ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ ‘ಹಾರ್ಮುಜ್ ಜಲಸಂಧಿ’ ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ ಕ್ಷಿಪಣಿ ದಾಳಿಯ ಎಚ್ಚರಿಕೆಯ ನಡುವೆಯೂ, ಬೇರೆ ದೇಶದ ಕಚ್ಚಾ ತೈಲವನ್ನು ಹೊತ್ತ ಬೃಹತ್ ಟ್ಯಾಂಕರ್ ಯಶಸ್ವಿಯಾಗಿ ಈ ಮೃತ್ಯುಕೂಪವನ್ನು ದಾಟಿ ಭಾರತದ ಮುಂಬೈ ತೀರಕ್ಕೆ ಬಂದಿಳಿದಿದೆ. ಇದು ಕೇವಲ ಒಂದು ವಾಣಿಜ್ಯ ಹಡಗಿನ ಪ್ರಯಾಣವಲ್ಲ, ಬದಲಾಗಿ ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತದ ಇಂಧನ ಭದ್ರತೆ ಮತ್ತು ಕಾರ್ಯತಂತ್ರದ ಪ್ರಭಾವದ ಸಂಕೇತವಾಗಿದೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ಕಮೊಡಿಟಿಸ್ ವರದಿ ದೃಢಪಡಿಸಿದೆ.
ಪಶ್ಚಿಮ ಏಷ್ಯಾದ ಯುದ್ಧಭೂಮಿಯಲ್ಲಿ ಅಕ್ಷರಶಃ ಸ್ತಬ್ಧವಾದ ಹಾರ್ಮುಜ್
ತನ್ನ ದೇಶದ ತೈಲವನ್ನು ಹೊರತುಪಡಿಸಿ, ಬೇರೆ ಯಾವುದೇ ದೇಶದ ತೈಲ ಟ್ಯಾಂಕರ್ ಈ ಮಾರ್ಗದಲ್ಲಿ ಸಾಗಿದರೆ ಅದರ ಮೇಲೆ ಕ್ಷಿಪಣಿ ದಾಳಿ ಮಾಡುವುದಾಗಿ ಇರಾನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ದಿನಕ್ಕೆ ಸುಮಾರು 60 ಬೃಹತ್ ಹಡಗುಗಳು ಸಂಚರಿಸುತ್ತಿದ್ದ ಈ ಬಿಡುವಿಲ್ಲದ ಜಾಗತಿಕ ಮಾರ್ಗದಲ್ಲಿ, ಈಗ ಕೇವಲ ಎರಡರಿಂದ ಮೂರು ಹಡಗುಗಳು ಮಾತ್ರ ಜೀವ ಕೈಯಲ್ಲಿಡಿದು ಸಾಗುವಂತಹ ಭೀಕರ ವಾತಾವರಣ ನಿರ್ಮಾಣವಾಗಿದೆ.
ಮುಂಬೈ ತೀರಕ್ಕೆ ಬಂದಿಳಿದ ಶೆನ್ಲಾಂಗ್ ಮಹಾ ಟ್ಯಾಂಕರ್
ಈ ಎಲ್ಲಾ ಅಡೆತಡೆಗಳು ಮತ್ತು ಜೀವಬೆದರಿಕೆಗಳ ನಡುವೆ, ಮಾರ್ಚ್ 1 ರಂದು ಸೌದಿ ಅರೇಬಿಯಾದ ಅತಿದೊಡ್ಡ ತೈಲ ರಫ್ತು ಟರ್ಮಿನಲ್ ಆಗಿರುವ ‘ರಾಸ್ ತನುರಾ’ದಿಂದ ಕಚ್ಚಾ ತೈಲವನ್ನು ತುಂಬಿಸಿಕೊಂಡ ‘ಶೆನ್ಲಾಂಗ್’ ಎಂಬ ಬೃಹತ್ ಟ್ಯಾಂಕರ್ ಮಾರ್ಚ್ 10 ರಂದು ಮುಂಬೈ ತೀರವನ್ನು ಸುರಕ್ಷಿತವಾಗಿ ತಲುಪಿದೆ.
ಗ್ರೀಸ್ ಮೂಲದ ಡೈನಾಕಾಮ್ ಟ್ಯಾಂಕರ್ಸ್ ಮ್ಯಾನೇಜ್ಮೆಂಟ್ ನಿರ್ವಹಿಸುತ್ತಿರುವ ಈ ಹಡಗು, ರಾಸ್ ತನುರಾದಲ್ಲಿ 9.3 ಮೀಟರ್ ಡ್ರಾಫ್ಟ್ (ನೀರಿನಲ್ಲಿ ಮುಳುಗಿದ್ದ ಆಳ) ಹೊಂದಿತ್ತು. ಆದರೆ ಮುಂಬೈಗೆ ಆಗಮಿಸಿದಾಗ ಅದು 15.8 ಮೀಟರ್ಗೆ ತಲುಪಿತ್ತು. ಇದು ಹಡಗು ತನ್ನ ಪೂರ್ಣ ಸಾಮರ್ಥ್ಯದ ತೈಲವನ್ನು ಹೊತ್ತು ತಂದಿರುವುದಕ್ಕೆ ಅತಿದೊಡ್ಡ ಸಾಕ್ಷಿಯಾಗಿದೆ.
ರಹಸ್ಯ ಕಾರ್ಯಾಚರಣೆ ಮತ್ತು ಜಾಣ್ಮೆಯ ಹೆಜ್ಜೆ
ಈ ಹಡಗಿನ ಪ್ರಯಾಣವು ಒಂದು ರೋಚಕ ಕಾರ್ಯಾಚರಣೆಯಂತಿತ್ತು. ಹಾರ್ಮುಜ್ ಜಲಸಂಧಿಯ ಅಪಾಯಕಾರಿ ವಲಯವನ್ನು ಪ್ರವೇಶಿಸುವ ಮುನ್ನ ಈ ಹಡಗು ತನ್ನ ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ (ಹಡಗಿನ ನಿಖರ ಸ್ಥಳವನ್ನು ತೋರಿಸುವ ರೇಡಾರ್ ವ್ಯವಸ್ಥೆ) ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.ಕತ್ತಲಲ್ಲಿ ಸಾಗುವ ರಹಸ್ಯ ನೌಕೆಯಂತೆ ಜಲಸಂಧಿಯನ್ನು ದಾಟಿದ ಬಳಿಕವಷ್ಟೇ ಅದು ತನ್ನ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮರಳಿ ಆನ್ ಮಾಡಿದೆ. ಶತ್ರುಗಳ ಕಣ್ಗಾವಲು ಮತ್ತು ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಳ್ಳಲು ಈ ತಂತ್ರವನ್ನು ಬಳಸಲಾಗಿದೆ ಎಂಬುದು ಅತ್ಯಂತ ಸ್ಪಷ್ಟ.
ಅಮೆರಿಕದ ಬೆಂಗಾವಲು ಇಲ್ಲದೆ ಸಾಧಿಸಿದ ಸಾಹಸ
ಈ ಹಡಗಿಗೆ ಅಮೆರಿಕದ ನೌಕಾಪಡೆ ರಕ್ಷಣೆ ನೀಡಿತ್ತು ಎಂಬ ವದಂತಿಗಳು ಆರಂಭದಲ್ಲಿ ಹಬ್ಬಿದ್ದವು. ಸ್ವತಃ ಅಮೆರಿಕದ ಇಂಧನ ಸಚಿವರೇ ಈ ಬಗ್ಗೆ ಟ್ವೀಟ್ ಮಾಡಿ, ನಂತರ ಅದನ್ನು ಅಳಿಸಿಹಾಕಿದ್ದರು.
ಅಂತಿಮವಾಗಿ ಶ್ವೇತಭವನವು ಈ ವಾಣಿಜ್ಯ ಹಡಗಿಗೆ ಯಾವುದೇ ಮಿಲಿಟರಿ ಬೆಂಗಾವಲು ಒದಗಿಸಿರಲಿಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಇದು ಯಾವುದೇ ಜಾಗತಿಕ ಸೂಪರ್ ಪವರ್ ದೇಶದ ಮಿಲಿಟರಿ ನೆರವಿಲ್ಲದೆ, ಅಪಾಯದ ನಡುವೆಯೂ ಭಾರತದ ಇಂಧನ ಪೂರೈಕೆ ಸರಣಿ ತನ್ನ ಹಾದಿಯನ್ನು ಕಂಡುಕೊಂಡಿರುವುದನ್ನು ತೋರಿಸುತ್ತದೆ.







