Belagavi : ಸಾವಿನಂಚಿನಲ್ಲಿ ಅಂಗಾಂಗ ದಾನ ಮಾಡಿದ ಅಥಣಿ ಯುವಕ
ಚಿಕ್ಕೋಡಿ : ಮನೆಯಲ್ಲಿ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕನ ಮೆದುಳು ನಿಷ್ಕ್ರೀಯಗೊಂಡಿದ್ದು ಹೀಗಾಗಿ ಆತನ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಂಗಳವಾರ ದಿನಾಂಕ 27 ರಂದು ಪ್ರಶಾಂತ ವಿಠ್ಠಲ ಮಲ್ಲೆವಾಡಿ(ಪೂಜಾರಿ) ಎನ್ನುವ 30 ವರ್ಷದ ಯುವಕ ಶೌಚಾಲಯದಲ್ಲಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು.
ಆತನನ್ನು ಪೋಷಕರು ಅಥಣಿಯ ಅನ್ನಪೂರ್ಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಯುವಕ ಕೋಮಾಗೆ ತಲುಪಿದ್ದ ಎಷ್ಟೇ ಚಿಕಿತ್ಸೆ ನೀಡಿದರೂ ಆತ ಚೇತರಿಸಿಕೊಳ್ಳಲಿಲ್ಲ. ಅಲ್ಲದೆ ಆತನ ಮಿದುಳು ಕೂಡ ನಿಷ್ಕ್ರಿಯಗೊಂಡಿತ್ತು.
ಈ ವಿಷಯ ತಿಳಿದು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಅರಿತು ಡಾ ಅವಿನಾಶ ನಾಯಿಕ, ರಾಜನ ಸೋಮಯ್ಯ, ಡಾ ಚೌಗಲಾ, ಅವರ ಸಲಹೆಯ ಮೇರೆಗೆ ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಇನ್ನು ಮೃತ ಪ್ರಶಾಂತನ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುತ್ತಿದ್ದಂತೆಯೇ ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ, ಪ್ರಶಾಂತನ ದೇಹದಿಂದ ಲೀವರ್, 2 ಕಿಡ್ನಿ, ಹೃದಯ, ಚರ್ಮ, ಕಣ್ಣುಗಳನ್ನು ತೆಗೆದು ಬೇರೆಯವರಿಗೆ ಹಾಕಬಹುದು ಎಂದು ವೈದ್ಯ ಡಾ ಸಂತೋಷ ಪಾಟೀಲ ಅವರು ತಿಳಿಸಿದರು.








