ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿರುವ ನಟ ವಿನಯ್ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಒಂದು ವಿಶ್ಲೇಷಣಾತ್ಮಕ ಉತ್ತರದ ಮೂಲಕ ಟ್ರೋಲ್ ಆಗುತ್ತಿರುವ ವಿನಯ್, ಈಗ ಟ್ರೋಲಿಗರಿಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಟ್ರೋಲ್ ಮಾಡುವುದರಿಂದ ತನಗಾಗುತ್ತಿರುವ ಲಾಭಗಳ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿದ್ದಾರೆ.
ವೃತ್ತಕ್ಕೆ ಎರಡು ಬದಿ ಇವೆ ಎಂಬ ವಿವಾದ ಮತ್ತು ಲಾಜಿಕ್
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬನಿಗೆ ಸವಾಲು ಹಾಕುವಾಗ ಸರ್ಕಲ್ಗೆ ಎರಡು ಸೈಡ್ಸ್ ಇರುತ್ತವೆ ಎಂದು ವಿನಯ್ ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರಿಗೆ ಗಣಿತ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು. ಕೆಲವರಂತೂ ಇವರ ಫೋಟೋಗೆ ಐನ್ಸ್ಟೈನ್ ಹೇರ್ಸ್ಟೈಲ್ ಜೋಡಿಸಿ ಅಲ್ಬರ್ಟ್ ವಿನಯ್ ಗೌಡ್ಸ್ಟೀನ್ ಎಂದು ಹೆಸರಿಟ್ಟು ಕಾಲೆಳೆದಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ವಿನಯ್ ಗೌಡ, ಮ್ಯಾಥಮೆಟಿಕಲ್ ಆಗಿ ನೋಡುವುದಾದರೆ ಜೋರ್ಡಾನ್ ಕರ್ವ್ ಪ್ರಮೇಯದ ಪ್ರಕಾರ ಒಂದು ಕ್ಲೋಸ್ಡ್ ಲೈನ್ ಕರ್ವ್ಗೆ ಇನ್ಸೈಡ್ ಮತ್ತು ಔಟ್ಸೈಡ್ ಎಂಬ ಎರಡು ಭಾಗಗಳು ಇರುತ್ತವೆ. ಆ ಸ್ಪರ್ಧಿ ವೃತ್ತದ ಒಳಗಡೆ ನಿಂತಿದ್ದ, ಅವನು ಹೊರಗಡೆ ಹೋಗಬೇಕಿತ್ತು. ಅದೇ ಉದ್ದೇಶದಿಂದ ನಾನು ಒಳಗಡೆ ಮತ್ತು ಹೊರಗಡೆ ಎಂಬ ಎರಡು ಬದಿಗಳ ಬಗ್ಗೆ ಹೇಳಿದ್ದು. ಇದನ್ನು ಅರ್ಥ ಮಾಡಿಕೊಳ್ಳದೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಇದರಿಂದ ನನಗೆ ಖುಷಿಯೇ ಇದೆ ಎಂದು ಹೇಳಿದ್ದಾರೆ.
ಬೆಳಗ್ಗೆ ಎದ್ದ ತಕ್ಷಣ ಬ್ಯಾಂಕ್ ಅಕೌಂಟ್ ಚೆಕ್ ಮಾಡುತ್ತೇನೆ
ನನ್ನನ್ನು ಟ್ರೋಲ್ ಮಾಡಿದಷ್ಟು ನನಗೇ ಲಾಭ. ಕೋಟಿ ರೂಪಾಯಿ ಖರ್ಚು ಮಾಡಿದರೂ ಬಿಗ್ ಬಾಸ್ ಅಗ್ನಿಪರೀಕ್ಷೆ ಕಾರ್ಯಕ್ರಮಕ್ಕೆ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲ. ನಾನು ಬೆಳಗ್ಗೆ ಎದ್ದ ತಕ್ಷಣ ಇನ್ಸ್ಟಾಗ್ರಾಮ್ ನೋಡುವುದಿಲ್ಲ, ಬದಲಾಗಿ ನನ್ನ ಬ್ಯಾಂಕ್ ಅಕೌಂಟ್ ನೋಡುತ್ತೇನೆ. ಟ್ರೋಲ್ ಹೆಚ್ಚಾದಂತೆ ನನ್ನ ವ್ಯವಹಾರ ಮತ್ತು ಪ್ರಮೋಷನ್ಗಳು ಹೆಚ್ಚುತ್ತಿವೆ. ನಿನ್ನೆ ಒಂದೇ ದಿನ ಮೂರು ಹೊಸ ಪ್ರಮೋಷನ್ ಡೀಲ್ಗಳು ಬುಕ್ ಆಗಿವೆ. ನನ್ನನ್ನು ಟ್ರೋಲ್ ಮಾಡುವವರು ತಮಗರಿವಿಲ್ಲದಂತೆ ನನಗೇ ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದ್ದಾರೆ ಎಂದು ವಿನಯ್ ಟಾಂಗ್ ನೀಡಿದ್ದಾರೆ.
ಕಾಮನ್ ಮ್ಯಾನ್ ಸೆಲೆಬ್ರಿಟಿಗಳ ಮುಂದೆ ಡಮ್ಮಿ ಆಗಬಾರದು
ಬಿಗ್ ಬಾಸ್ ಮನೆಗೆ ಸಾಮಾನ್ಯ ವ್ಯಕ್ತಿಗಳು ಪ್ರವೇಶಿಸುವಾಗ ಅವರು ಸೆಲೆಬ್ರಿಟಿಗಳ ಮುಂದೆ ಸಾಧಾರಣವಾಗಿ ಕಾಣಬಾರದು. ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸುವುದೇ ಜ್ಯೂರಿಗಳಾದ ನಮ್ಮ ಕೆಲಸ. ಅವರಿಗೆ ನಾವು ನೀಡುವ ಗ್ರಿಲ್ಲಿಂಗ್ ಒಂದು ರೀತಿಯಲ್ಲಿ ಕ್ರಾಶ್ ಕೋರ್ಸ್ ಇದ್ದಂತೆ. ಸ್ಪರ್ಧಿಗಳು ವೇದಿಕೆಯ ಮೇಲೆ ಎದುರಿಸುವ ಸವಾಲುಗಳು ಅವರನ್ನು ಮನೆಯ ಒಳಗಡೆ ಬಲಿಷ್ಠವಾಗಿರಿಸುತ್ತವೆ ಎಂದು ವಿನಯ್ ಗೌಡ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.







