ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರ ದರ್ಪ ಮತ್ತು ದುಬಾರಿ ದರ ವಸೂಲಿ ಹೊಸದೇನಲ್ಲ. ಪ್ರಾಮಾಣಿಕವಾಗಿ ಆಟೋ ಓಡಿಸುವವರ ನಡುವೆ, ಪ್ರಯಾಣಿಕರಿಂದ ಸುಲಿಗೆ ಮಾಡಲು ಹೊಂಚು ಹಾಕುವ ಕೆಲವು ಚಾಲಕರಿಂದಾಗಿ ಇಡೀ ಆಟೋ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದೀಗ ಮೆಜೆಸ್ಟಿಕ್ ನಿಂದ ಕತ್ರಿಗುಪ್ಪೆಗೆ ತೆರಳಲು ಬರೋಬ್ಬರಿ 700 ರೂಪಾಯಿ ಬೇಡಿಕೆ ಇಟ್ಟು, ಮಹಿಳಾ ಪ್ರಯಾಣಿಕರೊಂದಿಗೆ ಉದ್ಧಟತನ ತೋರಿದ ಆಟೋ ಚಾಲಕನಿಗೆ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ.
ಘಟನೆ ನಡೆದದ್ದು ಮುಂಜಾನೆ 5 ಗಂಟೆಯ ಸುಮಾರಿಗೆ ಪರ ಊರಿನಿಂದ ಬಂದು ಮೆಜೆಸ್ಟಿಕ್ ನಲ್ಲಿ ಇಳಿದ ಮಹಿಳೆಯೊಬ್ಬರು ತಮ್ಮ ಮನೆಗೆ ಹೋಗಲು ಆಟೋ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿ ನಿಂತಿದ್ದ ಆಟೋ ಚಾಲಕನೊಬ್ಬನ ಬಳಿ ಕತ್ರಿಗುಪ್ಪೆಗೆ ಬರಲು ಕೇಳಿದ್ದಾರೆ. ಸಾಮಾನ್ಯವಾಗಿ ಈ ಮಾರ್ಗಕ್ಕೆ ಮೀಟರ್ ದರ ಅಥವಾ ಒಂದೂವರೆ ಪಟ್ಟು ಹೆಚ್ಚು ಎಂದು ಲೆಕ್ಕ ಹಾಕಿದರೂ 200 ರಿಂದ 250 ರೂಪಾಯಿ ಆಗಬಹುದು. ಆದರೆ, ಈ ಆಟೋ ಚಾಲಕ ಬರೋಬ್ಬರಿ 700 ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ.
ಪ್ರಶ್ನಿಸಿದಕ್ಕೆ ಏಕವಚನದಲ್ಲಿ ನಿಂದನೆ
ಇಷ್ಟೊಂದು ದೊಡ್ಡ ಮೊತ್ತವನ್ನು ಕೇಳಿದ್ದಕ್ಕೆ ಶಾಕ್ ಆದ ಮಹಿಳೆ, ಮೀಟರ್ ಗಿಂತ ಇಷ್ಟೊಂದು ಹಣ ಯಾಕೆ ಜಾಸ್ತಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಚಾಲಕ, ಸೌಜನ್ಯ ಮರೆತು ಮಹಿಳೆಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ.
ಚಾಲಕನ ವರ್ತನೆಯಿಂದ ಬೇಸತ್ತ ಮಹಿಳೆ
ಆಟೋದಿಂದ ಕೆಳಗಿಳಿದು, ಆತನ ದರ್ಪವನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲು ಮುಂದಾಗಿದ್ದಾರೆ. ವಿಡಿಯೋ ಮಾಡುವುದನ್ನು ಕಂಡ ಚಾಲಕ ಇನ್ನಷ್ಟು ರೊಚ್ಚಿಗೆದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಬೆವರಿಳಿಸಿದ ಉಪ್ಪಾರಪೇಟೆ ಪೊಲೀಸರು
ಧೃತಿಗೆಡದ ಮಹಿಳೆ, ವಿಡಿಯೋ ಸಾಕ್ಷ ಸಮೇತ ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆಟೋ ಸಂಖ್ಯೆಯ ಆಧಾರದ ಮೇಲೆ ಚಾಲಕನನ್ನು ಪತ್ತೆಹಚ್ಚಿದ್ದಾರೆ. ಠಾಣೆಗೆ ಕರೆಸಿ ಆತನಿಗೆ ಖಾಕಿ ರುಚಿ ತೋರಿಸಿದ್ದಾರೆ.
ನಿಯಮ ಮೀರಿದ ದರ ಬೇಡಿಕೆ ಮತ್ತು ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ ಕಾರಣಕ್ಕೆ ಆಟೋ ಚಾಲಕನಿಗೆ ಭಾರೀ ದಂಡ ವಿಧಿಸಲಾಗಿದೆ. ಅಲ್ಲದೆ, ಇನ್ನೊಮ್ಮೆ ಪ್ರಯಾಣಿಕರೊಂದಿಗೆ ಈ ರೀತಿ ನಡೆದುಕೊಂಡರೆ ಅಥವಾ ಸುಲಿಗೆ ಮಾಡಲು ಯತ್ನಿಸಿದರೆ ಆಟೋ ಪರವಾನಗಿ ರದ್ದು ಮಾಡುವುದಾಗಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯು ಬೆಂಗಳೂರಿನಲ್ಲಿ ಮನಬಂದಂತೆ ಹಣ ಕೇಳುವ ಇತರೆ ಆಟೋ ಚಾಲಕರಿಗೆ ಪಾಠವಾಗಿದ್ದು, ಸಾರ್ವಜನಿಕರು ಇಂತಹ ಘಟನೆಗಳು ನಡೆದಾಗ ಸುಮ್ಮನಿರದೆ ಪೊಲೀಸರಿಗೆ ದೂರು ನೀಡಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.







