ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಕುರುಬ ಸಮುದಾಯದ ಹೆಸರನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಇತ್ತೀಚಿನ ಸರಣಿ ಟ್ವೀಟ್ಗಳು ಮತ್ತು ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಅಧಿಕಾರದ ಲಾಲಸೆಗೆ ಇಡೀ ಸಮುದಾಯವನ್ನು ಎಳೆದು ತರುತ್ತಿರುವುದು ಅವರ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಸಂದೇಶ ರವಾನೆ ಯಾರಿಗೆ?
ಮುಖ್ಯಮಂತ್ರಿಗಳು ತಾವು ಕುರುಬ ಸಮುದಾಯದವರು ಎಂಬ ಕಾರಣಕ್ಕೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ನಡೆಯುತ್ತಿದೆ ಎಂದು ಹೇಳುವ ಮೂಲಕ ಯಾರಿಗೆ ಸಂದೇಶ ಕೊಡಲು ಹೊರಟಿದ್ದಾರೆ? ಇದು ಕಾಂಗ್ರೆಸ್ ಹೈಕಮಾಂಡಿಗಾ ಅಥವಾ ಪಕ್ಷದೊಳಗೆ ಅವರ ಕುರ್ಚಿ ಅಲುಗಾಡಿಸಲು ನಿಂತಿರುವವರಿಗಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಜಾತಿಯನ್ನು ಮುನ್ನೆಲೆಗೆ ತರುವ ಮೂಲಕ, ಅವರ ಹೃದಯದಲ್ಲಿ ಜಾತ್ಯಾತೀತತೆಗಿಂತ ಜಾತಿ ಪ್ರೇಮವೇ ಎಷ್ಟರಮಟ್ಟಿಗೆ ತುಂಬಿದೆ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.
ಸಾಮಾಜಿಕ ನ್ಯಾಯದ ಹೆಸರಲ್ಲಿ ನಾಟಕ
ವೇದಿಕೆಗಳಲ್ಲಿ ಬಸವಣ್ಣ, ಅಂಬೇಡ್ಕರ್ ಅವರ ಹೆಸರು ಹೇಳುತ್ತಾ ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ತತ್ವಗಳ ಬಗ್ಗೆ ಭಾಷಣ ಮಾಡುವ ಸಿದ್ದರಾಮಯ್ಯ, ಅಧಿಕಾರಕ್ಕೆ ಕುತ್ತು ಬಂದಾಗ ಮಾತ್ರ ಜಾತಿ ಅಸ್ತ್ರ ಪ್ರಯೋಗಿಸುತ್ತಾರೆ. ಸಿದ್ದರಾಮಯ್ಯ ಬೆಳೆಯಲು ಕೇವಲ ಕುರುಬ ಸಮಾಜ ಮಾತ್ರವಲ್ಲ, ರಾಜ್ಯದ ಎಲ್ಲಾ ಸಮುದಾಯಗಳು ಬೆಂಬಲ ನೀಡಿವೆ. ಆದರೆ ಈಗ ತಮ್ಮ ವೈಯಕ್ತಿಕ ಅಧಿಕಾರಕ್ಕಾಗಿ ಇಡೀ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನನಗೆ ಅಸೂಯೆಯಿಂದ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಆಶ್ರಯ ಕೊಟ್ಟ ಪಕ್ಷವನ್ನೇ ನುಂಗುವ ಜಾಯಮಾನ
ಸಿದ್ದರಾಮಯ್ಯ ಅವರಿಗೆ ಕುರ್ಚಿ ಬಿಟ್ಟುಕೊಡುವ ಜಾಯಮಾನ ಮೊದಲಿನಿಂದಲೂ ಇಲ್ಲ. ಅಧಿಕಾರ ಬಿಟ್ಟುಕೊಡುವುದು ಅವರ ರಕ್ತದಲ್ಲೇ ಬಂದಿಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗಲೂ ಕುರ್ಚಿಗಾಗಿ ಇದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ಅಂದು ನಾವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಇಂದು ಆಶ್ರಯ ಕೊಟ್ಟ ಕಾಂಗ್ರೆಸ್ ಪಕ್ಷವನ್ನೇ ಅವರು ಆವರಿಸಿಕೊಂಡಿದ್ದಾರೆ. ಕಾಂಗ್ರೆಸ್ನ ಮೂಲ ನಿವಾಸಿಗಳನ್ನು ಮತ್ತು ಹಿರಿಯರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಇತಿಹಾಸವನ್ನು ಕೆದಕಿದರು.
ಹೊಸ ಅಸ್ತ್ರ ಪ್ರಯೋಗ
ನಾನಿದ್ದರೆ ಮಾತ್ರ ಕಾಂಗ್ರೆಸ್, ನಾನಿಲ್ಲದಿದ್ದರೆ ಕಾಂಗ್ರೆಸ್ ಪಕ್ಷವೇ ಇಲ್ಲ ಎನ್ನುವ ವಾತಾವರಣವನ್ನು ಸಿದ್ದರಾಮಯ್ಯ ಸೃಷ್ಟಿ ಮಾಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಅವರು ಎಂತಹ ತಂತ್ರಗಾರಿಕೆ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಅಹಿಂದ ಜನರ ಉದ್ಧಾರಕ್ಕಾಗಿ ಅವರು ಅಧಿಕಾರಕ್ಕೆ ಬಂದಿಲ್ಲ, ಕೇವಲ ಸ್ವಂತ ಅಧಿಕಾರಕ್ಕಾಗಿ ಬಂದಿದ್ದಾರೆ ಎಂದು ದೂರಿದರು.
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ
ಇದೇ ವೇಳೆ ಮೈತ್ರಿ ಪಕ್ಷಗಳ ನಡುವಿನ ಗೊಂದಲ ನಿವಾರಣೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚನೆಯಾಗಬೇಕು ಎಂಬುದು ಬಿಜೆಪಿ ಕಾರ್ಯಕಾರಣಿಯಲ್ಲೂ ಚರ್ಚೆಯಾಗಿದೆ. ಗೊಂದಲಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಹೋಗಲು ಸಮಿತಿ ಅವಶ್ಯಕ ಎಂದು ನಾನು ಮೊದಲೇ ಹೇಳಿದ್ದೆ. ನಮ್ಮ ಪಕ್ಷದ ಕಡೆಯಿಂದ ಮೈತ್ರಿ ಧರ್ಮಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.







