ಪುಣೆ: ಛತ್ರಪತಿ ಶಿವಾಜಿ ಮಹಾರಾಜರನ್ನು ಟಿಪ್ಪು ಸುಲ್ತಾನ್ ಅವರಿಗೆ ಹೋಲಿಸಿ ಕಾಂಗ್ರೆಸ್ ನಾಯಕನೊಬ್ಬ ನೀಡಿದ ಹೇಳಿಕೆ ಮಹಾರಾಷ್ಟ್ರದ ಪುಣೆಯಲ್ಲಿ ದಳ್ಳುರಿ ಹಬ್ಬಿಸಿದೆ. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ರಣರಂಗವೇ ಸೃಷ್ಟಿಯಾಗಿದೆ. ಎರಡೂ ಕಡೆಯಿಂದ ನಡೆದ ಕಲ್ಲುತೂರಾಟದಲ್ಲಿ ಪೊಲೀಸರು ಮತ್ತು ಪತ್ರಕರ್ತರು ಸೇರಿದಂತೆ ಒಟ್ಟು 9 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಈ ಇಡೀ ವಿವಾದದ ಮೂಲ ಮಹಾರಾಷ್ಟ್ರದ ಮಾಲೇಗಾಂವ್. ಅಲ್ಲಿನ ಉಪಮೇಯರ್ ಶಾನ್ ಎ ಹಿಂದ್ ನಿಹಾಲ್ ಅಹಮದ್ ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರವನ್ನು ಅಳವಡಿಸಿದ್ದರು. ಈ ನಡೆಯನ್ನು ಶಿವಸೇನೆ ಮತ್ತು ವಿವಿಧ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು ಹಾಗೂ ವಿರೋಧ ವ್ಯಕ್ತಪಡಿಸಿದ್ದವು.
ವಿವಾದಕ್ಕೆ ತುಪ್ಪ ಸುರಿದ ಹೇಳಿಕೆ
ಟಿಪ್ಪು ಫೋಟೋ ಅಳವಡಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ಹರ್ಷವರ್ಧನ್ ಸಪ್ಕಲ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಬೆಂಕಿಗೆ ತುಪ್ಪ ಸುರಿದರು. ಟಿಪ್ಪು ಫೋಟೋ ಹಾಕಿದ್ದನ್ನು ಸಮರ್ಥಿಸಿಕೊಂಡ ಅವರು ಟಿಪ್ಪು ಸುಲ್ತಾನ್ ನನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸಿದರು. ಶಿವಾಜಿ ಮಹಾರಾಜರು ಸ್ವರಾಜ್ಯಕ್ಕಾಗಿ ಹೇಗೆ ಕರೆ ನೀಡಿದ್ದರೋ ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡರು.
ಕಾಂಗ್ರೆಸ್ ಭವನದ ಎದುರು ರಣರಂಗ
ಹರ್ಷವರ್ಧನ್ ಸಪ್ಕಲ್ ಅವರ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಭಾನುವಾರ ಪುಣೆಯ ಕಾಂಗ್ರೆಸ್ ಭವನದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆಯೇ ಏಕಾಏಕಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನೋಡನೋಡುತ್ತಿದ್ದಂತೆಯೇ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಶಾಂತಿಯುತವಾಗಿದ್ದ ಸ್ಥಳ ಕ್ಷಣಾರ್ಧದಲ್ಲಿ ಯುದ್ಧಭೂಮಿಯಂತಾಯಿತು.
ಪೊಲೀಸರು ಮತ್ತು ಪತ್ರಕರ್ತರಿಗೂ ಗಾಯ
ಈ ಕಲ್ಲು ತೂರಾಟದ ತೀವ್ರತೆ ಎಷ್ಟಿತ್ತೆಂದರೆ ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಮತ್ತು ಬಿಜೆಪಿಯ ಇಬ್ಬರು ಕಾರ್ಯಕರ್ತರು ಗಾಯಗೊಂಡರು. ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ವರದಿ ಮಾಡಲು ಬಂದಿದ್ದ ಇಬ್ಬರು ಪತ್ರಕರ್ತರಿಗೂ ಕಲ್ಲು ತೂರಾಟದಿಂದ ಗಾಯಗಳಾಗಿವೆ.
ಪ್ರಕರಣ ದಾಖಲು
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದ ಉಭಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ. ಶಿವಾಜಿ ಮಹಾರಾಜರಿಗೆ ಟಿಪ್ಪು ಸುಲ್ತಾನ್ ರನ್ನು ಹೋಲಿಕೆ ಮಾಡಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಈಗ ಭಾರಿ ಸಂಚಲನ ಮೂಡಿಸಿದೆ.







