ಬೆಂಗಳೂರು : ಬೆಂಗಳೂರು ದಕ್ಷಿಣ ವಲಯದಲ್ಲಿ ಸೋಂಕು ಹೆಚ್ಚಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸೋಂಕು ಕೈ ಮೀರಿ ಹೆಚ್ಚಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಿ ಮಾಸ್ಕ್ ಧರಿಸುವುದು ಸೇರಿದಂತೆ ಸೂಚನೆಗಳನ್ನು ಪಾಲಿಸಿದರೆ ಮಾತ್ರ ಕೊರೊನಾಗೆ ತಡೆಹಾಕಬಹುದು. ಕೇವಲ ಸರ್ಕಾರದಿಂದ ಮಾತ್ರ ಇದು ಆಗೋಲ್ಲ, ಜನರ ಸಹಭಾಗಿತ್ವ ಇರಬೇಕು ಎಂದರು.
ಇದೇ ವೇಳೆ ಸೆಪ್ಟೆಂಬರ್ ನಲ್ಲಿ ಹೆಚ್ಚು ಸೋಂಕು ಸಾಧ್ಯತೆ ವಿಷಯವಾಗಿ ಪ್ರತಿಕ್ರಿಯಿಸಿದ ಸುಧಾಕರ್, ರಾಜ್ಯದಲ್ಲಿ ಸದ್ಯ ಶೇ.70 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಶೇ.30 ರಷ್ಟು ಸಕ್ರಿಯ ಪ್ರಕರಣಗಳಿದ್ದು, ಸೋಂಕು ಬಗ್ಗೆ ಆತಂಕ ಅಗತ್ಯ ಇಲ್ಲ. ಸರ್ಕಾರದ ಮಾರ್ಗಸೂಚಿಯನ್ನ ಜನ ಅನುಸರಿಸಿದರೆ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತದೆ. ಮೇ ತಿಂಗಳಿನಲ್ಲಿ ಸಾವಿನ ಪ್ರಮಾಣ ಶೇ.3.5 ಇತ್ತು. ಆದರೆ ಈಗ ಸಾವಿನ ಪ್ರಮಾಣ ಶೇ.1.5 ಇದೆ. ಇದು ಈ ಸರ್ಕಾರದ ಸಾಧನೆಯಾಗಿದೆ ಎಂದರು. ಈ ತಿಂಗಳಾಂತ್ಯಕ್ಕೆ ಪ್ರಧಾನಿಯವರು ಸಭೆ ಸೇರಿಸಿ ಸೂಕ್ತ ಮಾರ್ಗಸೂಚಿ ನೀಡುತ್ತಾರೆ. ಅದನ್ನೇ ಪಾಲಿಸುತ್ತೇವೆ. ನಮ್ಮ ಮೆಟ್ರೋ ಆರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.








