ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆಯೂ ಇಲ್ಲ ಎಂದು ನೇರವಾಗಿ ಟೀಕಿಸಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಷ್ಟೊಂದು ಅಸಮಾಧಾನ ಮತ್ತು ಬೇಸರವಿದ್ದರೆ, ಮೊದಲು ಇಸ್ಲಾಮಿಕ್ ದೇಶಗಳ ಜೊತೆಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ದೇಶಪ್ರೇಮದ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ, ಈ ದೇಶದ ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ದಲಿತರು ನಮ್ಮ ನಾಗರಿಕರಲ್ಲ ಎಂದು ಬಹಿರಂಗವಾಗಿ ಹೇಳಲಿ ನೋಡೋಣ ಎಂದು ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದರು. ಒಂದು ಕಡೆ ಅಲ್ಪಸಂಖ್ಯಾತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಪ್ರಧಾನಿಗಳು, ಮತ್ತೊಂದು ಕಡೆ ಇಸ್ಲಾಮಿಕ್ ದೇಶಗಳಿಗೆ ಹೋದಾಗ ಅಲ್ಲಿನ ದೊರೆಗಳನ್ನು ಅಪ್ಪಿಕೊಂಡು ಮೈ ಫ್ರೆಂಡ್, ಮೈ ಬ್ರದರ್ ಎಂದು ಟ್ವೀಟ್ ಮಾಡುತ್ತಾರೆ. ಭಾರತಕ್ಕೆ ಬೇಕಾದ ಶೇಕಡಾ 78 ರಷ್ಟು ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ತೈಲ ಮತ್ತು ಯೂರಿಯಾ ಇಸ್ಲಾಮಿಕ್ ರಾಷ್ಟ್ರಗಳಿಂದಲೇ ಬರಬೇಕು. ವ್ಯಾಪಾರಕ್ಕಾಗಿ ಆ ದೇಶಗಳ ಮೇಲೆ ಅವಲಂಬಿತರಾಗಿರುವ ಪ್ರಧಾನಿ ಮೋದಿಯವರಿಗೆ ವಾಸ್ತವದ ಅರಿವಿಲ್ಲದೆ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಕೇಸರಿ ತಿಲಕದ ಬಗ್ಗೆ ಕುತೂಹಲಕಾರಿ ಅಂಕಿಅಂಶ ನೀಡಿದ ಖರ್ಗೆ, ನಾವು ಭಕ್ತಿಯಿಂದ ಹಣೆಗೆ ಹಚ್ಚುವ ತಿಲಕಕ್ಕೆ ಬಳಸುವ ಕೇಸರಿ ಎಲ್ಲಿಂದ ಬರುತ್ತದೆ ಎಂಬುದು ಬಿಜೆಪಿಯವರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು. ತಿಲಕಕ್ಕೆ ಬಳಸುವ ಶೇಕಡಾ 90 ರಷ್ಟು ಕೇಸರಿ ಇರಾನ್ ಮತ್ತು ಆಫ್ಘಾನಿಸ್ತಾನದಂತಹ ಮುಸ್ಲಿಂ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ನಮ್ಮ ಕಾಶ್ಮೀರದಲ್ಲಿ ಬೆಳೆಯುವುದು ಕೇವಲ ಶೇಕಡಾ 5 ರಷ್ಟು ಮಾತ್ರ. ಈ ಸತ್ಯದ ಅರಿವಿಲ್ಲದೆ ಬಿಜೆಪಿಯವರು ಕೇವಲ ಭಾವನಾತ್ಮಕವಾಗಿ ಜನರನ್ನು ಕೆರಳಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇದೇ ಸಂದರ್ಭದಲ್ಲಿ ಅಮಿತ್ ಶಾ ಪುತ್ರ ಜಯ್ ಶಾ ಅವರ ನಡೆಯನ್ನು ಟೀಕಿಸಿದ ಅವರು, ದೇಶದಲ್ಲಿ ಕೊರೊನಾ ಸಂಕಷ್ಟದ ಸಮಯವಿದ್ದಾಗ ದುಬೈನಲ್ಲಿ ಐಪಿಎಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಆಗ ಬಿಜೆಪಿಯವರ ದೇಶಪ್ರೇಮ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದರು. ಬಿಜೆಪಿಯವರಲ್ಲಿ ಯಾವುದೇ ತರ್ಕಬದ್ಧ ನಿಲುವುಗಳಿಲ್ಲ. ಅವರು ಕೇವಲ ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳು ಮಾಹಿತಿಗಳನ್ನೇ ಬಾಯಿಪಾಠ ಮಾಡಿ ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಬಿಜೆಪಿಯವರ ಈ ದ್ವಂದ್ವ ನೀತಿಯನ್ನು ಸಮರ್ಥಿಸಿಕೊಳ್ಳಲು ಅವರ ನಾಯಕರಿಗೇ ಸಾಧ್ಯವಾಗುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.







