ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸಿ ಇಡೀ ದೇಶದ ಗಮನ ಸೆಳೆದಿದ್ದ ಕಾಕ್ರೋಚ್ ಜನತಾ ಪಾರ್ಟಿ ಅಥವಾ ಸಿಜೆಪಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರೆ ಏನಾಗಬಹುದು ಎನ್ನುವ ಕುತೂಹಲಕ್ಕೆ ಇಂಡಿಯಾ ಟುಡೇ ಮತ್ತು ಸಿ ವೋಟರ್ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಮಹತ್ವದ ಉತ್ತರ ನೀಡಿದೆ. ಬೀದಿ ಹೋರಾಟಗಳಲ್ಲಿ ಜನಬೆಂಬಲ ಗಳಿಸುವುದು ಸುಲಭವಾದರೂ, ಅದನ್ನು ಮತಗಳನ್ನಾಗಿ ಪರಿವರ್ತಿಸುವುದು ಅತ್ಯಂತ ಸವಾಲಿನ ಕೆಲಸ ಎಂಬ ಕಹಿ ಸತ್ಯ ಈ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಸಮೀಕ್ಷೆಯ ಅಂಕಿಅಂಶಗಳ ವಿವರ
ಒಂದು ವೇಳೆ ಸಿಜೆಪಿ ಪೂರ್ಣಪ್ರಮಾಣದ ರಾಜಕೀಯ ಪಕ್ಷವಾಗಿ ರೂಪಗೊಂಡು ಚುನಾವಣೆಗೆ ಸ್ಪರ್ಧಿಸಿದರೆ ಸುಮಾರು ಶೇಕಡಾ 43 ರಷ್ಟು ಮತದಾರರು ಆ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ನೇರವಾಗಿ ತಿಳಿಸಿದ್ದಾರೆ. ಕೇವಲ ಶೇಕಡಾ 33 ರಷ್ಟು ಜನರು ಮಾತ್ರ ಸಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಉಳಿದ ಶೇಕಡಾ 24 ರಷ್ಟು ಮತದಾರರು ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಈ ಅಂಕಿಅಂಶಗಳು ಹೊಸದಾಗಿ ಹುಟ್ಟಿಕೊಳ್ಳುವ ರಾಜಕೀಯ ಪಕ್ಷಗಳಿಗೆ ಮತದಾರರ ವಿಶ್ವಾಸ ಗಳಿಸುವುದು ಎಷ್ಟು ಕಷ್ಟ ಎಂಬದನ್ನು ಸಾಬೀತುಪಡಿಸಿವೆ.
ಒತ್ತಡದ ಗುಂಪಾಗಿ ಉಳಿಯುವ ನಿರ್ಧಾರಕ್ಕೆ ಸಿಕ್ಕಿತು ಜೈ
ನೇರ ಚುನಾವಣಾ ರಾಜಕೀಯಕ್ಕೆ ಧುಮುಕುವ ಬದಲು ಸರ್ಕಾರದ ಮೇಲೆ ಪ್ರಭಾವ ಬೀರುವ ಒತ್ತಡದ ಗುಂಪಾಗಿ ಅಥವಾ ಪ್ರೆಶರ್ ಗ್ರೂಪ್ ಆಗಿ ಮುಂದುವರಿಯಲು ಸಿಜೆಪಿ ನಿರ್ಧರಿಸಿತ್ತು. ಸಿಜೆಪಿಯ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 39 ರಷ್ಟು ಜನ ಸಿಜೆಪಿಯ ಈ ನಡೆಯನ್ನು ಸ್ವಾಗತಿಸಿದ್ದಾರೆ. ಆದರೆ ಶೇಕಡಾ 26 ರಷ್ಟು ಜನರು ಮಾತ್ರ ಸಿಜೆಪಿ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಬೇಕಿತ್ತು ಎನ್ನುವ ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಳಿದ ಶೇಕಡಾ 34 ರಷ್ಟು ಮಂದಿ ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ಹೊಂದಿಲ್ಲ.
ಬೃಹತ್ ಪ್ರತಿಭಟನೆಗಳು ಅಥವಾ ಸಾಮಾಜಿಕ ಚಳವಳಿಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯುವ ಸಾಮರ್ಥ್ಯಕ್ಕೂ, ಅದನ್ನು ಚುನಾವಣೆಯಲ್ಲಿ ಗೆಲುವನ್ನಾಗಿ ಪರಿವರ್ತಿಸುವ ಸಾಮರ್ಥ್ಯಕ್ಕೂ ನಡುವೆ ದೊಡ್ಡ ಅಂತರವಿದೆ ಎಂಬುದನ್ನು ಈ ಸಮೀಕ್ಷೆ ಎತ್ತಿಹಿಡಿದಿದೆ. ಜನಸಾಮಾನ್ಯರ ಸಮಸ್ಯೆಗಳಿಗಾಗಿ ಹೋರಾಡುವ ಸಂಘಟನೆಯಾಗಿ ಸಿಜೆಪಿಯನ್ನು ಜನರು ಇಷ್ಟಪಡುತ್ತಿದ್ದಾರೆಯೇ ಹೊರತು, ಸದ್ಯಕ್ಕೆ ಅದನ್ನು ಅಧಿಕಾರ ಹಿಡಿಯುವ ರಾಜಕೀಯ ಶಕ್ತಿಯಾಗಿ ನೋಡಲು ಸಿದ್ಧರಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಇಂಡಿಯಾ ಟುಡೇ ಗ್ರೂಪ್ ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರಸಿದ್ಧ ದ್ವೈವಾರ್ಷಿಕ ಸಮೀಕ್ಷೆ ಮೂಡ್ ಆಫ್ ದಿ ನೇಷನ್ ಇದಾಗಿದೆ. 2026 ರ ಆಗಸ್ಟ್ ಆವೃತ್ತಿಯ ಈ ಸಮೀಕ್ಷೆಯನ್ನು ಸಿ ವೋಟರ್ ಸಂಸ್ಥೆಯು ಜುಲೈ 1 ರಿಂದ ಆಗಸ್ಟ್ 25 ರ ನಡುವೆ 25,184 ಜನರನ್ನು ನೇರವಾಗಿ ಸಂಪರ್ಕಿಸಿ ನಡೆಸಿದೆ. ಇದರೊಂದಿಗೆ ಕಳೆದ 6 ತಿಂಗಳುಗಳಲ್ಲಿ ನಡೆಸಿದ್ದ 91,795 ಸಂದರ್ಶನಗಳ ಅಂಕಿಅಂಶಗಳನ್ನು ಬಳಸಿಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದು ದೇಶದ ನಾಡಿಮಿಡಿತವನ್ನು ಅರಿಯುವಲ್ಲಿ ಅತ್ಯಂತ ವಿಶ್ವಾಸಾರ್ಹ ಸಮೀಕ್ಷೆಯಾಗಿದೆ.







