ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 3 ತಿಂಗಳ ಡೆಡ್ಲೈನ್
ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದೇ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಸಾರಿಗೆ ನಿಗಮಗಳ ನೌಕರರು ಆರಂಭಿಸಿದ್ದ ಮುಷ್ಕರ ನಾಲ್ಕು ದಿನಗಳ ಬಳಿಕ ಅಂತ್ಯಗೊಂಡಿದೆ.
ಸಾರಿಗೆ ನೌಕರರ 10 ಬೇಡಿಕೆಗಳ ಪೈಕಿ ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಮುಖ ಬೇಡಿಕೆ ಹೊರತುಪಡಿಸಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡಿದೆ. ಈ ಲಿಖಿತ ಭರವಸೆಯನ್ನು 3 ತಿಂಗಳ ಒಳಗೆ ಈಡೇರಿಸುವಂತೆ ಡೆಡ್ಲೈನ್ ನೀಡಿ ಮುಷ್ಕರ ಅಂತ್ಯಗೊಳಿಸಲಾಗಿದೆ. ನಾಲ್ಕು ದಿನಗಳ ಬಳಿಕ ಸಾರಿಗೆ ಮುಷ್ಕರ ಅಂತ್ಯಗೊಳಿಸಲಾಗಿದ್ದು, ಇಂದು ಹಾಗೂ ನಾಳೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ನಾಳೆಯಿಂದ ಪೂರ್ಣಪ್ರಮಾಣದಲ್ಲಿ ನೌಕರರು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಫ್ರೀಡಂಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅಧಿಕೃತ ಘೋಷಣೆ ಮಾಡಿದ್ದಾರೆ.
ನಿನ್ನೆಯೂ ಸಹ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸಾರಿಗೆ ಮುಷ್ಕರ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಮೆಜೆಸ್ಟಿಕ್ ಸೇರಿ ಕೆಲವೆಡೆ ಬಸ್ ಸಂಚಾರವೂ ಆರಂಭವಾಗಿತ್ತು. ಆದರೆ, ಸವದಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದ ನೌಕರರು, ಫ್ರೀಡಂಪಾರ್ಕ್ಗೆ ತೆರಳಿ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಜತೆ ಚರ್ಚಿಸಿದ ಬಳಿಕ ಮುಷ್ಕರ ಮುಂದುವರೆಸಲಾಗುವುದು ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಯಾಗಿತ್ತು.
ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಮುಷ್ಕರ ಹಿಂಪಡೆಯಲು ಚಿಂತನೆ ನಡೆದಿದೆ ಎಂದು ಇಂದು ಬೆಳಿಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಸುಳಿವು ನೀಡಿದ್ದರು. ಈ ಸಂಬಂಧ ಫ್ರೀಡಂಪಾರ್ಕಿನಲ್ಲಿ ಸತ್ಯಾಗ್ರಹ ನಡೆಸುತ್ತಿರುವ ನೌಕರರ ಜತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದರು.
ಕೋಡಿಹಳ್ಳಿ ಚಂದ್ರಶೇಖರ್ ಫ್ರೀಡಂಪಾರ್ಕ್ಗೆ ತೆರಳಿದ ಬಳಿಕ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಬೇಕೆಂದು ನೌಕರರು ಪಟ್ಟು ಹಿಡಿದರು. 10 ಬೇಡಿಕೆಗಳ ಪೈಕಿ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಹೊರತುಪಡಿಸಿ 9 ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಲಿಖಿತ ರೂಪದಲ್ಲಿ ನೀಡಿತು. ಆದರೂ. ಗೊಂದಲ ಮುಂದುವರೆಯಿತು.
ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಜಾರಿ ಮಾಡುವ ನೀಡುವ ಭರವಸೆಯನ್ನು ಖುದ್ದು ಡಿಸಿಎಂ ಲಕ್ಷ್ಮಣ್ ಸವದಿ ಫ್ರೀಡಂಪಾರ್ಕ್ಗೆ ಬಂದು ನೀಡುವಂತೆ ಪಟ್ಟುಹಿಡಿದರು. ಆದರೆ, ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ 3 ತಿಂಗಳ ಗಡುವು ನೀಡಿ 4 ದಿನಗಳ ಬಳಿಕ ಮುಷ್ಕರ ಅಂತ್ಯಗೊಳಿಸಲಾಯಿತು. ತಮ್ಮ ಪ್ರಮುಖ ಬೇಡಿಕೆಯಾದ ಸರ್ಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆಯಿಂದ ಹಿಂದೆ ಸರಿಯದಂತೆ ಪ್ರತಿಭಟನಾನಿರತ ನೌಕರರು ಪಟ್ಟು ಹಿಡಿದರು. ಆದರೆ, ಸರ್ಕಾರಕ್ಕೆ 3 ತಿಂಗಳ ಗಡುವು ನೀಡೋಣ, ಪ್ರಯಾಣಿಕರ ಹಿತದೃಷ್ಟಿಯಿಂದ ಮುಷ್ಕರ ವಾಪಸ್ ಪಡೆಯೋಣ. ಸರ್ಕಾರ ಬೇಡಿಕೆ ಈಡೇರಿಸದೇ ನಿರ್ಲಕ್ಷ್ಯ ವಹಿಸಿದರೆ ಮತ್ತೆ ಹೋರಾಟ ಮಾಡುವ ಎಚ್ಚರಿಕೆ ನೀಡೋಣ ಎಂದು ಹೇಳುವ ಮೂಲಕ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದೆ ಎಂದು ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅಧಿಕೃತ ಘೋಷಣೆ ಮಾಡಿದರು.
ಇದರೊಂದಿಗೆ ಸಾರಿಗೆ ನೌಕರರ ಮುಷ್ಕರ ಕೊನೆಗೂ ಅಂತ್ಯಗೊಂಡಿದ್ದು, ಮೆಜೆಸ್ಟಿಕ್ನಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಿಂದಲೂ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ. ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಸಾರಿಗೆ ನೌಕರರು ತಿಳಿಸಿದ್ದಾರೆ.
ಸರ್ಕಾರ ನೀಡಿದ 9 ಭರವಸೆಗಳು
1. ಸಾರಿಗೆ ನಿಗಮಗಳ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆ ವಿಸ್ತರಿಸು ತೀರ್ಮಾನ
2. ಕೋವಿಡ್ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆಯಡಿ 30 ಲಕ್ಷ ಪರಿಹಾರ
3. ಸಾರಿಗೆ ನೌಕರರನ್ನೂ 6ನೇ ವೇತನ ಆಯೋಗದ ವ್ಯಾಪ್ತಿಗೆ ತರಲು ಒಪ್ಪಿಗೆ ನೀಡಿದ್ದು, ಆರ್ಥಿಕ ಅಂಶಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ತೀರ್ಮಾನ.
4. ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭ 2020ರ ಜನವರಿಯಿಂದ ಸ್ಥಗಿತಗೊಂಡಿದ್ದ ಭತ್ಯೆ(ಬಾಟಾ) ಆರಂಭ
5. ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆಗೆ ಒಪ್ಪಿಗೆ
6. ಮೇಲಧಿಕಾರಿಗಳ ಕಿರುಕುಳ ತಡೆಗೆ ಸಮಿತಿ ರಚಿಸುಸವುದು ಸೇರಿ ಆಡಳಿತ ವ್ಯವಸ್ಥೆ ರೂಪಿಸಲು ತೀರ್ಮಾನ
7. ಸಿಬ್ಬಂದಿಯ ತರಬೇತಿ ಅವಧಿ 2 ವರ್ಷದಿಂದ 1 ವರ್ಷಕ್ಕೆ ಇಳಿಸಲು ತೀರ್ಮಾನ
8. ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ಸಮ್ಮತಿ
9. ಎನ್ಐಎನ್ಸಿ (ನಾಟ್ ಇಶ್ಯೂಡ್-ನಾಟ್ ಕಲೆಕ್ಟೆಡ್) ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ ಮಾಡಲು ರಾಜ್ಯ ಸರ್ಕಾರ ಲಿಖಿತ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರದ ಲಿಖಿತ ಭರವಸೆ ಮೇರೆಗೆ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಾ, ಮಾತು ಮರೆತು ಭರವಸೆ ನೀಡದೆ ನಿರ್ಲಕ್ಷ್ಯ ಧೋರಣೆ ತಳೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel