ದಾವಣಗೆರೆ: ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ಈಗ ಮಜಾರಾಮಯ್ಯ ಹಾಗೂ ಸಾಲದರಾಮಯ್ಯ ಆಗಿ ಬದಲಾಗಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಮಂಗಳವಾರ ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ರಾಜ್ಯದಲ್ಲೇ ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ದೃಷ್ಟಿಯಿಂದ, ಅತ್ಯುತ್ತಮ ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ, ಶುದ್ಧ ಕುಡಿಯುವ ನೀರು ಹಾಗೂ ಸುಸಜ್ಜಿತ ರಸ್ತೆಗಳ ನಿರ್ಮಾಣದ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆಯನ್ನು ಧಿಕ್ಕರಿಸಿ, ತಮ್ಮದೇ ಮನೆಯ ಮಗನಂತಿರುವ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಕ್ಷೇತ್ರದ ಮತದಾರರಲ್ಲಿ ಅವರು ಮನವಿ ಮಾಡಿದರು.
ರಾಜ್ಯದ ಆರ್ಥಿಕ ಸ್ಥಿತಿ ಐಸಿಯುನಲ್ಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಂಕಿ ಅಂಶಗಳ ಸಮೇತ ಮುಗಿಬಿದ್ದ ಆರ್ ಅಶೋಕ್, ರಾಜ್ಯವನ್ನು ಹಿಂದೆಂದೂ ಕಾಣದಂತಹ ಸಾಲದ ಸುಳಿಗೆ ಸಿಲುಕಿಸಲಾಗಿದೆ ಎಂದು ಆರೋಪಿಸಿದರು. 2013ರಲ್ಲಿ ರಾಜ್ಯದ ಪ್ರತಿಯೊಬ್ಬ ನಾಗರಿಕನ ಮೇಲಿದ್ದ ಸಾಲದ ಹೊರೆ ಕೇವಲ 19 ಸಾವಿರ ರೂಪಾಯಿಗಳಾಗಿತ್ತು. ಆದರೆ ಇಂದದು ಬರೋಬ್ಬರಿ 1 ಲಕ್ಷದ 12 ಸಾವಿರದ 400 ರೂಪಾಯಿಗಳಿಗೆ ಏರಿಕೆಯಾಗಿದೆ. 2023 ರಲ್ಲಿ 81 ಸಾವಿರ ಕೋಟಿ, 2024 ರಲ್ಲಿ 92.25 ಸಾವಿರ ಕೋಟಿ, 2025 ರಲ್ಲಿ 1.16 ಲಕ್ಷ ಕೋಟಿ ಹಾಗೂ ಈ ವರ್ಷ 1.32 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಸಾಲವನ್ನು ಮಾಡಲಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಐಸಿಯು ಸೇರಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಗಂಟೆಗೆ 5 ಕೋಟಿ ರೂಪಾಯಿ ಕೇವಲ ಬಡ್ಡಿ ಪಾವತಿ
ಹದಿನೇಳು ಬಜೆಟ್ ಮಂಡಿಸಿರುವ ಆರ್ಥಿಕ ತಜ್ಞ ಎಂದು ಬೀಗುವ ಮುಖ್ಯಮಂತ್ರಿಗಳ ಆಡಳಿತದಲ್ಲಿ ರಾಜ್ಯ ಸರ್ಕಾರ ಕೇವಲ ಬಡ್ಡಿ ಕಟ್ಟಲು ಪರದಾಡುತ್ತಿದೆ. ವರ್ಷಕ್ಕೆ ಬರೋಬ್ಬರಿ 45 ಸಾವಿರದ 600 ಕೋಟಿ ರೂಪಾಯಿ, ದಿನಕ್ಕೆ 125 ಕೋಟಿ ಹಾಗೂ ಗಂಟೆಗೆ 5.25 ಕೋಟಿ ರೂಪಾಯಿ ಕೇವಲ ಸಾಲದ ಬಡ್ಡಿಗೆ ಪಾವತಿಯಾಗುತ್ತಿದೆ. ಆರ್ಥಿಕ ಶಿಸ್ತಿನ ಮಿತಿ ಶೇಕಡಾ 3 ಮೀರಿದ್ದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡದೆ ಬ್ಲ್ಯಾಕ್ ಮ್ಯಾಜಿಕ್ ಮಾಡುವ ಮೂಲಕ ಆರ್ಥಿಕ ಶಿಸ್ತು ಕಾಪಾಡಿಕೊಂಡಿರುವಂತೆ ಜನರಿಗೆ ಸುಳ್ಳು ಬಿಂಬಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ವಯನಾಡಿಗೆ ಅನುದಾನ, ಸ್ಥಳೀಯ ಅಭಿವೃದ್ಧಿ ಶೂನ್ಯ
ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸುವ ಕಾಂಗ್ರೆಸ್ ನಾಯಕರು, ತಮ್ಮ ಅವಧಿಯಲ್ಲಿ ಆಗಿರುವ ಒಂದೇ ಒಂದು ಅಭಿವೃದ್ಧಿಯ ಕುರುಹನ್ನು ತೋರಿಸಲಿ ಎಂದು ಅಶೋಕ್ ಸವಾಲೆಸೆದರು. ದಲಿತರ ಚಾಂಪಿಯನ್ ಎಂದು ಹೇಳಿಕೊಳ್ಳುವ ಸರ್ಕಾರ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆಡೆಗೆ ಬಳಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಓಲೈಸುವ ಏಕೈಕ ಉದ್ದೇಶದಿಂದ ನೆರೆಯ ಕೇರಳದ ವಯನಾಡಿಗೆ 20 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಆದರೆ ನಮ್ಮದೇ ರಾಜ್ಯದ ಅನಾಥ ಮಕ್ಕಳು, ಭಿಕ್ಷುಕರು ಹಾಗೂ ಬಡವರಿಗೆ ನೀಡಲು ಇವರ ಬಳಿ ಹಣವಿಲ್ಲ. ಇಷ್ಟೆಲ್ಲಾ ದುರಾಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.







