ಶ್ರೀನಗರ : ಕಳೆದೊಂದು ವಾರದಿಂದ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನಿ ಸೈನಿಕರಿಗೆ ಭಾರತೀಯ ಸೇನೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದೆ. ಭಾರತ ನಡೆಸಿದ ಪ್ರತಿದಾಳಿಯಲ್ಲಿ ಮೂರು ಸೈನಿಕರು ಸಾವನ್ನಪ್ಪಿದ್ದು, ಪಾಕ್ ಸೇನೆಯ 4 ಪೋಸ್ಟ್ ಗಳು ಧ್ವಂಸವಾಗಿವೆ ಎಂದು ತಿಳಿದುಬಂದಿದೆ.
ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ 3 ದಿನಗಳಿಂದ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸುತ್ತಲೇ ಇದೆ. ಈ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಈ ವೇಳೆ ಪಾಕ್ ಸೇನೆಯ 3 ರಿಂದ 4 ಸೈನಿಕರು ಹತ್ಯೆಗೀಡಾಗಿದ್ದು, ಐವರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಪಾಕ್ ಸೇನೆಗೆ ಸೇರಿದ 4 ಪೋಸ್ಟ್ ಗಳನ್ನೂ ಕೂಡ ಧ್ವಂಸಗೊಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಸೇನಾಧಿಕಾರಿಗಳು, ಬಾಲಕೋಟ್ ಸೇರಿದಂತೆ ಮೆಂಧರ್ನಲ್ಲಿ ಪಾಕಿಸ್ತಾನ ಹಲವಾರು ಗಂಟೆಗಳ ಕಾಲ ಕದನ ವಿರಾಮ ಉಲ್ಲಂಘನೆ ನಡೆಸಿದೆ. ಇದೆ ಕಾರಣದಿಂದ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಕೂಡ ಕುಪ್ವಾರಾ ಜಿಲ್ಲೆಯ ರಂಗ್ವಾರ್ ಪ್ರದೇಶದಲ್ಲಿ ಪಾಕ್ ಸೇನೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದರು.







