ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ಳುತ್ತಿದೆ. ಕೆಜಿಎಫ್ ಸರಣಿಯ ಅಬ್ಬರದ ನಂತರ ಇಡೀ ಭಾರತೀಯ ಚಿತ್ರರಂಗವೇ ಯಶ್ ಅವರ ಮುಂದಿನ ಹೆಜ್ಜೆಯನ್ನು ಕಣ್ಬಿಟ್ಟು ನೋಡುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಇದೀಗ ದೊಡ್ಡ ಮಟ್ಟದ ಚರ್ಚೆ ಮತ್ತು ವಿವಾದವೊಂದು ಭುಗಿಲೆದ್ದಿದೆ. ಮಾರ್ಚ್ 19 ರಂದು ತೆರೆಗೆ ಅಪ್ಪಳಿಸಬೇಕಿದ್ದ ಈ ಚಿತ್ರ ದಿಢೀರ್ ಮುಂದೂಡಲ್ಪಟ್ಟಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ಯಶ್ ವಿರುದ್ಧ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ.
ಟಾಕ್ಸಿಕ್ ತಂಡದ ಅಧಿಕೃತ ಸ್ಪಷ್ಟನೆ ಏನು
ವಿಶ್ವದಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಟಾಕ್ಸಿಕ್ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಲಾಗಿದೆ. ಟಾಕ್ಸಿಕ್ ಕೇವಲ ಭಾರತೀಯ ಪ್ರೇಕ್ಷಕರಿಗಲ್ಲದೇ ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಗುರಿಯಾಗಿಸಿ ನಿರ್ಮಿಸಲಾಗುತ್ತಿರುವ ಸಿನಿಮಾವಾಗಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಕಾರಣ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿನಿಮಾದ ಗಳಿಕೆಗೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯಿದೆ. ವರ್ಷಗಳ ಕಾಲ ಪಟ್ಟ ಶ್ರಮ ಮತ್ತು ಬಂಡವಾಳವನ್ನು ರಿಸ್ಕ್ ಗೆ ಒಳಪಡಿಸುವುದು ಸರಿಯಲ್ಲ ಎಂಬ ಕಾರಣಕ್ಕೆ, ಮಾರ್ಚ್ 19 ರ ಬದಲು ಜೂನ್ 4 ರಂದು ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಯಶ್ ಓರ್ವ ಡ್ರಾಮಾ ಮಾಸ್ಟರ್ ಎಂದ ಕೆಆರ್ಕೆ
ಚಿತ್ರತಂಡ ಏನೇ ಕಾರಣ ನೀಡಲಿ, ಬಾಲಿವುಡ್ ನ ವಿವಾದಾತ್ಮಕ ವಿಮರ್ಶಕ ಕೆಆರ್ಕೆ ಮಾತ್ರ ಇದನ್ನು ಒಪ್ಪಲು ತಯಾರಿಲ್ಲ. ತಮ್ಮ ಎಕ್ಸ್ ಖಾತೆಯಲ್ಲಿ ಯಶ್ ವಿರುದ್ಧ ಕೆಂಡಕಾರಿರುವ ಅವರು, ಯಶ್ ಒಬ್ಬ ಡ್ರಾಮಾ ಮಾಸ್ಟರ್ ಎಂದು ಜರಿದಿದ್ದಾರೆ. ನಾನು ಮೊದಲೇ ಹೇಳಿದ್ದೆ, ಯಶ್ ಕೇವಲ ಪ್ರಚಾರ ಪಡೆಯಲು ಮಾತ್ರ ಮಾರ್ಚ್ 19 ರಂದು ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಜೊತೆಗೆ ಬರುವುದಾಗಿ ಘೋಷಣೆ ಮಾಡಿದ್ದರು. ಇದೊಂದು ಪಬ್ಲಿಸಿಟಿ ಸ್ಟಂಟ್ ಅಷ್ಟೇ. ಈಗ ನಿಜವಾದ ಬಾಕ್ಸಾಫೀಸ್ ಕಾದಾಟಕ್ಕೆ ಹೆದರಿ ಯಶ್ ರಣರಂಗದಿಂದ ಎಸ್ಕೇಪ್ ಆಗಿದ್ದಾರೆ ಎಂದು ಕೆಆರ್ಕೆ ಲೇವಡಿ ಮಾಡಿದ್ದಾರೆ.
ಧುರಂಧರ್ 2 ಎದುರು ಟಾಕ್ಸಿಕ್ ನಡುಗಿತೇ
ಮಾರ್ಚ್ 19 ರಂದು ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಬಿಡುಗಡೆಯಾಗಲಿದೆ. ಈ ಚಿತ್ರದ ಮೊದಲ ಭಾಗವು ಬರೋಬ್ಬರಿ 1000 ಕೋಟಿ ಗಳಿಸಿ ಆಲ್ ಟೈಮ್ ಬ್ಲಾಕ್ ಬಸ್ಟರ್ ಆಗಿತ್ತು. ಈಗ ಎರಡನೇ ಭಾಗದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಕೆಆರ್ಕೆ ಪ್ರಕಾರ, ಧುರಂಧರ್ 2 ಮೊದಲ ದಿನವೇ 100 ಕೋಟಿ ಕಲೆಕ್ಷನ್ ಮಾಡುವ ತಾಕತ್ತು ಹೊಂದಿದೆ. ಇಂತಹ ಬೃಹತ್ ಸಿನಿಮಾದ ಎದುರು ಬಂದರೆ ಟಾಕ್ಸಿಕ್ ಮಕಾಡೆ ಮಲಗುತ್ತದೆ ಎಂಬ ಭಯದಿಂದಲೇ ಯಶ್ ಸಿನಿಮಾ ಮುಂದೂಡಿದ್ದಾರೆ ಎಂಬುದು ಕೆಆರ್ಕೆ ವಾದವಾಗಿದೆ.
ನೆಟ್ಟಿಗರ ಟ್ರೋಲ್ ಮತ್ತು ಫ್ಯಾನ್ ವಾರ್
ಟಾಕ್ಸಿಕ್ ಮುಂದೂಡಿಕೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್ ಗಳು ಸಕ್ರಿಯವಾಗಿವೆ. ಯುದ್ಧ ಎನ್ನುವುದು ಕೇವಲ ನೆಪ, ಅಸಲಿ ಭಯ ಇರುವುದು ಧುರಂಧರ್ ಸಿನಿಮಾದ್ದು ಎಂದು ಕೆಲವರು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಇವರು ಕೇವಲ ಹೈಪ್ ಗೋಸ್ಕರ ಇಂತಹ ದೊಡ್ಡ ಸಿನಿಮಾದ ಜೊತೆ ಕ್ಲ್ಯಾಶ್ ಮಾಡಿಕೊಳ್ಳುವುದಾಗಿ ಹೇಳಿದ್ದರು, ಈಗ ತಣ್ಣಗೆ ಜಾಗ ಖಾಲಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಯಶ್ ಅಭಿಮಾನಿಗಳು ಮಾತ್ರ ತಮ್ಮ ನಾಯಕನ ಬೆಂಬಲಕ್ಕೆ ನಿಂತಿದ್ದು, ಜೂನ್ 4 ರಂದು ಬಾಕ್ಸಾಫೀಸ್ ಲೆಕ್ಕಾಚಾರ ತಲೆಕೆಳಗಾಗಲಿದೆ ಎಂದು ತಿರುಗೇಟು ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಟಾಕ್ಸಿಕ್ ಸಿನಿಮಾದ ಬಿಡುಗಡೆ ದಿನಾಂಕ ಬದಲಾವಣೆ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಕೆಆರ್ಕೆ ಟೀಕೆಗೆ ಮತ್ತು ಟ್ರೋಲ್ ಗಳಿಗೆ ಯಶ್ ತಮ್ಮ ಸಿನಿಮಾದ ಮೂಲಕವೇ ಉತ್ತರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.







