಶೋಗಾಥೆ. ಕೆನಡಾ ಫುಟ್ಬಾಲ್ ತಂಡದ ಮಹಾನಾಯಕ ಅಲ್ಫಾನ್ಸೋ ಡೇವಿಡ್ನ ಅಂತರಂಗದ ನುಡಿಮುತ್ತುಗಳು.
ನಿಮ್ಮ ಹಿನ್ನೆಲೆ ಏನೇ ಇರಲಿ.. ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಮುಖ್ಯವಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ಅದನ್ನು ಸಾಧಿಸುವ ಛಲವಿದ್ರೆ ನಿಮಗೆ ಯಾವುದು ಕೂಡ ಅಸಾಧ್ಯವಲ್ಲ. ಈ ಮಹಾನ್ ಆಟಗಾರನ ಕಥೆ ಕನಸು ಕಾಣುವ ಪ್ರತಿಯೊಬ್ಬರಿಗೂ ದಾರಿದೀಪ. ಸ್ಪೂರ್ತಿಯ ಚಿಲುಮೆ. ಕೆಲವೊಂದು ಬಾರಿ ನಮಗೆ ಅನ್ಸುತ್ತೆ. ಅಪ್ರತಿಮ ಸಾಧನೆ ಮಾಡುವುದಕ್ಕೆ ದುಡ್ಡು ಬೇಕು.. ಅದೃಷ್ಟನೂ ಬೇಕು ಅಂತ. ಆದ್ರೆ ಈ ಕಥೆಯ ನಾಯಕನ ಬದುಕಿನ ಹಾದಿಯನ್ನು ನೋಡಿದಾಗ ಇಲ್ಲಿ ದುಡ್ಡು ಕೇವಲ ನೆಪವಷ್ಟೇ. ಅದೃಷ್ಟ ಬರೀ ಭ್ರಮೆ ಅಷ್ಟೇ.. ಯಾಕಂದ್ರೆ ಈತನಿಗೆ ತಾನು ಏನು ಆಗಬೇಕು ಎಂಬುದುರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ತನ್ನಲ್ಲಿ ಪ್ರತಿಭೆ – ಸಾಮಥ್ರ್ಯವಿದೆ ಅಂತ ಗೊತ್ತಾದಾಗ ತನಗೆ ಗೊತ್ತಿಲ್ಲದೇ ಹಾಗೇ ಕನಸು ಕಾಣತೊಡಗಿದ್ದ. ಆ ಕನಸನ್ನು ನನಸು ಮಾಡಲು ಹೊರಟಾಗ ಎದುರಿಗಿದ್ದ ಸವಾಲುಗಳನ್ನು ಮೆಟ್ಟಿನಿಂತ. ಅವಮಾನ, ಬಡತನ ಆತನಿಗೆ ಲೆಕ್ಕಕ್ಕೆ ಬರಲಿಲ್ಲ. ಯಾಕಂದ್ರೆ ಆತನ ಗುರಿ ಸ್ಪಷ್ಟವಾಗಿತ್ತು. ಅದರ ಬಗ್ಗೆ ಯೋಚನೆ ಮಾಡಲಿಲ್ಲ. ಸಿಕ್ಕಿದ್ದು ಪಂಚಾಮೃತ ಅಂತ ಅಂದುಕೊಂಡೇ, ಒಂದೊಂದು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಇಂದು ತಾನು ಏನು ಆಗಬೇಕು ಅಂದುಕೊಂಡಿದ್ದಾನೋ ಅದನ್ನು ಸಾಧಿಸಿದ್ದಾನೆ. ಮುಂದೆ ಬರುವುದು ಹೆಸರು, ಗೌರವ, ದುಡ್ಡು, ಸಿರಿತನವಷ್ಟೇ..! ಅಂದು ತನಗಾಗಿ ಕಷ್ಟಪಟ್ಟಿದ್ದ ಹೆತ್ತವರು ಇಂದು ಯಾರ ಹಂಗಿಲ್ಲದೆ ಗೌರವಯುತವಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ನಿರಾಶ್ರಿತರ ಬದುಕಿಗೆ ಕಲ್ಪವೃಕ್ಷವಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಫುಟ್ಬಾಲ್. ಅಬ್ಬಾಬ್ಬ… ಫುಟ್ಬಾಲ್ ಆಟ ಅಂದ್ರೆ ಅದು ಬರೀ ಆಟವಲ್ಲ. ಜಗತ್ತಿನ ಬಹುತೇಕ ಬಡ ಆಟಗಾರರ ಬದುಕನ್ನು ಶ್ರೀಮಂತಗೊಳಿಸಿದ್ದ ಮಾಂತ್ರಿಕ ಕ್ರೀಡೆ
ಹೌದು…ಕೆನಡಾ ಫುಟ್ಬಾಲ್ ತಂಡದ ನಾಯಕ ಅಲ್ಫಾನ್ಸೋ ಡೇವಿಸ್ ಎಂಬ ಫುಟ್ಬಾಲ್ ಧೀರನ ಕಥೆ ಶುರುವಾಗುವುದು ಇಲ್ಲಿಂದಲೇ..! ಅದು ಕೂಡ ರಕ್ತಸಿಕ್ತವಾದ ರಾಶಿ ರಾಶಿ ಹೆಣಗಳ ನಡುವಿನ ನಿರಾಶ್ರಿತರ ಶಿಬಿರದಿಂದ. ಅದು ಪಶ್ಚಿಮ ಆಫ್ರಿಕಾದ ಲೈಬಿರಿಯಾ ಎಂಬ ಸಣ್ಣ ದೇಶದಲ್ಲಿ ಭೀಕರ ಅಂತರ್ಯುದ್ಧ ನಡೆಯುತ್ತಿತ್ತು. ಇದು ಸುಮಾರು 26 ವರ್ಷಗಳ ಹಿಂದೆ ನಡೆದ ನೈಜ ಘಟನೆ. ಡೆಬಿಯಾ ಮತ್ತು ವಿಕ್ಟೋರಿಯಾ ಡೇವಿಸ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ವಿಕ್ಟೋರಿಯಾ ಡೇವಿಡ್ ತುಂಬು ಗರ್ಭಿಣಿ. ಆಗಲೇ ಲೈಬಿರಿಯಾದಲ್ಲಿ ಅಂತರ್ಯುದ್ದದಿಂದ ರಕ್ತಪಾತವೇ ಹರಿಯುತ್ತಿತ್ತು. ಕೈಯಲ್ಲಿ ಬಂದೂಕು ಇದ್ರೆ ಮಾತ್ರ ಜೀವ ಉಳಿಸಬಹುದಿತ್ತು. ಆದ್ರೆ ಡೆಬಿಯಾ ಹಾಗೇ ಮಾಡಲಿಲ್ಲ. ಬಂದೂಕು ಕೈ ಬಿಟ್ಟು ಡೇವಿಸ್ ದಂಪತಿಗಳು ಸೇರಿಕೊಂಡಿದ್ದು ಘಾನಾ ದೇಶದ ಬುಡುಬುರಾ ಅನ್ನೋ ನಿರಾಶ್ರಿತರ ಶಿಬಿರವನ್ನು. ಕಡುಬಡತನ.. ಕುಡಿಯಲು ಶುದ್ಧ ನೀರಿಲ್ಲ. ತಿನ್ನಲು ಆಹಾರವಿಲ್ಲ. ಜೀವ ಉಳಿದ್ರೆ ಸಾಕು ಎಂಬ ಸ್ಥಿತಿಯಲ್ಲಿತ್ತು ಆ ಕುಟುಂಬದ ಪರಿಸ್ಥಿತಿ. ಇಂತಹ ನರಕಸದೃಶ ಶಿಬಿರದಲ್ಲೇ ಫುಟ್ಬಾಲ್ ಜಗತ್ತಿನ ಅಪ್ರತಿಮ ಪ್ರತಿಭೆಯ ಜನನವಾಯ್ತು. ಆತನ ಹೆಸರೇ ಅಲ್ಫಾನ್ಸೊ ಡೇವಿಡ್.
ಆದ್ರೆ ಡೇವಿಸ್ ದಂಪತಿ ಮಗ ಹುಟ್ಟಿದ್ದ ಎಂದು ಸಂಭ್ರಮಿಸುವ ಸ್ಥಿತಿಯಲ್ಲಿರಲಿಲ್ಲ. ಯಾಕಂದ್ರೆ ಅಲ್ಲಿ ಜೀವ ಉಳಿಸಿಕೊಳ್ಳಬೇಕಾದ್ರೆ ಕೈಯಲ್ಲಿ ಬಂದೂಕು ಇರಲೇಬೇಕಿತ್ತು. ಆದ್ರೆ ಯಾರನ್ನು ಕೊಲ್ಲಲು ಮನಸ್ಸಿಲ್ಲದ ಡೇವಿಡ್ ದಂಪತಿ, ಹಸುಗೂಸನ್ನು ಎತ್ತಿಕೊಂಡು ದಿಕ್ಕು ದೆಸೆ ಇಲ್ಲದೆ ಸುತ್ತಾಡಿದ್ರು. ಕೊನೆಗೆ ಅಂಟ್ಲಾಟಿಕ್ ಸಾಗರದ ಮೂಲಕ ಭಯಾನಕ ನರಕÀದಿಂದ ತಪ್ಪಿಸಿಕೊಂಡು ಬಂದು ತಲುಪಿದ್ದು ಕೆನಡಾ ದೇಶವನ್ನು. ಎಡ್ಮಂಟನ್ ನಗರದಲ್ಲಿ ವಲಸಿಗರಾಗಿ ಜೀವನ ಸಾಗಿಸುತ್ತಿದ್ದರೂ ಬಡತನ ಮಾತ್ರ ಬೇತಾಳನಂತೆ ಬೆನ್ನಿಗೆ ಅಂಟಿಕೊಂಡಿತ್ತು. ಹಗಲು ರಾತ್ರಿ ಕೆಲಸ ಮಾಡಿದ್ರೂ ಹೊಟ್ಟೆ ತುಂಬಿಸಿಕೊಳ್ಳಲು ಆಗುತ್ತಿರಲಿಲ್ಲ. ಇದರ ನಡುವೆ ಇನ್ನಿಬ್ಬರ ಮಕ್ಕಳ ಲಾಲಾನೆ.. ಪಾಲನೆ. ಹೀಗಾಗಿ ಅಲ್ಫಾನ್ಸೋ ತನ್ನ ಐದನೇ ವಯಸ್ಸಿನಲ್ಲೇ ಒಡ್ಡಹುಟ್ಟಿದವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ.
ಸಹಜವಾಗಿ ಎಲ್ಲಾ ಪೋಷಕರ ಹಾಗೇ ಡೇವಿಡ್ ದಂಪತಿಗೂ ತನ್ನ ಮಗನಿಗೆ ಶಿಕ್ಷಣ ನೀಡಬೇಕು. ಆತ ಒಳ್ಳೆಯ ಉದ್ಯೋಗ ಪಡೆದುಕೊಂಡ್ರೆ ಮುಂದೆ ನಮ್ಮ ಬದುಕು ಹಸನಾಗುತ್ತೆ ಅನ್ನೋ ಬಯಕೆ. ಆದ್ರೆ ಅಲ್ಫಾನ್ಸೋಗೆ ಆಂಗ್ಲ ಬಾಷೆಯೇ ಕಗ್ಗಂಟಗಾಗಿ ಪರಿಣಮಿಸಿತ್ತು. ಇಂಗ್ಲೀಷ್ ಭಾಷೆ ಮಾತನಾಡಲು ಸಾಧ್ಯವಾಗದಿದ್ರೂ ಆತನ ಕಾಲುಗಳು ಫುಟ್ಬಾಲ್ ಮೈದಾನದಲ್ಲಿ ಮಾತನಾಡಲು ಶುರು ಮಾಡಿದ್ದವು. ಆದ್ರೆ, ಫುಟ್ಬಾಲ್ ಆಟ ಆಡುವುದು ಗೊತ್ತಿದ್ರೂ ಫುಟ್ಬಾಲ್ನ ಗ್ರಾಮರ್, ಕೌಶಲ್ಯಗಳನ್ನು ಕಲಿಯಲು ದುಡ್ಡು ಬೇಕಾಗಿತ್ತು. ಹೀಗಾಗಿ ಅಲ್ಫಾನ್ಸೋ ಕಲಿಯುತ್ತಿದ್ದ ಶಾಲೆಯ ಪಿಟಿ ಮಾಸ್ಟರ್ ಮೆಲಿಸ್ಸಾ ಗೊಜ್ಜೋ ಅವರು ಅಲ್ಫಾನ್ಸೋನ ಫುಟ್ಬಾಲ್ ಪ್ರತಿಭೆಯನ್ನು ಗುರುತಿಸಿದ್ರು. ಅಸಾಮಾನ್ಯ ಬಡ ಬಾಲಕನ ಪ್ರತಿಭೆ ಕಮರಿ ಹೋಗಬಾರದು ಅಂತ ಮೆಲಿಸ್ಸಾ ಅವರು, ಫ್ರೀ ಫುಟಿ ಸಂಸ್ಥೆಯ ಸಂಸ್ಥಾಪಕ ಟಿಮ್ ಆಡಮ್ಸ್ಗೆ ಪರಿಚಯಿಸಿದ್ರು. ಪುಟಾಣಿ ಅಲ್ಫಾನ್ಸೋ ಆಟವನ್ನು ಗಮನಿಸಿದ್ದ ಆಡಮ್ಸ್, ಸೇಂಟ್ ನಿಕೋಲಸ್ ಫುಟ್ಬಾಲ್ ಅಕಾಡೆಮಿಯ ಕೋಚ್ ಮಾರ್ಕ್ ಬೊಸ್ಸಿಯೋ ಗರಡಿಯಲ್ಲಿ ಪಳಗುವಂತೆ ಮಾಡಿದ್ರು. ನಂತರ ಅಲ್ಫಾನೋ ಹಿಂತಿರುಗಿ ನೋಡಲೇ ಇಲ್ಲ.
ಹಾಗೇ ನೋಡಿದ್ರೆ ಅಲ್ಫಾನ್ಸೋ ಇಷ್ಟೆಲ್ಲಾ ಪ್ರತಿಭೆ ಇದ್ರೂ ಫುಟ್ಬಾಲ್ ಆಟವನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದ್ರೆ ಅಲ್ಫಾನ್ಸೋನ ಕಾಲುಗಳು ಕಾಲ್ವೆಂಡಿನ ಜೊತೆ ಸರಸವಾಡುತ್ತಿರುವುದನ್ನು ನೋಡಿದವರು ಅಚ್ಚರಿಪಡುತ್ತಿದ್ದರು. ಹಾಗಂತ ಅಲ್ಫಾನ್ಸೋಗೆ ತಾನು ಚೆನ್ನಾಗಿ ಆಡುತ್ತಿದ್ದೇನೆ ಎಂಬ ಪರಿವೇ ಇರಲಿಲ್ಲ. ಯಾಕಂದ್ರೆ ಅಲ್ಫಾನ್ಸೋಗೆ ಫುಟ್ಬಾಲ್ ಆಟ ಅನ್ನೋದು ಬರೀ ಟೈಮ್ ಪಾಸ್ ಗೇಮ್ ಆಗಿತ್ತು. ಕೆಟ್ಟ ಹವ್ಯಾಸಗಳಿಂದ ದೂರವಿರಲು ಪುಟ್ಬಾಲ್ ಆಡುತ್ತಿದ್ದ ಅಲ್ಫಾನ್ಸೋಗೆ ತನ್ನ ಪ್ರತಿಭೆ, ಸಾಮಥ್ರ್ಯದ ಬಗ್ಗೆ ಪೋಷರಕು ಮತ್ತು ಸ್ನೇಹಿತರು ಹೇಳಿದಾಗಲೇ ಗೊತ್ತಾಗಿದ್ದು ತಾನೊಬ್ಬ ಫುಟ್ಬಾಲ್ ಆಟಗಾರನಾಗಬಹುದು ಅಂತ. ಆದಾದ ಬಳಿಕ ವೃತ್ತಿಪರ ಆಟಗಾರನಾಗಬೇಕು ಕನಸು ಚಿಗುರಿದಾಗ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ.
ಫುಟ್ಬಾಲ್ ಮೈದಾನದಲ್ಲಿ ಶರವೇಗದ ಓಟ, ಅದ್ಭುತ ಕೌಶಲ್ಯಗಳಿಂದ ಸಂಚಲನ ಮೂಡಿಸಿದ್ದ ಅಲ್ಫಾನ್ಸೋ ತನ್ನ 17ರ ಹರೆಯದಲ್ಲೆ ಕೆನಡಾ ರಾಷ್ಟ್ರೀಯ ತಂಡವನ್ನು ಸೇರಿಕೊಂಡ. ಮೂಲ ಲೈಬಿರಿಯವಾದ್ರೂ ಹುಟ್ಟಿದ್ದು ಘಾನದ ನಿರಾಶ್ರಿತರ ಶಿಬಿರದಲ್ಲಿ. ಬದುಕು ಕಟ್ಟಿಕೊಂಡಿದ್ದು ಕೆನಡಾದಲ್ಲಿ. ಫುಟ್ಬಾಲ್ ಪ್ರತಿಭೆಯಿಂದಲೇ ಯಾವುದೇ ಅಡೆತಡೆ ಇಲ್ಲದೆ ಕೆನಡಾ ದೇಶದ ಪೌರತ್ವವನ್ನು ಪಡೆದುಕೊಂಡ ಅಲ್ಫಾನ್ಸೋ ಈಗ ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾನೆ.
ನಿಜ, ದೊಡ್ಡ ಕನಸು ಕಂಡಾಗ ಕೆಲವೊಂದು ತ್ಯಾಗ ಕೂಡ ಮಾಡಬೇಕಾಗುತ್ತದೆ. ತನ್ನ 14ರ ಹರೆಯದಲ್ಲೇ ಕೆನಡಾ ದೇಶದ ಅತ್ಯುತ್ತಮ ಫುಟ್ಬಾಲ್ ಅಕಾಡೆಮಿ ವ್ಯಾಂಕೋವರ್ಗೆ ಹೋಗಬೇಕಾಗಿತ್ತು. ಆದ್ರೆ ಮಗನನ್ನು ಒಬ್ಬನನ್ನೇ ಕಳುಹಿಸಲು ತಾಯಿ ಹೃದಯಕ್ಕೆ ಇಷ್ಟವಿರಲಿಲ್ಲ್ಲ. ಕೊನೆಗೆ ನನ್ನ ಬದುಕಿಗೆ ಇದು ಒಂದೇ ಸರಿಯಾದ ದಾರಿ ಅಂತ ತಾಯಿಗೆ ಸಮಾಧಾನಪಡಿಸಿದ್ದ ಅಲ್ಫಾನ್ಸೋ, ಮುಂದೆ ಯಾರು ಊಹಿಸಲು ಸಾಧ್ಯವಾಗದ ಎತ್ತರಕ್ಕೆ ಬೆಳೆದು ನಿಂತ.
ಕೆನಡಾ ರಾಷ್ಟ್ರೀಯ ತಂಡಕ್ಕೆ ಎಂಟ್ರಿಯಾದ ನಂತರ ಅಲ್ಫಾನ್ಸೋ ತನ್ನ ಬದುಕಿನಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡಿದ್ದ. ಇದಕ್ಕೆ ಕಾರಣ ಕೆನಡಾ ತಂಡದ ಸೀನಿಯರ್ ಆಟಗಾರರು. ನಿದ್ದೆ ಜಾಸ್ತಿ ಮಾಡುತ್ತಿದ್ದ ಅಲ್ಫಾನ್ಸೋಗೆ ವೃತ್ತಿಪರ ಫುಟ್ಬಾಲ್ ಆಟಗಾರನಾದ ಬಳಿಕ ತನ್ನ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದ. ಪ್ರತಿ ದಿನವೂ ಹೊಸ ಪಾಠ. ಹೊಸ ಅನುಭವ. ಹೊಸ ಜಗತ್ತು. ಹೀಗಾಗಿ ಅಲ್ಫಾನ್ಸೋ ನೋಡ ನೋಡುತ್ತಲೇ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದ.
ಅಲ್ಲದೆ, ಹದಿಹರೆಯದ ಹುಡುಗನ ಮಾಂತ್ರಿಕ ಆಟವನ್ನು ಕಂಡ ಜರ್ಮನಿಯ ಬಯರ್ನ್ ಮ್ಯೂನಿಚ್ ಫುಟ್ಬಾಲ್ ಕ್ಲಬ್ ದುಬಾರಿ ಹಣ ನೀಡಿ ಅಲ್ಪಾನ್ಸೋನನ್ನು ಖರೀದಿ ಮಾಡಿತ್ತು. ಅಲ್ಲಿಂದ ಮುಂದೆ ಅಲ್ಫಾನ್ಸೋ ಬದುಕು ಬರೀ ಇತಿಹಾಸದ ಪುಟಗಳ ಒಂದೊಂದು ಅಧ್ಯಾಯವಷ್ಟೇ. ಅದರಲ್ಲೂ ಮಂಡಿನೋವಿನ ಗಾಯದಿಂದ ಚೇತರಿಸಿಕೊಂಡು, ಫುಟ್ಬಾಲ್ ಆಟಗಾರರ ಕನಸಿನ ಟ್ರೋಫಿ 2019-20ರ ಚಾಂಪಿಯನ್ಸ್ ಲೀಗ್ ಅನ್ನು ಗೆದ್ದಾಗ ಅಲ್ಫಾನ್ಸೋ ಕಾಲು ಭೂಮಿಯ ಮೇಲೆ ನಲಿದಾಡುತ್ತಿತ್ತು. ಅಷ್ಟೊಂದು ಸಂಭ್ರಮ, ಖುಷಿಯಲ್ಲಿ ತೇಲಾಡುತ್ತಿದ್ದ ಅಲ್ಫಾನ್ಸೋ ಡೇವಿಸ್.
ಈ ನಡುವೆ, ಅತ್ಯುತ್ತಮ ಫಾರ್ಮ್ನಲ್ಲಿದ್ದ ಅಲ್ಫಾನ್ಸೋ ಮೈದಾನದಲ್ಲಿ ಆಡುತ್ತಿರುವಾಗಲೇ ಮಂಡಿನೋವು ಕಾಣಿಸಿಕೊಂಡಿತ್ತು. ಇನ್ನೇನು ಫುಟ್ಬಾಲ್ ಬದುಕು ಮುಗಿದೇ ಹೋಯ್ತು ಅನ್ನುವಷ್ಟರಲ್ಲೇ ಅಲ್ಫಾನ್ಸೋ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದ್ದ. ನೋವಿಗೆ ಶರಣಾಗಿ ಕೈಚೆಲ್ಲುವುದರ ಬದಲು ಹೋರಾಟ ಮಾಡಿ ಬದುಕನ್ನು ಗೆಲ್ಲಬೇಕು ಎಂಬುದು ಅಲ್ಫಾನ್ಸೋ ಸಿದ್ದಾಂತವಾಗಿತ್ತು. ಕೇವಲ ಆರೇ ತಿಂಗಳಲ್ಲಿ ಚೇತರಿಸಿಕೊಂಡು ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದರ ಜೊತೆಗೆ ಫಿಫಾ ವಿಶ್ವಕಪ್ಗೆ ಫಿಟ್ ಆಂಡ್ ಫೈನ್ ಆಗಿ ತಂಡದ ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ. ಅಂದ್ರೆ ಆತನ ಮನಸ್ಸು, ದೇಹ ಎಷ್ಟು ಸದೃಢವಾಗಿರಬೇಕು ಅಲ್ವಾ..?
ಅದಕ್ಕೆ ಮುಖ್ಯ ಕಾರಣ ಬದುಕಿನಲ್ಲಿ ಭಯ, ಹೆದರಿಕೆ, ಅಂಜಿಕೆ ಇಲ್ಲದೇ ಬದುಕಿದ ರೀತಿ. ಕಷ್ಟ, ಹಸಿವು, ನಿರಾಸೆ, ಸಿರಿತನಕ್ಕೆ ಆಸೆಪಡೆಯದೇ ಒಂದು ಹೊತ್ತಿನ ಊಟ ಸಿಕ್ಕಿದ್ರೆ ಸಾಕು ಅನ್ನೋವವರಿಗೆ ಯಾವುದು ಕೂಡ ಅಸಾಧ್ಯವೂ ಆಗಲ್ಲ. ಎಲ್ಲವೂ ಸಾಧ್ಯವೇ ಆಗುತ್ತದೆ. ಯಾಕಂದ್ರೆ ಅವರಿಗೆ ಉಸಿರು ಇದ್ರೆ ಹೇಗಾದ್ರೂ ಬದುಕುತ್ತೇನೆ ಎಂಬ ನಂಬಿಕೆ ಇದೆ. ಹಾಗೇ ಅಲ್ಫಾನೋ ಬದುಕು ಕೂಡ. ತನ್ನ 14ರ ಹರೆಯದಲ್ಲೇ ಫುಟ್ಬಾಲ್ ಆಟದ ಭವಿಷ್ಯ ಹೇಗಿರುತ್ತದೆ.. ಇಲ್ಲಿ ತನ್ನ ಭವಿಷ್ಯ ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಕಲಿತುಕೊಂಡಿದ್ದ. ಇಲ್ಲಿ ಬಿದ್ದಾಗ ಯಾರು ಕೈ ಹಿಡಿಯಲ್ಲ. ಅಕಾಡೆಮಿಯಲ್ಲಿ ಹತ್ತಾರು ಮಂದಿ ಸಲಹೆ ಸೂಚನೆ ನೀಡುತ್ತಾರೆ. ಆದ್ರೆ ಒಂದು ಬಾರಿ ವೃತ್ತಿಪರ ಫುಟ್ಬಾಲ್ ಆಟಗಾರನಾದ್ರೆ ನಿನ್ನ ಬದುಕನ್ನು ನೀನೇ ರೂಪಿಸಿಕೊಳ್ಳಬೇಕು. ಬಿದ್ದಾಗ ನೀನೇ ಎದ್ದು ನಿಲ್ಲಬೇಕು ಎಂಬ ಕಟು ಸತ್ಯವನ್ನು ಅರಿತುಕೊಂಡಿದ್ದ. ಹೀಗಾಗಿಯೇ ಇವತ್ತು 2026ರ ವಿಶ್ವಕಪ್ ಟೂರ್ನಿಯಲ್ಲಿ ವಲಸಿಗನಾದ್ರೂ ಅಪ್ಪಟ ದೇಶ ಪ್ರೇಮಿಯಂತೆ ತಂಡವನ್ನು ಮುನ್ನಡೆಸುತ್ತಿದ್ದಾನೆ. ತನ್ನ ಬದುಕಿನ ಪ್ರತಿ ದಿನವನ್ನು ದೇವರ ಕೊಡುಗೆ ಎಂದು ನಂಬಿರುವ ಅಲ್ಫಾನ್ಸೋ, ಜಗತ್ತಿನ ಕೋಟ್ಯಂತರ ನಿರಾಶ್ರಿತರ ಕತ್ತಲೆಯ ಬದುಕಿಗೆ ಬೆಳಕಾಗುತ್ತಿದ್ದಾನೆ.
ಅಂದು ನಿರಾಶ್ರಿತರ ತಾಣದಲ್ಲಿ ನೆತ್ತರ ಹನಿಗಳ ಮಧ್ಯೆಯೇ ಹುಟ್ಟಿದ್ದ ಹಸುಗೂಸು ಇಂದು ಕೋಟ್ಯಂತರ ಬೆಲೆಬಾಳುವ ಬ್ಲ್ಯಾಕ್ ಡೈಮಂಡ್ನಂತೆ ಹೊಳೆಯುತ್ತಿದೆ. ಅಲ್ಫಾನ್ಸೋ ಬರೀ ಕೆನಡಾ ತಂಡದ ನಾಯಕನಲ್ಲ. ವಿಧಿಯಾಟಕ್ಕೆ ಸವಾಲು ಒಡ್ಡಿ ಇಡೀ ಫುಟ್ಬಾಲ್ ಜಗತ್ತಿನಲ್ಲಿ ಮಿಂಚು ಹರಿಸುತ್ತಿರುವ ಅಪರೂಪದ ಪ್ರತಿಭೆ. ಅಷ್ಟೇ ಅಲ್ಲ, ನಿರಾಶ್ರಿತರ, ಬಡ ಫುಟ್ಬಾಲ್ ಆಟಗಾರರ ಆಶಾಕಿರಣವಾಗಿರುವ ಅಲ್ಫಾನ್ಸೋ ಎಂಬ ಮಹಾನ್ ಆಟಗಾರನ ಕಥೆ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಒಂದು ಸ್ಫೂರ್ತಿಯ ಚಿಲುಮೆ.
ಸನತ್ ರೈ








