ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆಯನ್ನು ವಿಪರೀತವಾಗಿ ಏರಿಕೆ ಮಾಡಿರುವುದರಿಂದ ಯುವಜನತೆ ಮತ್ತು ಮಕ್ಕಳು ಅಗ್ಗದ ಅಮಲು ಪದಾರ್ಥವಾದ ಗಾಂಜಾ ಮೊರೆ ಹೋಗುತ್ತಿದ್ದಾರೆ ಎಂದು ಹಿರಿಯ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಅಬಕಾರಿ ನೀತಿ ಮತ್ತು ದುಂದುವೆಚ್ಚಗಳ ವಿರುದ್ಧ ಸಿಡಿಮಿಡಿಗೊಂಡರು.
ರಾಜ್ಯದ ಅಬಕಾರಿ ನೀತಿಯನ್ನು ಕಟುವಾಗಿ ಟೀಕಿಸಿದ ವಿಶ್ವನಾಥ್, ಬಿಯರ್ ಬೆಲೆಯನ್ನು 230 ರೂಪಾಯಿಗೆ ಏರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಿಗೆ ಓದುತ್ತಿದ್ದ ಕಾಲದಲ್ಲಿ ಕೇವಲ ಒಂದು ರೂಪಾಯಿ ಹಾಕಿ ಬಿಯರ್ ತರುತ್ತಿದ್ದೆವು. ಆದರೆ ಇಂದು ಬೆಲೆ ಗಗನಕ್ಕೇರಿದೆ. ದುಬಾರಿ ಬೆಲೆಯ ಮದ್ಯವನ್ನು ಖರೀದಿಸಲು ಸಾಧ್ಯವಾಗದ ಮಕ್ಕಳು ಮತ್ತು ಯುವಕರು ಕಡಿಮೆ ಬೆಲೆಗೆ ಸಿಗುವ ಗಾಂಜಾದಂತಹ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ನಾಶ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ಅವರು, ಮೈಸೂರಿನಲ್ಲಿ ಬಂದು ಗುಜರಾತ್ ಪೊಲೀಸರು ಡ್ರಗ್ಸ್ ಫ್ಯಾಕ್ಟರಿಯನ್ನು ಭೇದಿಸುತ್ತಾರೆ ಎಂದರೆ ನಮ್ಮ ರಾಜ್ಯದ ಪೊಲೀಸರು ಏನು ಮಾಡುತ್ತಿದ್ದಾರೆ? ಮಾಮೂಲಿ ಪಡೆದು ಮಲಗಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಅಬಕಾರಿ ಮೂಲಕ ಯುವಜನರನ್ನು ಸುಲಿಗೆ ಮಾಡುವ ಬದಲು ರಿಯಲ್ ಎಸ್ಟೇಟ್ ಟ್ಯಾಕ್ಸ್ ವಿಭಾಗ ಮಾಡಿ ಅಲ್ಲಿ ತೆರಿಗೆ ಸಂಗ್ರಹಿಸಿ ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರವನ್ನು ಅಡ್ವರ್ಟೈಸ್ಮೆಂಟ್ ಸರ್ಕಾರ ಎಂದು ಜರೆದ ವಿಶ್ವನಾಥ್, ಕೇವಲ ಜಾಹೀರಾತುಗಳಿಗಾಗಿಯೇ ಸರ್ಕಾರ ಬರೋಬ್ಬರಿ 532 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಅಕ್ಷರ ಮತ್ತು ಆರೋಗ್ಯ ವ್ಯವಸ್ಥೆ ಸರಿಯಾಗಿದ್ದರೆ ಅನ್ನ ತಾನಾಗಿಯೇ ಹುಟ್ಟುತ್ತದೆ. ಆದರೆ ರಾಜ್ಯದಲ್ಲಿ ಇವೆರಡೂ ಕ್ಷೇತ್ರಗಳು ಸೊರಗಿವೆ. ಆಡಳಿತ ಸಂಪೂರ್ಣ ವಿಫಲವಾಗಿದ್ದು, ಯೋಜನೆಗಳ ಅನುಷ್ಠಾನ ಶೂನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ನೆನಪಿಸಿದ ಅವರು, ಹಿಂದೆ ಅಡುಗೆ ಅನಿಲ ಬೆಲೆ ಏರಿಕೆಯಾದಾಗ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ರಾಜ್ಯದಲ್ಲಿ ಹಾಲು, ನೀರು ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಳ ಮಾಡಿದ್ದೀರಿ. ನಿಮ್ಮದೇ ಮಾತುಗಳ ಪ್ರಕಾರ ಈಗ ನೀವು ಎಷ್ಟು ಬಾರಿ ರಾಜೀನಾಮೆ ನೀಡಬೇಕು ಎಂದು ಸಿಎಂ ಅವರನ್ನು ನೇರವಾಗಿ ಪ್ರಶ್ನಿಸಿದರು.
ಮೈಸೂರು ಮತ್ತು ಬೆಂಗಳೂರು ನಡುವಿನ ಕೇವಲ 120 ಕಿ.ಮೀ ಪ್ರಯಾಣಕ್ಕೆ ವಿಶೇಷ ವಿಮಾನ ಬಳಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ವಿಶ್ವನಾಥ್, ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರಂತಹ ಕೋಟ್ಯಾಧಿಪತಿಗಳೇ ಸಾಮಾನ್ಯ ಇಂಡಿಗೊ ವಿಮಾನದಲ್ಲಿ ಸಂಚರಿಸುತ್ತಾರೆ. ಹಾಗಿರುವಾಗ ಸಾಲದ ಸುಳಿಯಲ್ಲಿರುವ ಸರ್ಕಾರಕ್ಕೆ ಇಂತಹ ಐಷಾರಾಮಿ ದರ್ಬಾರ್ ಬೇಕೆ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಿಎಂ ಮಾಧ್ಯಮ ಸಲಹೆಗಾರರಿಗೂ ಕ್ಯಾಬಿನೆಟ್ ದರ್ಜೆ ನೀಡಿರುವುದನ್ನು ಪ್ರಸ್ತಾಪಿಸಿ, ರಾಜ್ಯದಲ್ಲಿ ಒಟ್ಟು 138 ಜನರಿಗೆ ಕ್ಯಾಬಿನೆಟ್ ರ್ಯಾಂಕ್ ನೀಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಕುರಿ ಸಾಕಾಣಿಕೆಯನ್ನು ಮೂವಿಂಗ್ ಬ್ಯಾಂಕ್ ಎಂದು ಬಣ್ಣಿಸಿದ ಅವರು, ಈ ಉದ್ಯಮಕ್ಕೆ ಉತ್ತೇಜನ ನೀಡಲು ಕುರಿ ಮಂಡಳಿಗೆ ಮೀಸಲಿಟ್ಟ ಹಣವನ್ನು ಕುರಿಗಾಹಿಗಳಿಗೆ ನೀಡುವ ಬದಲು ಶಾಸಕರಿಗೆ ಹಂಚಲಾಗುತ್ತಿದೆ. ಶಾಸಕರು ಆ ಹಣವನ್ನು ಫಲಾನುಭವಿಗಳಿಗೆ ತಲುಪಿಸದೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಇದೊಂದು ಡೈಲಿ ವೇಜ್ ಸರ್ಕಾರ ಎಂದು ವ್ಯಂಗ್ಯವಾಡಿದ ವಿಶ್ವನಾಥ್, ನಿವೃತ್ತ ಐಎಎಸ್ ಅಧಿಕಾರಿಗಳ ಪತ್ನಿಯರೇ ಇಲ್ಲಿ ಗುತ್ತಿಗೆದಾರರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.







