ಐಪಿಎಲ್ 2020- ಫೈನಲ್ ಗೆ ಎಂಟ್ರಿಯಾದ ಮುಂಬೈ ಇಂಡಿಯನ್ಸ್.. ಬೂಮ್ರಾ ದಾಳಿಗೆ ಡೆಲ್ಲಿ ತತ್ತರ ..!
2020ರ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಫೈನಲ್ ಗೆ ಎಂಟ್ರಿಯಾಗಿದೆ.
ದುಬೈ ನಲ್ಲಿ ಪಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 57 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪರಾಭವಗೊಳಿಸಿತು.
ಡೆಲ್ಲಿ ಬ್ಯಾಟ್ಸ್ ಮೆನ್ ಗಳಿಗೆ ಜಸ್ಪ್ರಿತ್ ಬೂಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಮಾರಕವಾಗಿ ಕಾಡಿದ್ರು. ಇನ್ನೊಂದೆ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಡೆಲ್ಲಿ ಬೌಲರ್ ಗಳ ಚಳಿ ಬಿಡಿಸಿದ್ರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಮುಂಬೈ ಇಂಡಿಯನ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.
ಆರಂಭದಲ್ಲೇ ಕ್ವಿಂಟನ್ ಡಿಕಾಕ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ರು. ಆದ್ರೆ ನಾಯಕ ರೋಹಿತ್ ಶರ್ಮಾ ಅವರು ಡಕೌಟಾದ್ರು.
ನಂತರ ಡಿಕಾಕ್ ಮತ್ತು ಸೂರ್ಯ ಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಡಿ ಕಾಕ್ 25 ಎಸೆತಗಳಲ್ಲಿ 40 ರನ್ ಗಳಿಸಿದ್ರು.ಹಾಗೇ ಸೂರ್ಯ ಕುಮಾರ್ ಯಾದವ್ 51 ರನ್ ಸಿಡಿಸಿದ್ರು.
ಬಳಿಕ ಕಿರಾನ್ ಪೊಲಾರ್ಡ್ ಅವರು ಕೂಡ ಶೂನ್ಯ ಸುತ್ತಿದ್ರು. ಕೃನಾಲ್ ಪಾಂಡ್ಯ 13 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಆಗ ಮುಂಬೈ ಇಂಡಿಯನ್ಸ್ ತಂಡ 16.1 ಓವರ್ ಗಳಲ್ಲಿ 140 ರನ್ ಗಳಿಸಿತ್ತು.
ಈ ನಡುವೆ ಇಶಾನ್ ಕಿಶಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಹೊಡಿಬಡಿ ಆಟಕ್ಕೆ ಮುಂದಾದ್ರು.
ಪರಿಣಾಮ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ಗೆ 200 ರನ್ ಗಳಿತ್ತು.
ಇಶಾನ್ ಕಿಶಾನ್ ಅವರು 30 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 55 ರನ್ ಗಳಿಸಿದ್ರು. ಹಾರ್ದಿಕ್ ಪಾಂಡ್ಯ ಕೇವಲ 14 ಎಸೆತಗಳಲ್ಲಿ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 37 ರನ್ ಗಳಿಸಿದ್ರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರ್. ಅಶ್ವಿನ್ ಅವರು 29ಕ್ಕೆ ಮೂರು ವಿಕೆಟ್ ಕಬಳಿಸಿದ್ರು. ಪ್ರಮುಖ ಬೌಲರ್ ಗಳಾದ ರಬಾಡ, ಅನ್ರಿಚ್ಡೇನಿಯಲ್ ಸ್ಯಾಮ್ಸ್ ದುಬಾರಿಯಾದ್ರು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭದಲ್ಲೇ ಜಸ್ಪ್ರಿತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಆಘಾತದ ಮೇಲೆ ಆಘಾತ ನೀಡಿದ್ರು.
ಪೃಥ್ವಿ ಶಾ, ಶಿಖರ್ ಧವನ್ ಹಾಗೂ ಅಜ್ಯಂಕ್ಯಾ ರಹಾನೆ ಅವರು ಸೂನ್ಯ ಸುತ್ತಿ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿದ್ರು.
ನಾಯಕ ಶ್ರೇಯಸ್ ಅಯ್ಯರ್ 12 ರನ್ ಗೆ ಸೀಮಿತವಾದ್ರೆ, ರಿಷಬ್ ಪಂತ್ ಮೂರು ರನ್ ಗಳಿಸಿದ್ರು.
ಈ ನಡುವೆ ಮಾರ್ಕಸ್ ಸ್ಟೋನಿಸ್ ಅವರು 46 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 65 ರನ್ ದಾಖಲಿಸಿ ತಂಡದ ಮರ್ಯಾದೆ ಉಳಿಸಿದ್ರು.
ಇನ್ನೊಂದೆಡೆ ಅಕ್ಷರ್ ಪಟೇಲ್ ಆಕರ್ಷಕ 42 ರನ್ ಗಳಿಸಿ ಗಮನ ಸೆಳೆದ್ರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಟು ವಿಕೆಟ್ ಗೆ 143 ರನ್ ದಾಖಲಿಸಿ ಸೋಲು ಅನುಭವಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತ್ರೂ ಮತ್ತೊಂದು ಅವಕಾಶವಿದೆ. ಆರ್ ಸಿಬಿ ಮತ್ತು ಎಸ್ ಆರ್ ಎಚ್ ನಡುವಿನ ಪಂದ್ಯದಲ್ಲಿ ಗೆದ್ದವರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಆಡಲಿದೆ.
ಮಾರಕ ಬೌಲಿಂಗ್ ದಾಳಿ ಸಂಘಟಿಸಿದ್ದ ಜಸ್ಪ್ರಿತ್ ಬೂಮ್ರಾ 14 ರನ್ ಗೆ ನಾಲ್ಕು ವಿಕೆಟ್ ಪಡೆದ್ರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು.








