ಬೆಳಗಾವಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದೆ. ಉತ್ತರ ಪ್ರದೇಶ ಜಂಗಲ್ ರಾಜ್ಯ ಅಂತ ಪ್ರೂವ್ ಆಗಿದೆ. ಅಲ್ಲಿ ಕಾನೂನು ಇಲ್ಲ, ಪೊಲೀಸರು ಸರ್ವಾಧಿಕಾರಿ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಏನ್ ತಪ್ಪು ಮಾಡಿದ್ರು. ಸಂತ್ರಸ್ತ ಯುವತಿಗೆ ಕುಟುಂಬಕ್ಕೆ ಸ್ವಾಂತನ ಹೇಳಲು ಹೊರಟಿದ್ದರು. ರಾಹುಲ್ ಗಾಂಧಿ ಜೊತೆಗೆ ಅಲ್ಲಿನ ಪೊಲೀಸರು ಕೆಟ್ಟದಾಗಿ ವರ್ತನೆ ಮಾಡಿದ್ದಾರೆ ಎಂದರು.
ಈ ದೇಶ ಬಿಜೆಪಿ ಆಸ್ತಿ ಅಲ್ಲ. ಉತ್ತರಪ್ರದೇಶ ಯೋಗಿ ಸ್ವಂತ ಆಸ್ತಿಯಲ್ಲ. ಯೋಗಿ ಆದಿತ್ಯನಾಥ್ ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕು. ಯೋಗಿನೋ, ಭೋಗಿನೋ, ರೋಗಿನೋ ಗೊತ್ತಿಲ್ಲ. ಅವರು ಅಧಿಕಾರದಲ್ಲಿ ಇರಲು ನಾಲಾಯಕ್ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಳೆದ ವರ್ಷ ಭೀಕರ ಪ್ರವಾಹ ಬಂದಿತ್ತು. ಸಂತ್ರಸ್ತರಿಗೆ ಇವತ್ತಿನವರೆಗೆ ಮನೆ ಕಟ್ಟಲು ಆಗಿಲ್ಲ. ಯಾರಿಗೂ ಹಣ ಬಿಡುಗಡೆ ಮಾಡಿಲ್ಲ. ಈ ವರ್ಷ ಪ್ರವಾಹಕ್ಕೆ ಸರ್ಕಾರ ಒಂದೇ ಒಂದು ರೂಪಾಯಿ ಖರ್ಚು ಮಾಡಿಲ್ಲ. ಇದು ನಾಗರಿಕ ಸರ್ಕಾರ ಅಂತ ಕರೆಯಬೇಕೇ ?
ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ಆಂಬುಲೆನ್ಸ್ ಬಾಡಿಗೆಯಲ್ಲೂ ಅವ್ಯವಹಾರ ಆಗಿದೆ. 2 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಮೆಡಿಕಲ್ ಉಪಕರಣಗಳನ್ನು ಹೆಚ್ಚಿನ ಹಣಕ್ಕೆ ಖರೀದಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ, ಅಳಿಯ, ಮೊಮ್ಮಗ ಲೂಟಿ ಮಾಡಿದ್ದಾರೆ. ಯಡಿಯೂರಪ್ಪ ಚೆಕ್ ಮೂಲಕ ಲಂಚ ತಗೊಂಡಿದ್ರು. ಮೊಮ್ಮಗ ಆರ್ಟಿಜಿಎಸ್ ಮೂಲಕ ಹಣ ಲಂಚ ಪಡೆದಿದ್ದಾರೆ ಎಂದು ಟೀಕಿಸಿದ್ದಾರೆ.
ಕಟೀಲ್ ಯಕಶ್ಚಿತ್ ರಾಜಕಾರಣಿ..!
ಬ್ರಿಟಿಷ್ ರೀತಿ ಸಿದ್ದರಾಮಯ್ಯ ಆಡಳಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕಟೀಲ್ ಯಕಶ್ಚಿತ್ ರಾಜಕಾರಣಿ. ನನ್ನ ಆಡಳಿತದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಈ ಸರ್ಕಾರದಲ್ಲಿ ಅಭಿವೃದ್ಧಿ ಮಾಡಲು ಹಣ ಇದೆಯಾ ? ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಕಟೀಲ್ಗೆ ಇದೆಲ್ಲಾ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.








