ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಹಾಗೂ ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸುವ ಆಂಧ್ರದ ಜ್ಯೋತಿಷಿ ವೇಣುಸ್ವಾಮಿ ಇದೀಗ ಕರುನಾಡಿನ ‘ರಾಕಿ ಭಾಯ್’ ಯಶ್ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮದ್ಯ, ಮಾಂಸ, ಮೀನು ನೈವೇದ್ಯವಾಗಿ ಇಟ್ಟು ವಾಮಾಚಾರದ ಪದ್ಧತಿಗಳಲ್ಲಿ ಪೂಜೆ, ಹೋಮಗಳನ್ನು ಮಾಡಿಸುವ ಮೂಲಕವೇ ವೇಣುಸ್ವಾಮಿ ಫೇಮಸ್. ಈ ಹಿಂದೆ ರಶ್ಮಿಕಾ ಮಂದಣ್ಣ, ನಿಧಿ ಅಗರ್ವಾಲ್, ನಿಶ್ವಿಕಾ ನಾಯ್ಡು ಸೇರಿದಂತೆ ಹಲವು ನಟಿಯರು ಹಾಗೂ ಮಾಜಿ ಸಚಿವ ರೇವಣ್ಣ ಕೂಡ ಇವರ ಬಳಿ ಪೂಜೆ ಮಾಡಿಸಿ ಸಕ್ಸಸ್ ಕಂಡಿದ್ದಾರೆ ಎಂಬ ಮಾತುಗಳೂ ಇವೆ. ಇದೀಗ ಇದೇ ಜ್ಯೋತಿಷಿ ನಟ ಯಶ್ ಬಗ್ಗೆ ಆಡಿರುವ ವಿವಾದಾತ್ಮಕ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
“ಕನ್ನಡದ ಹೀರೊ ಆದ್ದರಿಂದಲೇ ಧೈರ್ಯವಾಗಿ ಹೇಳ್ತೀನಿ.. ತೆಲುಗು ನಟನಾಗಿದ್ದರೆ ಮಾತನಾಡುತ್ತಿರಲಿಲ್ಲ!”
ಈ ಹಿಂದೆ ಕೆಲ ತೆಲುಗು ಕಲಾವಿದರ ಬಗ್ಗೆ ಭವಿಷ್ಯ ನುಡಿದು, ಅವರ ಅಭಿಮಾನಿಗಳಿಂದ ತೀವ್ರ ವಿರೋಧ ಹಾಗೂ ಟೀಕೆಗಳನ್ನು ಎದುರಿಸಿದ್ದ ವೇಣುಸ್ವಾಮಿ, ಈ ಬಾರಿ ಸೇಫ್ ಗೇಮ್ ಆಡಿದ್ದಾರೆ. “ನಾನು ಕನ್ನಡ ನಟ ಯಶ್ ಬಗ್ಗೆ ಧೈರ್ಯವಾಗಿ ಮಾತನಾಡ್ತೀನಿ, ಅದೇ ತೆಲುಗು ನಟನಾಗಿದ್ದರೆ ನಾನು ಮಾತನಾಡುತ್ತಿರಲಿಲ್ಲ” ಎಂದು ಹೇಳುವ ಮೂಲಕ ತಮ್ಮ ಹೇಳಿಕೆಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. Eha TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಷ್ಟೇ ದೊಡ್ಡ ನಟನಾದರೂ ಯಶಸ್ಸು ಪಡೆಯುವುದು ಎಷ್ಟು ಕಷ್ಟವೋ, ಸಿಕ್ಕ ಯಶಸ್ಸನ್ನು ಉಳಿಸಿಕೊಂಡು ಮುಂದುವರೆಸುವುದು ಅದಕ್ಕಿಂತಲೂ ಕಷ್ಟ ಎಂದಿದ್ದಾರೆ.
“ಕೆಜಿಎಫ್ ಯಶಸ್ಸಿನ ಗುಂಗಿನಲ್ಲಿ ಯಶ್ಗೆ ಹುಚ್ಚು ಹಿಡಿದಂತಾಗಿದೆ, ಅವರು ಡಿಪ್ರೆಶನ್ನಲ್ಲಿದ್ದಾರೆ!”
‘ಕೆಜಿಎಫ್’ ಸರಣಿ ಸಿನಿಮಾಗಳ ಬೃಹತ್ ಯಶಸ್ಸಿನ ಬಳಿಕ ಯಶ್ ಮೇಲೆ ಜಾಗತಿಕ ಮಟ್ಟದಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡಿರುವ ವೇಣುಸ್ವಾಮಿ, “ಯಶ್ ಎಂಬ ಒಬ್ಬ ಹೀರೊ ಇದ್ದಾನೆ. ಆತನ ಪರಿಸ್ಥಿತಿ ಪ್ರಸ್ತುತ ಬಹಳ ದಾರುಣವಾಗಿದೆ. ಈಗ ಯಶ್ ಪರಿಸ್ಥಿತಿ ಹೇಗಿದೆ ಅಂದ್ರೆ, ಅವರು ಡಿಪ್ರೆಶನ್ನಲ್ಲಿದ್ದಾರೆ. ಕಾರಣ ಆತ ಮಾಡಿದ ಎರಡು ಸಿನಿಮಾಗಳು ಎಲ್ಲೋ ಹೋಗಿ ನಿಂತಿವೆ. ಆದರೆ, ಎಷ್ಟು ದಿನ ‘ಕೆಜಿಎಫ್’ ಮಾಡೋಕೆ ಸಾಧ್ಯ? ಸಬ್ಜೆಕ್ಟ್ ಬದಲಿಸಿ, ‘ಕೆಜಿಎಫ್’ ತರಹದ ಸಿನಿಮಾ ಮಾಡೋಕ್ಕಾಗ್ತಿಲ್ಲ. ಜನರ ನಿರೀಕ್ಷೆಗಳ ಭಾರದಿಂದ ಆತನಿಗೆ ಅಯೋಮಯವಾಗಿಬಿಟ್ಟಿದೆ. ಒಂದು ರೀತಿ ಹುಚ್ಚು ಹಿಡಿದಂತಾಗಿದೆ. ಸೆಲೆಬ್ರೆಟಿ ಸ್ಟೇಟಸ್ ಮೆಂಟೇನ್ ಮಾಡುವುದು ತುಂಬಾ ಕಷ್ಟ” ಎಂದು ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಜ್ಯೋತಿಷಿ ಹೇಳಿಕೆ ಏನೇ ಇರಲಿ.. ಹಾಲಿವುಡ್ ರೇಂಜ್ನಲ್ಲಿ ಸಿದ್ಧವಾಗುತ್ತಿದೆ ಪ್ಯಾನ್ ವರ್ಲ್ಡ್ ‘ಟಾಕ್ಸಿಕ್’!
ಜ್ಯೋತಿಷಿ ವೇಣುಸ್ವಾಮಿ ಏನೇ ವಿವಾದಾತ್ಮಕ ಮಾತುಗಳನ್ನಾಡಿದರೂ, ಯಶ್ ಮಾತ್ರ ತಮ್ಮ ಮುಂದಿನ ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡುತ್ತಿದ್ದಾರೆ. ‘ಕೆಜಿಎಫ್-2’ ಬಳಿಕ ಮಲಯಾಳಂನ ಪ್ರತಿಭಾವಂತ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ‘ಟಾಕ್ಸಿಕ್’ ಎಂಬ ಪ್ಯಾನ್ ವರ್ಲ್ಡ್ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಯಶ್ ತಾವೇ ಖುದ್ದಾಗಿ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರಲ್ಲಿ ಯಶ್ ತಂದೆ-ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಹಾಡುಗಳು ವಿಶ್ವಾದ್ಯಂತ ಸದ್ದು ಮಾಡುತ್ತಿದ್ದು, ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅದ್ವಾನಿ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.
ಇರಾನ್- ಇಸ್ರೇಲ್ ಯುದ್ಧದ ಎಫೆಕ್ಟ್.. ಜೂನ್ 4ಕ್ಕೆ ವಿಶ್ವಾದ್ಯಂತ ಅಬ್ಬರಿಸಲಿದೆ ಟಾಕ್ಸಿಕ್!
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಟಾಕ್ಸಿಕ್ ಸಿನಿಮಾ ಮುಂದಿನ ವಾರವೇ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ವಿದೇಶಿ ಮಾರುಕಟ್ಟೆಯ ಲೆಕ್ಕಾಚಾರಗಳು ಬದಲಾಗಿವೆ. ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ತೊಡಕಾಗುವ ಸಾಧ್ಯತೆಗಳಿದ್ದ ಕಾರಣ, ಚಿತ್ರತಂಡ ರಿಲೀಸ್ ಡೇಟ್ ಅನ್ನು ಜೂನ್ 4ಕ್ಕೆ ಮುಂದೂಡಿದೆ. ರವಿ ಬಸ್ರೂರು ಸೇರಿದಂತೆ ಐವರು ಸಂಗೀತ ನಿರ್ದೇಶಕರು, ರಾಜೀವ್ ರವಿ ಛಾಯಾಗ್ರಹಣದೊಂದಿಗೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡು ‘ಟಾಕ್ಸಿಕ್’ ಹಾಲಿವುಡ್ ರೇಂಜ್ನಲ್ಲಿ ಸಿದ್ಧವಾಗುತ್ತಿದೆ. ರಾಕಿ ಭಾಯ್ ಅಬ್ಬರಕ್ಕೆ ಜಗತ್ತೇ ಕಾದು ಕುಳಿತಿದೆ.
![{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"remove":1},"is_sticker":false,"edited_since_last_sticker_save":true,"containsFTESticker":false}](https://saakshatv.com/wp-content/uploads/2026/03/Picsart_26-03-14_19-02-56-475-1140x636.jpg)






