ಬೆಂಗಳೂರು ದಕ್ಷಿಣದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿರುವ ಕಾವೇರಿ ಪೈಪ್ ಲೈನ್ ರಸ್ತೆ ಇಂದು ಅಭಿವೃದ್ಧಿಯ ಸಂಕೇತವಾಗುವ ಬದಲು, ಅನಾರೋಗ್ಯದ ಅಗರವಾಗಿ ಮಾರ್ಪಟ್ಟಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಹಾದುಹೋಗುವ ಈ ರಸ್ತೆ, ಈಗ ಅಧಿಕೃತ ಡಂಪಿಂಗ್ ಯಾರ್ಡ್ ನಂತೆ ಭಾಸವಾಗುತ್ತಿದೆ. ಇಲ್ಲಿನ ನಿವಾಸಿಗಳ ಗೋಳು ಕೇಳುವವರಿಲ್ಲದಂತಾಗಿದ್ದು, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದಾ ಮಾಸ್ಕ್ ಧರಿಸಿಯೇ ಓಡಾಡಬೇಕಾದ ದುಸ್ಥಿತಿ
ಬಾಲಾಜಿ ಲೇ ಔಟ್ ಸೇರಿದಂತೆ ಈ ರಸ್ತೆಯ ಅಕ್ಕಪಕ್ಕದಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪ್ರತಿನಿತ್ಯ ನೂರಾರು ಮಂದಿ ಸಂಚರಿಸುವ ಈ ಮಾರ್ಗದಲ್ಲಿ ಈಗ ಉಸಿರಾಡುವುದೇ ಕಷ್ಟವಾಗಿದೆ. ಕೊರೊನಾ ಕಾಲದಲ್ಲಿ ಮಾಸ್ಕ್ ಧರಿಸುತ್ತಿದ್ದ ಜನ, ಇಂದು ಇಲ್ಲಿನ ದರ್ವಾಸನೆಯಿಂದ ಬಚಾವಾಗಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ ಬಿದ್ದಿರುವುದರಿಂದ, ಗಾಳಿ ಬೀಸಿದಾಗ ಪ್ಲಾಸ್ಟಿಕ್ ತ್ಯಾಜ್ಯಗಳು ಮನೆಗಳ ಒಳಗೆ ನುಗ್ಗುತ್ತಿವೆ.
ನಾಗರಿಕ ಪ್ರಜ್ಞೆ ಮರೆತವರಿಂದ ಹೆಚ್ಚುತ್ತಿದೆ ಆತಂಕ
ರಸ್ತೆಯ ಬದಿಯಲ್ಲಿ ಯಾರು ಕಸ ಸುರಿಯುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕ ಪ್ರಜ್ಞೆಯಿಲ್ಲದ ಕೆಲವರು ಕತ್ತಲೆಯಲ್ಲಿ ಅಥವಾ ಯಾರು ಇಲ್ಲದ ಸಮಯ ನೋಡಿಕೊಂಡು ಕಸ ಎಸೆದು ಪರಾರಿಯಾಗುತ್ತಿದ್ದಾರೆ. ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಈ ಸಮಸ್ಯೆ ಮುಗಿಯುತ್ತಿಲ್ಲ. ಮಳೆ ಬಂದರೆ ಕೆಸರು ಮತ್ತು ಕೊಳೆತ ಕಸದ ವಾಸನೆ ನಿವಾಸಿಗಳ ನೆಮ್ಮದಿಯನ್ನು ಕೆಡಿಸಿದೆ. ಬಿಸಿಲು ಬಂದರಂತೂ ಇಲ್ಲಿನ ವಾಸನೆ ಅಸಹನೀಯವಾಗುತ್ತಿದೆ.
ರೋಗರುಜಿನಗಳ ಭೀತಿ ಮತ್ತು ಬೀದಿನಾಯಿಗಳ ಕಾಟ
ಈ ಡಂಪಿಂಗ್ ಯಾರ್ಡ್ ಈಗ ಬೀಡಾಡಿ ದನಗಳು ಮತ್ತು ನಾಯಿಗಳ ವಾಸಸ್ಥಾನವಾಗಿದೆ. ರಾತ್ರಿ ವೇಳೆಯಲ್ಲಿ ಇಲ್ಲಿ ಓಡಾಡುವುದು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತಿದೆ. ಕಸದ ರಾಶಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ನಮಗೆ ಶುದ್ಧ ಗಾಳಿ ಮತ್ತು ನೆಮ್ಮದಿಯ ಬದುಕು ಬೇಕು ಎನ್ನುವುದು ಇಲ್ಲಿನ ಜನರ ಏಕೈಕ ಬೇಡಿಕೆಯಾಗಿದೆ.
ಅಧಿಕಾರಿಗಳ ಗಮನಕ್ಕೆ ನಿವಾಸಿಗಳ ಮನವಿ
ಈ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವ ನಿವಾಸಿಗಳು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್, ಸಂಸದೆ ಶೋಭಾ ಕರಂದ್ಲಾಜೆ, ಬಿಬಿಎಂಪಿ ಆಯುಕ್ತರು ಹಾಗೂ ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳಿಗೆ ಬಹಿರಂಗ ಮನವಿ ಮಾಡಿದ್ದಾರೆ. ಒಂದು ವೇಳೆ ಈ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಈ ರಸ್ತೆಯನ್ನೇ ಸಂಪೂರ್ಣವಾಗಿ ಮುಚ್ಚಿಬಿಡಿ ಎಂದು ನೊಂದ ನಿವಾಸಿಗಳು ಆಗ್ರಹಿಸಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಈ ಕೂಡಲೇ ಎಚ್ಚೆತ್ತುಕೊಂಡು, ಹೆಮ್ಮಿಗೆಪುರದ ಈ ರಸ್ತೆಯನ್ನು ಕಸಮುಕ್ತಗೊಳಿಸಿ ಜನರ ಆರೋಗ್ಯವನ್ನು ಕಾಪಾಡಬೇಕಿದೆ.
ಸನತ್ ರೈ







