ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ವಿದೇಶ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವೊಂದು ಸೃಷ್ಟಿಯಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಆಡಳಿತಾರೂಢ ಬಿಜೆಪಿ ನಾಯಕರಿಗೆ ಬಹಿರಂಗವಾಗಿಯೇ ಬಂಪರ್ ಆಫರ್ ಒಂದನ್ನು ನೀಡಿದ್ದು, 100 ಶಾಸಕರನ್ನು ಕರೆತರುವ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ತಾವು ಸಿದ್ಧ ಎಂದು ಘೋಷಿಸಿದ್ದಾರೆ.
ಲಕ್ನೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಬಿಜೆಪಿಯೊಳಗಿನ ಆಂತರಿಕ ಅಸಮಾಧಾನವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಲ್ಕು ದಿನಗಳ ಕಾಲ ಸಿಂಗಾಪುರ ಮತ್ತು ಜಪಾನ್ ಪ್ರವಾಸದಲ್ಲಿದ್ದಾರೆ. ಅವರು ಭಾರತದಿಂದ ಹೊರಗಿರುವ ಇದೇ ಸಮಯವನ್ನು ಅಖಿಲೇಶ್ ಯಾದವ್ ದಾಳವಾಗಿ ಬಳಸಿಕೊಂಡಂತೆ ಕಾಣುತ್ತಿದೆ.
ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದ ಅಖಿಲೇಶ್, ಬಿಜೆಪಿಯ ಅಸಮಾಧಾನಿತ ನಾಯಕರನ್ನುದ್ದೇಶಿಸಿ, ಅವರು (ಯೋಗಿ ಆದಿತ್ಯನಾಥ್) ಸದ್ಯ ದೇಶದಿಂದ ಹೊರಗಿದ್ದಾರೆ. ಇದೇ ಸರಿಯಾದ ಸಮಯ. ನೀವು 100 ಶಾಸಕರನ್ನು ಕರೆತನ್ನಿ ಮತ್ತು ಮುಖ್ಯಮಂತ್ರಿಯಾಗಿ. ಇಬ್ಬರು ನಾಯಕರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಯಾರು ಶಾಸಕರನ್ನು ಒಗ್ಗೂಡಿಸಿ ಕರೆತರುತ್ತಾರೋ ಅವರಿಗೆ ಈ ಅವಕಾಶ ಸಿಗಲಿದೆ. ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಉಪಮುಖ್ಯಮಂತ್ರಿಗಳಿಗೆ ಗಾಳ ಹಾಕಿದ ಅಖಿಲೇಶ್
ಅಖಿಲೇಶ್ ಯಾದವ್ ಅವರ ಈ ನಿಗೂಢ ಹೇಳಿಕೆಯ ಬಗ್ಗೆ ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಅವರು ಹೆಚ್ಚಿನ ಸ್ಪಷ್ಟನೆ ನೀಡಿದ್ದಾರೆ. ಅಖಿಲೇಶ್ ಅವರ ಈ ಆಫರ್ ಪ್ರಮುಖವಾಗಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರಿಗೆ ಅನ್ವಯಿಸುತ್ತದೆ. ಅಷ್ಟೇ ಅಲ್ಲದೆ, ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡಿರುವ ಬಿಜೆಪಿಯ ಇತರ ಪ್ರಬಲ ನಾಯಕರಿಗೂ ಈ ಆಹ್ವಾನ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ.
ಸಂಖ್ಯಾಬಲದ ಲೆಕ್ಕಾಚಾರವೇನು
ಉತ್ತರ ಪ್ರದೇಶ ವಿಧಾನಸಭೆಯು ಒಟ್ಟು 403 ಸದಸ್ಯ ಬಲವನ್ನು ಹೊಂದಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಮಾತ್ರ 100ಕ್ಕೂ ಹೆಚ್ಚು ಶಾಸಕರನ್ನು ಹೊಂದಿವೆ. ಹೀಗಾಗಿ ಸರ್ಕಾರ ರಚಿಸಲು ಅಥವಾ ಉರುಳಿಸಲು ದೊಡ್ಡ ಮಟ್ಟದ ಸಂಖ್ಯಾಬಲದ ಅವಶ್ಯಕತೆಯಿದೆ. ಇದನ್ನರಿತೇ ಅಖಿಲೇಶ್ ಯಾದವ್ 100 ಶಾಸಕರ ಷರತ್ತನ್ನು ವಿಧಿಸಿದ್ದಾರೆ. ಅಖಿಲೇಶ್ ಯಾದವ್ ಅವರು ಬಿಜೆಪಿ ನಾಯಕರಿಗೆ ಇಂತಹ ಆಫರ್ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಎರಡು ಬಾರಿ ಇದೇ ರೀತಿಯ ಹೇಳಿಕೆ ನೀಡಿದ್ದ ಅವರು, ಇದೀಗ ಮೂರನೇ ಬಾರಿಗೆ ಬಿಜೆಪಿಯನ್ನು ಒಡೆಯುವ ತಂತ್ರ ಹೂಡಿದ್ದಾರೆ.
ಯೋಗಿ ಅನುಪಸ್ಥಿತಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ಗುಸುಗುಸು ಕೇಳಿಬರುತ್ತಿರುವ ಸಂದರ್ಭದಲ್ಲೇ, ಅಖಿಲೇಶ್ ಯಾದವ್ ಅವರ ಈ ಹೇಳಿಕೆಯು ಕೇಸರಿ ಪಾಳೆಯದಲ್ಲಿ ಯಾವ ರೀತಿಯ ಕಂಪನ ಉಂಟುಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.







