Basavaraja Bommai | ಡಿಕೆಶಿ ಒಂದು ತೀರಾ.. ಸಿದ್ದರಾಮಯ್ಯ ಒಂದು ತೀರಾ..
ಮೈಸೂರು : ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ತಿಕ್ಕಾಟ ಶುರುವಾಗಿದೆ. ಡಿ ಕೆ ಶಿವಕುಮಾರ್ ನಾನೊಂದು ತೀರಾ, ಸಿದ್ದರಾಮಯ್ಯ ಇನ್ನೊಂದು ತೀರ ಎನ್ನುತ್ತಿದ್ದಾರೆ. ಅವರ ತಟ್ಟೆಯಲ್ಲಿ ಏನಿದೆ ಅನ್ನೋದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡಲು ಬರ್ತಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾಡಿನಲ್ಲಿ ಎಲ್ಲ ಕಡೆ ಉತ್ತಮ ಮಳೆಯಾಗುತ್ತಿದೆ. ಕಬಿನಿ, ಕಾವೇರಿ ಏಕಕಾಲಕ್ಕೆ ಭರ್ತಿ ಆಗೋದು ಅಪರೂಪ. ಈ ಬಾರಿ ಒಟ್ಟಿಗೆ ಭರ್ತಿಯಾಗಿದೆ. ತಡ ಮಾಡದೆ ಎರಡೂ ಕಡೆ ಬಾಗಿನ ಸಮರ್ಪಿಸಬೇಕೆಂಬ ಕಾರಣಕ್ಕೆ ಬಂದಿದ್ದೇನೆ. ಕಬಿನಿ, ಕೆ.ಆರ್.ಎಸ್. ಗೆ ತೆರಳಿ ಬಾಗಿನ ಅರ್ಪಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂಬ ಡಿಕೆಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಕಾಂಗ್ರೆಸ್ ಅಧ್ಯಕ್ಷರಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅವರ ಪಕ್ಷದವರೇ ಬಿಡುತ್ತಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ತಿಕ್ಕಾಟ ಶುರುವಾಗಿದೆ. ಡಿ.ಕೆ.ಶಿವಕುಮಾರ್ ನಾನೊಂದು ತೀರ, ಸಿದ್ದರಾಮಯ್ಯ ಇನ್ನೊಂದು ತೀರ ಎನ್ನುತ್ತಿದ್ದಾರೆ. ಅವರ ತಟ್ಟೆಯಲ್ಲಿ ಏನಿದೆ ಅನ್ನೋದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡಲು ಬರ್ತಾರೆ ಎಂದು ಟಾಂಗ್ ನೀಡಿದರು.
ಇನ್ನು ಜಿ.ಎಸ್.ಟಿ. ರಾಜ್ಯದ ಪಾಲು ಅವಧಿ ವಿಸ್ತರಣೆಗೆ ಕೇಂದ್ರ ನಿರಾಕರಣೆ ಮಾಡಿರುವ ಬಗ್ಗೆ ಮಾತನಾಡಿ, ಜಿ.ಎಸ್.ಟಿ. ಕಾನೂನು ರೂಪಿಸುವಾಗಲೇ ಆರಂಭದ 5 ವರ್ಷ ಮಾತ್ರ ರಾಜ್ಯಗಳಿಗೆ ಪಾಲು ಎಂದಿದೆ. ಈಗ ಕರೊನಾದಿಂದಾಗಿ ಎರಡು ವರ್ಷ ರಾಜ್ಯಗಳ ಆದಾಯ ಇಳಿಮುಖವಾಗಿದೆ. ಈ ಕಾರಣಕ್ಕೆ 5 ವರ್ಷದ ಅವಧಿಯನ್ನು ವಿಸ್ತರಿಸುವಂತೆ ರಾಜ್ಯಗಳು ಕೋರಿದ್ದೆವು. ಜಿ.ಎಸ್.ಟಿ ಸಂವಿಧಾನಾತ್ಮಕವಾಗಿ ರೂಪಿಸಿರುವ ಕಾನೂನು. ಅದನ್ನು ತಕ್ಷಣಕ್ಕೆ ಬದಲಿಸಲಾಗದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರ ಬದಲು ಈ ಅವಧಿಯಲ್ಲಿ ರಾಜ್ಯಗಳಿಗೆ ಬಾಕಿ ಉಳಿಸಿರುವ ಜಿ.ಎಸ್.ಟಿ ಪಾಲನ್ನು ಕೇಂದ್ರ ಪಾವತಿಸುತ್ತಿದೆ. ಈಗಾಗಲೇ ಸ್ವಲ್ಪ ನೀಡಿದೆ. ಬಾಕಿ ಮೊತ್ತ ಶೀಘ್ರ ಪಾವತಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : Chamrajnagar – ತಂಗಳು ಬಿರಿಯಾನಿ ಸೇವಿಸಿ 25 ಕೂಲಿ ಕಾರ್ಮಿಕರು ಅಸ್ವಸ್ಥ…







