ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆಯಲ್ಲಿ ಬಿಡಿಗಾಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲವನ್ನೂ ಕಳೆದುಕೊಂಡು ಕೇವಲ ಗರಿಗರಿ ಬಟ್ಟೆ ಹಾಕಿಕೊಂಡು ತಿರುಗುವ ಜಂಭದ ಸಾಹುಕಾರನಂತಾಗಿದೆ. ಮನೆಗೆ ಸಾಲಗಾರರು ಮುತ್ತಿಗೆ ಹಾಕಿದಾಗಲೇ ಇವರ ಅಸಲಿ ಬಂಡವಾಳ ಬಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆ ನಗರದ ವಾರ್ಡ್ ನಂಬರ್ 29ರಲ್ಲಿ ನಡೆಯುತ್ತಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನ ಮತ್ತು ಸುಳ್ಳು ಭರವಸೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಅಪ್ಪನ ಆಸ್ತಿ ಕರಗಿಸಿ ಗರಿಗರಿ ಅಂಗಿ ತೊಟ್ಟ ಸಾಹುಕಾರನ ಕಥೆ
ರಾಜ್ಯ ಸರ್ಕಾರದ ಬಳಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಸಿದ್ದರಾಮಯ್ಯನವರು ಒಂದು ಪಾಪರ್ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ತಾತ ಮುತ್ತಾತ ಮಾಡಿದ್ದ ಶ್ರೀಮಂತಿಕೆಯನ್ನು ಹಾಳುಮಾಡಿ, ಊರಿನವರ ಮುಂದೆ ತಮ್ಮ ಬಳಿ ಏನೂ ಇಲ್ಲ ಎಂದು ಹೇಳಿಕೊಳ್ಳಲು ನಾಚಿಕೆಪಟ್ಟುಕೊಂಡು, ಕೇವಲ ಗರಿಗರಿ ಅಂಗಿ ಹಾಕಿಕೊಂಡು ತಿರುಗುವ ಸಾಹುಕಾರನಂತೆ ಸಿಎಂ ವರ್ತಿಸುತ್ತಿದ್ದಾರೆ. ಸದ್ಯ ಈ ಸರ್ಕಾರದ ಮನೆ ಮಂದಿಗಿಂತ ಸಾಲಗಾರರೇ ಹೆಚ್ಚಾಗಿದ್ದಾರೆ. ಈ ಸರ್ಕಾರ ಅಧಿಕಾರದಿಂದ ಕೆಳಗಿಳಿದಾಗಲೇ ಇವರ ಅಸಲಿ ಬಂಡವಾಳ ಜನರಿಗೆ ತಿಳಿಯಲಿದೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಅಭಿವೃದ್ಧಿ ಸ್ಥಗಿತದಿಂದ ಸಾವಿರಾರು ಕೋಟಿ ನಷ್ಟ
ಅಭಿವೃದ್ಧಿ ಎಂಬುದು ಒಂದು ನಿರಂತರ ಪ್ರಕ್ರಿಯೆ. ಅದು ಒಮ್ಮೆ ಹಳಿ ತಪ್ಪಿದರೆ ಮತ್ತೆ ಸರಿದಾರಿಗೆ ತರುವುದು ಅತ್ಯಂತ ದುಬಾರಿಯಾಗುತ್ತದೆ. ಒಂದು ವರ್ಷದ ಹಿಂದೆ ಒಂದು ಕೋಟಿ ರೂಪಾಯಿಗೆ ಆಗುತ್ತಿದ್ದ ಕೆಲಸ, ಈಗ ಎರಡು ಮೂರು ಕೋಟಿಗೆ ತಲುಪಿದೆ. ಕಳೆದ ಮೂರು ವರ್ಷಗಳಿಂದ ಬಾಗಲಕೋಟೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ, ಕಾಮಗಾರಿಗಳ ವೆಚ್ಚ ಸಾವಿರಾರು ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಬಾಗಲಕೋಟೆಯ ಅಭಿವೃದ್ಧಿಗೂ ನನಗೂ ಅವಿನಾಭಾವ ಸಂಬಂಧವಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಮೊದಲ ಹಂತದ ಅಭಿವೃದ್ಧಿಗೆ 700 ಕೋಟಿ ರೂಪಾಯಿ ಅನುದಾನ ನೀಡಿದ್ದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಕಾಳಜಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರ ಸತತ ಪ್ರಯತ್ನದ ಫಲವಾಗಿ ಎರಡನೇ ಹಂತದ ಕಾಮಗಾರಿಗೆ 2300 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆವು. ಆ ಕಾಮಗಾರಿಗಳು ಮಾತ್ರ ಈಗ ನಡೆಯುತ್ತಿವೆ ಹೊರತು ಹೊಸದಾಗಿ ಈ ಸರ್ಕಾರ ನಯಾಪೈಸೆ ಕೊಟ್ಟಿಲ್ಲ ಎಂದರು.
ಕಣ್ಣಿಗೆ ಮಣ್ಣೆರಚುವ ಸುಳ್ಳು ಭರವಸೆಗಳು
ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವ ಸರ್ಕಾರ, ಅದಕ್ಕೆ ಬಿಡಿಗಾಸು ಅನುದಾನ ಮೀಸಲಿಟ್ಟಿಲ್ಲ. ವಿದ್ಯಾರ್ಥಿಗಳು ಕಟ್ಟುವ ಶುಲ್ಕದ ಹಣದಲ್ಲಿ ಮೆಡಿಕಲ್ ಕಾಲೇಜು ಕಟ್ಟುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಇದು ಬಾಗಲಕೋಟೆ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೇ. ಅದೇ ರೀತಿ ಇಲ್ಲಿನ ವ್ಯಾಪಾರಸ್ಥರಿಗೆ 200 ಎಕರೆ ಜಾಗ ಕೊಡುತ್ತೇವೆ ಎಂದು ಬೊಗಳೆ ಬಿಡುತ್ತಿದ್ದಾರೆ. ಸರ್ಕಾರಿ ಖಜಾನೆಯಲ್ಲೇ ಹಣವಿಲ್ಲದಿರುವಾಗ ಭೂಸ್ವಾಧೀನ ಮಾಡಿ ಜಾಗ ಕೊಡಲು ಹೇಗೆ ಸಾಧ್ಯ. ಕಾಂಗ್ರೆಸ್ ನಾಯಕರು ಜನರಿಗೆ ಟೋಪಿ ಹಾಕಲು ನೋಡುತ್ತಿದ್ದಾರೆ. ಬುದ್ಧಿವಂತರಾದ ಬಾಗಲಕೋಟೆ ಜನತೆ ಈ ಟೋಪಿ ಹಾಕಿಸಿಕೊಳ್ಳಬಾರದು ಎಂದು ಎಚ್ಚರಿಸಿದರು.
ಎಚ್ ವೈ ಮೇಟಿ ಹಾಗೂ ಬಾದಾಮಿ ಜನತೆಗೆ ದ್ರೋಹ
ಮೆಡಿಕಲ್ ಕಾಲೇಜು ದಿವಂಗತ ಎಚ್ ವೈ ಮೇಟಿ ಅವರ ಕನಸಾಗಿತ್ತು ಎಂದು ಸಿಎಂ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಹಿರಿಯ ನಾಯಕರಾಗಿದ್ದ ಮೇಟಿಯವರಿಗೆ ಬದುಕಿದ್ದಾಗ ಒಂದು ಸಚಿವ ಸ್ಥಾನವನ್ನೂ ನೀಡದೆ ಕಾಂಗ್ರೆಸ್ ತೀವ್ರ ಅಪಮಾನ ಮಾಡಿತ್ತು. ಅವರು ಕೇಳಿದ ಕೆಲಸಗಳನ್ನು ಮಾಡಿಕೊಡದೆ ಅವರನ್ನು ಕಡೆಗಣಿಸಲಾಗಿತ್ತು.
ಇದೇ ಸಿದ್ದರಾಮಯ್ಯನವರನ್ನು ಮೈಸೂರಿನ ಜನತೆ ಸೋಲಿಸಿ ಅನಾಥರನ್ನಾಗಿ ಮಾಡಿದಾಗ, ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಬಾದಾಮಿಯ ಜನತೆ. ಆದರೆ ಗೆದ್ದ ನಂತರ ಬಾದಾಮಿ ತುಂಬಾ ದೂರವಾಗುತ್ತದೆ ಎಂದು ಹೇಳಿ ಅಲ್ಲಿನ ಜನತೆಗೆ ದ್ರೋಹ ಬಗೆದರು. ಆದರೆ ನಮ್ಮ ಸರ್ಕಾರವಿದ್ದಾಗ ಬಾದಾಮಿ ತಾಲೂಕಿನ ರೈತರ ಅನುಕೂಲಕ್ಕಾಗಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೂರು ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದೆವು. ವಿಪರ್ಯಾಸವೆಂದರೆ ಆ ಯೋಜನೆಯ ಉದ್ಘಾಟನೆಯನ್ನು ಇದೇ ಸಿದ್ದರಾಮಯ್ಯನವರ ಕೈಯಿಂದ ಮಾಡಿಸಿದೆವು ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
ಬಾಗಲಕೋಟೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೇವಲ ಕತೆ ಹೇಳುವವರನ್ನು ನಂಬದೆ, ಸದಾ ಕ್ರಿಯಾಶೀಲರಾಗಿರುವ, ಸಮಯ ಪ್ರಜ್ಞೆ ಮತ್ತು ಬದ್ಧತೆ ಹೊಂದಿರುವ ಕೆಲಸಗಾರ ವೀರಣ್ಣ ಚರಂತಿಮಠ ಅವರನ್ನು ಈ ಉಪಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಬಸವರಾಜ ಬೊಮ್ಮಾಯಿ ಮತದಾರರಲ್ಲಿ ಮನವಿ ಮಾಡಿದರು.







