ಸಂಜು ಸ್ಯಾಮ್ಸನ್..
ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು…! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ ಅಂಟಿಕೊಂಡಿವೆ ಸಾಲು ಸಾಲು ದಾಖಲೆಗಳು…! ಏಳು ಬೀಳುಗಳ ಹಾದಿಯಲ್ಲಿ ಮಾಡಿರುವ ಸಾಧನೆಗಳಿಗೆ ಸೇರಿಕೊಂಡಿವೆ ಹಲವಾರು ಗರಿಗಳು…! ತನ್ನ ಬ್ಯಾಟ್ನಿಂದ ಸಿಡಿಯುವ ಪ್ರತಿ ರನ್ಗಳಿಗೆ ಸಾಕ್ಷಿಯಾಗಿವೆ ಲೆಕ್ಕವಿಲ್ಲದಷ್ಟು ಬೆವರ ಹನಿಗಳು…! ತಾಳ್ಮೆ, ಏಕಾಗ್ರತೆ, ಪರಿಶ್ರಮವೇ ಪ್ರತಿ ದಿನ ಜಪಿಸುವ ಮಂತ್ರಗಳು..!
ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕ್ರಿಕೆಟಿಗ ಸಂಜು ಸ್ಯಾಮ್ಸನ್. ಅದರಲ್ಲೂ 2026ರ ಟಿ-20 ವಿಶ್ವಕಪ್ ಟೂರ್ನಿಯ ಎರಡು ಮಹೋನ್ನತ ಇನಿಂಗ್ಸ್ಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಹಾಗಾಗಿಯೇ ಸಂಜು ಸ್ಯಾಮ್ಸನ್ ಎಂಬ ಹೆಸರು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲೂ ನಲಿದಾಡುತ್ತಿದೆ.
ಈ ಹಿಂದೆ ಐಪಿಎಲ್ ಆಗಿರಬಹುದು, ದೇಸಿ ಕ್ರಿಕೆಟ್ ಆಗಿರಬಹುದು ಅಥವಾ ಟೀಮ್ ಇಂಡಿಯಾ ಪರ ಅದ್ಭುತ ಇನಿಂಗ್ಸ್ಗಳನ್ನು ಆಡಿದ್ರೂ ಸಂಜು ಜಾಸ್ತಿ ಚಾಲ್ತಿಯಲ್ಲಿರುತ್ತಿರಲಿಲ್ಲ. ಅಷ್ಟೇ ಅಲ್ಲ, ಟೀಮ್ ಇಂಡಿಯಾಗೆ ಬಂದು ಹೋಗುವ ಅತಿಥಿ ಆಟಗಾರ ಎಂಬ ಹಣೆಪಟ್ಟಿಯೂ ಇತ್ತು. ಕೆಲವೊಮ್ಮೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡ್ರೂ ಸ್ಥಿರ ಪ್ರದರ್ಶನ ನೀಡುತ್ತಿರಲಿಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾಗೆ ಅನಿವಾರ್ಯ ಆಟಗಾರನಾಗಲಿಲ್ಲ.
ಹಾಗೇ ನೋಡಿದ್ರೆ ಸಂಜು ಸ್ಯಾಮ್ಸನ್ ಅದ್ಭುತ ಪ್ರತಿಭಾವಂತ ಕ್ರಿಕೆಟಿಗ. ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿ, ನಾಯಕನಾಗುವಂತಹ ಎಲ್ಲಾ ಅರ್ಹತೆಗಳು ಇದ್ದವು. ಆದ್ರೆ ಅದೃಷ್ಟ ಕೈ ಹಿಡಿಯಲಿಲ್ಲ. ಅದಕ್ಕಿಂತ ಹೆಚ್ಚಾಗಿ ಗಾಡ್ಫಾದರ್ಗಳ ಬಲವೂ ಇರಲಿಲ್ಲ. ಒಂದು ವೇಳೆ, ಸಂಜು ಸ್ಯಾಮ್ಸನ್, ದೆಹಲಿ, ಮುಂಬೈ ಪರ ಆಡುತ್ತಿದ್ರೆ ಕೊಹ್ಲಿ, ರೋಹಿತ್ ಶರ್ಮಾನ ಉತ್ತರಾಧಿಕಾರಿಯಾಗುತ್ತಿದ್ದರು. ಅಷ್ಟೊಂದು ಸಾಮಥ್ರ್ಯ ಸಂಜುವಿನಲ್ಲಿತ್ತು. ಆದ್ರೆ ಸ್ಥಾನಮಾನಕ್ಕಾಗಿ ಎಂದೂ ಕೂಡ ಸಂಜು ಲಾಬಿ ಮಾಡಲಿಲ್ಲ. ಯಾರನ್ನೂ ಒಲೈಕೆ ಸಹ ಮಾಡಲಿಲ್ಲ. ಹಾಗಾಗಿಯೇ ಸಂಜು ತೆರೆಮರೆಯಲ್ಲಿದ್ದುಕೊಂಡು, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಇಂದು ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಸಂಜು ಸ್ಯಾಮ್ಸನ್ ಶಾಂತ ಸ್ವಭಾವದ ವ್ಯಕ್ತಿ. ಆದ್ರೆ ಆಕ್ರಮಣಾಕಾರಿ ಪ್ರವೃತ್ತಿಯ ದಾಂಡಿಗ. ವೈಯಕ್ತಿಕ ಆಟಕ್ಕಿಂತ ಜಾಸ್ತಿ ತಂಡದ ಹಿತಕ್ಕಾಗಿ ಆಡುವ ಆಟಗಾರ. ಎಷ್ಟೇ ಅವಮಾನವಾದ್ರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ತಂಡದಿಂದ ಕೈಬಿಟ್ಟರೂ ಧೃತಿಗೆಡಲಿಲ್ಲ. ಯಾರು ಏನೇ ಟೀಕೆ ಮಾಡಿದ್ರೂ ಎದೆಗುಂದಲಿಲ್ಲ. ತಾಳ್ಮೆ, ಸಂಯಮ ಮತ್ತು ಕಾಯುವಿಕೆಯೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂಬ ಅಚಲವಾದ ವಿಶ್ವಾಸ ಅವರನ್ನು ಕೈಬಿಡಲಿಲ್ಲ. ಹಾಗಾಗಿಯೇ ದೇವರನಾಡಿನ ಹುಡುಗ ಇಂದು ಟೀಮ್ ಇಂಡಿಯಾದ ಅಪತ್ಭಾಂದವನಾಗಿದ್ದಾರೆ.
ಹೇಳಿ ಕೇಳಿ ಸಂಜು ಕೇರಳದ ಹುಡುಗ. ಅಂದ ಮೇಲೆ ಫುಟ್ಬಾಲ್, ಅಥ್ಲೆಟಿಕ್ಸ್ ಅಲ್ಲಿನವರಿಗೆ ರಕ್ತಗತವಾಗಿ ಬಂದಿರುವ ಬಳುವಳಿ. ಅಂತಹುದರಲ್ಲಿ ಸಂಜು ಆಯ್ಕೆ ಮಾಡಿಕೊಂಡಿರುವುದು ಕ್ರಿಕೆಟ್ ಆಟವನ್ನು. ಅಷ್ಟಕ್ಕೂ ಸಂಜು ತಂದೆ ಸ್ಯಾಮ್ಸನ್ ವಿಶ್ವನಾಥ್ ಪೊಲೀಸ್ ಕಾನ್ಸ್ಟೇಬಲ್. ಹಾಗೇ ಫುಟ್ಬಾಲ್ ಆಟಗಾರ ಕೂಡ ಹೌದು. ದೆಹಲಿಯ ಪೊಲೀಸ್ ಕ್ವಾಟರ್ಸ್ನಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಂಜು ಪ್ರತಿಭೆಯನ್ನು ಗುರುತಿಸಿದ್ದ ಸ್ಯಾಮ್ಸನ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೇರಳದ ತಿರುವನಂತಪುರಕ್ಕೆ ಶಿಫ್ಟ್ ಆದ್ರು. ಮಗನ ಕ್ರಿಕೆಟ್ ತರಬೇತಿಗಾಗಿ ಪಟ್ಟ ಕಷ್ಟ, ಪರಿಶ್ರಮ ಅಷ್ಟಿಷ್ಟಲ್ಲ. ರಾಷ್ಟ್ರೀಯ ತಂಡದಲ್ಲಿ ಮಗನಿಗೆ ಸರಿಯಾದ ಅವಕಾಶ ಸಿಗದೇ ಇದ್ದಾಗ ಬಹಿರಂಗವಾಗಿಯೇ ಟೀಕೆ ಕೂಡ ಮಾಡಿದ್ದರು. ಆದ್ರೆ ಒಂದಲ್ಲ ಒಂದು ದಿನ ತನ್ನ ಮಗನ ಸಾಮಥ್ರ್ಯ ಏನು ಎಂಬುದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತಾಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಅವರ ನಂಬಿಕೆ ಹುಸಿಯಾಗಲಿಲ್ಲ. ಹಾಗಾಗಿಯೇ ಇವತ್ತು ಸಂಜು ಸಾಮ್ಸನ್ ಸಾಮ್ಸನ್ ಸಾಮಥ್ರ್ಯ, ಬ್ಯಾಟಿಂಗ್ ವೈಖರಿಯನ್ನು ಕ್ರಿಕೆಟ್ ಪಂಡಿತರು ಕೊಂಡಾಡುತ್ತಿದ್ದಾರೆ.
ಸಂಜು ಸ್ಯಾಮ್ಸನ್, ಕೇರಳ ದೇಸಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ವಿವಿಧ ವಯೋಮಿತಿ, 2014ರ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಉಪನಾಯಕನಾಗಿ, ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ನಲ್ಲೂ ಮಿಂಚು ಹರಿಸಿದ್ದರು. ಜೊತೆಗೆ ಕೇರಳ ರಣಜಿ ತಂಡದ ಅತೀ ಕಿರಿಯ ನಾಯಕ ಎಂಬ ಗೌರವಕ್ಕೂ ಪಾತ್ರರಾಗಿದ್ದರು. 2012ರಲ್ಲಿ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡ್ರೂ ಆಡುವ ಅವಕಾಶ ಸಿಗಲಿಲ್ಲ. ಬಳಿಕ 2013ರಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡ್ರು. ಅಲ್ಲಿ ರಾಹುಲ್ ದ್ರಾವಿಡ್ ಕಣ್ಣಿಗೆ ಬಿದ್ದ ಸಂಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಈ ನಡುವೆ, 2016 ಮತ್ತು 17ರಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಪರ ಆಡಿದ್ರೂ ಮತ್ತೆ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡ್ರು. ಸತತ ಎಂಟು ವರ್ಷ ಆರ್ಆರ್ ಪರ ಆಡಿದ್ದ ಸಂಜು ನಾಯಕನಾಗಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಇದೀಗ 2026ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ.
ಈ ನಡುವೆ, ಸಂಜು ಸ್ಯಾಮನ್ಸ್, ಟೀಮ್ ಇಂಡಿಯಾದ ಹೆಡ್ ಕೋಚ್ಗಳಾದ ರವಿಶಾಸ್ತ್ರಿ, ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ, ತಂಡದಲ್ಲಿ ಸ್ಥಾನ ಪಡೆದುಕೊಂಡ್ರೂ ಸ್ಥಿರ ಪ್ರದರ್ಶನದ ಕೊರತೆ ಅವರನ್ನು ಎಡೆಬಿಡದೇ ಕಾಡುತ್ತಿತ್ತು. ( ಬೇರೆಯವರಿಗೆ ಅವಕಾಶ ಕೊಟ್ಟಷ್ಟು ಸಂಜುಗೆ ಅವಕಾಶಗಳನ್ನು ನೀಡಲಿಲ್ಲ.) ಹೀಗಾಗಿ ಸಂಜುಗೆ ಸರಿಯಾದ ಅವಕಾಶಗಳು ಸಿಗಲಿಲ್ಲ. ಜೊತೆಗೆ ಯುವ ಆಟಗಾರರ ನಡುವಿನ ಬಿರುಸಿನ ಸ್ಪರ್ಧೆ, ತಂಡದೊಳಗಿನ ಒಳರಾಜಕೀಯದಿಂದ ಸಂಜು ಮೂಲೆಗುಂಪಾಗಿದ್ದರು. ಆದ್ರೂ ಸಂಜು ಮೌನವಾಗಿಯೇ ಎಲ್ಲವನ್ನೂ ಸಹಿಸಿಕೊಂಡಿದ್ದರು. ಇಂದಲ್ಲ, ನಾಳೆಯಾದ್ರೂ ನನ್ನ ಸಮಯ ಬಂದೇ ಬರುತ್ತೆ. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ ಎಂಬ ಆತ್ಮಸ್ಥೈರ್ಯ ಅವರಲ್ಲಿತ್ತು. ಹಾಗೇ ಈಗೀನ ಹೆಡ್ ಕೋಚ್ ಗೌತಮ್ ಗಂಭೀರ್, ನಾಯಕ ಸ್ಕೈ ಕೂಡ ಸಂಜುಗೆ 11ರ ಬಳಗದಲ್ಲಿ ಆಡಲು ಹೆಚ್ಚು ಅವಕಾಶಗಳನ್ನು ನೀಡುತ್ತಿರಲಿಲ್ಲ. ಆದ್ರೆ ಟೀಮ್ ಇಂಡಿಯಾದ ನಂಬಿಕಸ್ಥ ಆರಂಭಿಕರು ಕೈಕೊಟ್ಟಾಗ ನೆನಪಾಗಿದ್ದು ಸಂಜು ಸ್ಯಾಮ್ಸನ್ ಅವರೇ. ನಮೀಬಿಯಾ ವಿರುದ್ಧ 8 ಎಸೆತಗಳಲ್ಲಿ 22ರನ್, ಸೂಪರ್ -8 ಹಂತದಲ್ಲಿ ಜಿಂಬಾಬ್ವೆ ವಿರುದ್ಧ 15 ಎಸೆತಗಳಲ್ಲಿ 24 ರನ್ ಸಿಡಿಸಿದಾಗಲೂ ಸಂಜು ಮೇಲೆ ಟೀಕೆಗಳೇ ಕೇಳಿಬಂದಿದ್ದವು. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧ 50 ಎಸೆತಗಳಲ್ಲಿ 97 ರನ್ ಹಾಗೂ ಇಂಗ್ಲೆಂಡ್ ವಿರುದ್ದ 42 ಎಸೆತಗಳಲ್ಲಿ 89 ರನ್ ಸಿಡಿಸಿ ಟೀಕೆ ಮಾಡಿದವರ ಬಾಯಿ ಮುಚ್ಚಿಸಿದ್ರು. ಅಪಮಾನ, ಅವಮಾನಕ್ಕೆ ಪ್ರತಿಕಾರದಂತೆ ಬ್ಯಾಟ್ ಬೀಸಿದ್ದರು. ತನ್ನ ಸಾಮಥ್ರ್ಯ, ಪ್ರತಿಭೆಯನ್ನು ಅಣಕಿಸಿದವರಿಗೆ ನೀಡಿರುವ ಉತ್ತರವಂತೂ ಸದಾ ನೆನಪಿನಲ್ಲಿರುತ್ತದೆ.
ಇದೀಗ ಫೈನಲ್ ಪಂದ್ಯದ ಮೇಲೆ ಸಹಜವಾಗಿಯೇ ಸಂಜು ಮೇಲೆ ನಿರೀಕ್ಷೆಗಳ ಭಾರವೇ ಇದೆ. ಅದು ಏನೇ ಇರಲಿ.. ನಿಮ್ಮ ಪ್ರತಿಭೆಯ ಮೇಲೆ ನಿಮಗೆ ನಂಬಿಕೆ ಇರಲಿ..ನಿಮ್ಮ ಪರಿಶ್ರಮ, ತ್ಯಾಗ, ಬದ್ದತೆಗೆ ಒಂದಲ್ಲ ಒಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ. ಇದಕ್ಕೆ ಅತ್ಯುತ್ತಮ ನಿದರ್ಶನ ಸಂಜು ಸ್ಯಾಮ್ಸನ್.
ಸನತ್ ರೈ







